ಯೋಧನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳದ ಎನ್ಡಿಎ ನಾಯಕರು: ಕ್ಷಮೆ ಕೋರಿದ ಪ್ರಶಾಂತ್ ಕಿಶೋರ್
ಪಾಟ್ನಾ, ಮಾ. 4: ಜಮ್ಮು ಹಾಗೂ ಕಾಶ್ಮೀರದಲ್ಲಿ ನಡೆದ ಎನ್ಕೌಂಟರ್ ಸಂದರ್ಭ ಮೃತಪಟ್ಟ ಸಿಆರ್ಪಿಎಫ್ ಯೋಧನಿಗೆ ಶ್ರದ್ಧಾಂಜಲಿ ಸಲ್ಲಿಸದ ಹಿನ್ನೆಲೆಯಲ್ಲಿ ಬಿಹಾರ ಸರಕಾರ ಟೀಕೆ ಎದುರಿಸಿದ ಬಳಿಕ ಪಕ್ಷದ ಪರವಾಗಿ ಜನತಾದಳದ ರಾಷ್ಟ್ರೀಯ ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ರವಿವಾರ ಕ್ಷಮೆ ಯಾಚಿಸಿದ್ದಾರೆ.
ದುಃಖದ ಸಂದರ್ಭ ನಿಮ್ಮೊಂದಿಗೆ ಇರಬೇಕಾಗಿತ್ತು. ನಮ್ಮಿಂದ ತಪ್ಪು ಸಂಭವಿಸಿರುವುದಕ್ಕೆ ವಿಷಾದಿಸುತ್ತೇವೆ ಎಂದು ಕಿಶೋರ್ ರವಿವಾರ ಟ್ವೀಟ್ ಮಾಡಿದ್ದಾರೆ.
ಜನತಾದಳ (ಸಂಯುಕ್ತ) ಬಿಹಾರದಲ್ಲಿ ಎನ್ಡಿಎ ಮೈತ್ರಿ ಪಕ್ಷ
“ಸಚಿವರು ಕೇವಲ ಅಧಿಕಾರದಲ್ಲಿ ಮುಂದುವರಿಯುವ ಬಗ್ಗೆ ಮಾತ್ರ ಗಮನ ಕೇಂದ್ರೀಕರಿಸಿದ್ದಾರೆ. ಯೋಧರ ಬಗ್ಗೆ ಅವರಿಗೆ ಎಷ್ಟು ಕಳಕಳಿ ಇದೆ ಎಂಬುದು ಇದರಿಂದ ಗೊತ್ತಾಗುತ್ತದೆ” ಎಂದು ಯೋಧನ ತಂದೆ ಚಕ್ರಾಧರ ಸಿಂಗ್ ಅವರು ಹೇಳಿರುವ ವೀಡಿಯೊವನ್ನು ಕಿಶೋರ್ ಟ್ವೀಟ್ ಮಾಡಿದ್ದಾರೆ.
“ಎನ್ಡಿಎ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪ ರ್ಯಾಲಿಯ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸಿದ್ದಾರೆ. ದೇಶಕ್ಕಾಗಿ ತಮ್ಮ ಪ್ರಾಣ ಅರ್ಪಿಸಿದ ವೀರ ಯೋಧರಿಗೆ ಅಂತಿಮ ನಮನ ಸಲ್ಲಿಸುವುದನ್ನು ಅವರು ನಿರ್ಲಕ್ಷಿಸಿದ್ದಾರೆ” ಎಂದು ಸಿಂಗ್ ವೀಡಿಯೊದಲ್ಲಿ ಹೇಳಿದ್ದಾರೆ.