ಗುಂಟೂರು: ಎನ್ಟಿಆರ್ ಪ್ರತಿಮೆಗಳಿಗೆ ಹಾನಿ

ವಿಜಯವಾಡ, ಮಾ.4: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ಟಿ ರಾಮರಾವ್ ಅವರ ಮೂರು ಪ್ರತಿಮೆಗಳನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ ಘಟನೆ ಗುಂಟೂರಿನಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಗುಂಟೂರಿನ ಸ್ತಂಬಲಗಾರುವು, ನೆಹರೂ ನಗರ ಮತ್ತು ಎಟಿ ಅಗ್ರಹಾರಂನಲ್ಲಿರುವ ಎನ್ಟಿಆರ್ ಪ್ರತಿಮೆಗಳಿಗೆ ಹಾನಿ ಎಸಗಿರುವ ಮಾಹಿತಿ ಸೋಮವಾರ ಬೆಳಿಗ್ಗೆ ತಿಳಿಯುತ್ತಿದ್ದಂತೆಯೇ ಗುಂಟೂರಿನಲ್ಲಿ ಉದ್ವಿಗ್ನ ಸ್ಥಿತಿ ನೆಲೆಸಿತು. ಟಿಡಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ದುಷ್ಕರ್ಮಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿದರು. ಘಟನೆಯ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧೀಕ್ಷಕ ವಿಜಯರಾವ್ ಹೇಳಿದ್ದಾರೆ.
ಈ ಮಧ್ಯೆ, ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ವಿಷಯಗಳನ್ನು ಪೋಸ್ಟ್ ಮಾಡಿದ ಆರೋಪದಲ್ಲಿ ಗುಂಟೂರಿನಲ್ಲಿ ಜನಸೇವಾ ಪಕ್ಷದ ಕೆಲವು ಕಾರ್ಯಕರ್ತರನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನು ಖಂಡಿಸಿ ಅರುಂಡೇಲ್ಪೇಟೆ ಪೊಲೀಸ್ ಠಾಣೆಯ ಎದುರು ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಬಂಧಿತರ ಶೀಘ್ರ ಬಿಡುಗಡೆಗೆ ಒತ್ತಾಯಿಸಿದರು.





