ಕಾಶ್ಮೀರ ಸಮಸ್ಯೆ ಪರಿಹರಿಸುವ ವ್ಯಕ್ತಿ ನೋಬೆಲ್ ಶಾಂತಿ ಪುರಸ್ಕಾರಕ್ಕೆ ಅರ್ಹನೇ ಹೊರತು ನಾನಲ್ಲ: ಇಮ್ರಾನ್ ಖಾನ್
ಇಸ್ಲಾಮಾಬಾದ್, ಮಾ.4: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಗೆ ನೋಬೆಲ್ ಶಾಂತಿ ಪುರಸ್ಕಾರ ನೀಡಬೇಕೆಂದು ಕಳೆದ ವಾರಾಂತ್ಯ ಪಾಕಿಸ್ತಾನ ಸಂಸತ್ತಿನಲ್ಲಿ ಸಚಿವ ಫಾವದ್ ಚೌಧ್ರಿ ನಿರ್ಣಯ ಮಂಡಿಸಿದ ಬೆನ್ನಲ್ಲೇ ಸೋಮವಾರ ಈ ಬಗ್ಗೆ ಪ್ರತಿಕ್ರಿಯಿಸಿದ ಇಮ್ರಾನ್ ತಾನು ಈ ಪ್ರಶಸ್ತಿಗೆ ಅರ್ಹನಲ್ಲ ಎಂದಿದ್ದಾರೆ.
“ಕಾಶ್ಮೀರಿ ಜನರ ಆಶಯದಂತೆ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಿ ಉಪಖಂಡದಲ್ಲಿ ಶಾಂತಿ ಸಾಮರಸ್ಯ ನೆಲೆಸುವಂತೆ ಮಾಡುವ ವ್ಯಕ್ತಿ ಈ ಪ್ರಶಸ್ತಿಗೆ ಅರ್ಹರಾಗುತ್ತಾರೆ'' ಎಂದು ಸೋಮವಾರ ತಮ್ಮ 90 ಲಕ್ಷ ಫಾಲೋವರ್ಸ್ ಗೆ ಇಮ್ರಾನ್ ಟ್ವೀಟ್ ಮಾಡಿದ್ದಾರೆ.
ತನ್ನ ವಶದಲ್ಲಿರುವ ಭಾರತೀಯ ವಾಯುಸೇನೆಯ ಪೈಲಟ್, ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನು ಪಾಕಿಸ್ತಾನ ಶಾಂತಿಯ ಸಂಕೇತವಾಗಿ ಬಿಡುಗಡೆಗೊಳಿಸುವುದು ಎಂದು ಕಳೆದ ವಾರ ಇಮ್ರಾನ್ ದೇಶದ ಸಂಸತ್ತಿನಲ್ಲಿ ಘೋಷಿಸಿದಂದಿನಿಂದ #ನೋಬೆಲ್ಪೀಸ್ಫಾರ್ಇಮ್ರಾನ್ಖಾನ್ ಹ್ಯಾಶ್ ಟ್ಯಾಗ್ ಪಾಕ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿತ್ತು. ಅಭಿನಂದನ್ ಬಿಡುಗಡೆ ಶಾಂತಿಯ ಸಂಕೇತ ಎಂದು ಪಾಕಿಸ್ತಾನ ಹೇಳಿದ್ದರೆ, ಈ ಕ್ರಮ ಜಿನೀವಾ ಶೃಂಗಸಭೆಯ ಮಾರ್ಗಸೂಚಿಯಂತೆಯೇ ಇದೆ ಎಂದು ಭಾರತೀಯ ವಾಯುಪಡೆ ಹೇಳಿದೆ.