ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಶಿವಕುಮಾರ್ ಸೇರಿ ನಾಲ್ವರ ವಿರುದ್ಧ ‘ಕೋಕಾ’
![ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಶಿವಕುಮಾರ್ ಸೇರಿ ನಾಲ್ವರ ವಿರುದ್ಧ ‘ಕೋಕಾ’ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಶಿವಕುಮಾರ್ ಸೇರಿ ನಾಲ್ವರ ವಿರುದ್ಧ ‘ಕೋಕಾ’](https://www.varthabharati.in/sites/default/files/images/articles/2019/03/5/180819.jpg)
ಬೆಂಗಳೂರು, ಮಾ.5: ಪೊಲೀಸ್ ಪೇದೆ ಮತ್ತು ಪಿಎಸ್ಸೈ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕಿಂಗ್ಪಿನ್ ಗುರೂಜಿ ಯಾನೆ ಶಿವಕುಮಾರ್ ಮತ್ತು ಆತನ ಮೂವರು ಸಹಚರರನ್ನು ಕೋಕಾ ಕಾಯ್ದೆಯಡಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಮೂಲದವರಾದ ಶಿವಕುಮಾರ್(67), ಸಿ.ಟಿ.ಬಸವರಾಜ್(45), ದಾವಣಗೆರೆಯ ಅಮೀರ್ ಅಹಮ್ಮದ್(38) ಹಾಗೂ ಕೊಪ್ಪಳ ಮೂಲದ ಬಸವರಾಜ್(40) ಆರೋಪಿತರು ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.
ಶಿವಕುಮಾರ್ ಸಂಘಟಿತ ರೂಪದಲ್ಲಿ ಸಹಚರರ ಗುಂಪನ್ನು ಕಟ್ಟಿಕೊಂಡು ಅಕ್ರಮ ದಂಧೆಯಲ್ಲಿ ತೊಡಗಿದ್ದ. ವಿವಿಧ ಇಲಾಖೆಗಳ ಹುದ್ದೆ ನೇಮಕಾತಿ ಪರೀಕ್ಷೆಗಳ ಮತ್ತು ಶೈಕ್ಷಣಿಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಸಕ್ರಿಯರಾಗಿದ್ದರು. ಆರೋಪಿಗಳು ಸಂಘಟಿತ ರೂಪದಲ್ಲಿ ಜನರನ್ನು ಸೇರಿಸಿಕೊಂಡು ಕೃತ್ಯ ಎಸಗಿದ್ದಾರೆ. ಸಾರ್ವಜನಿಕರಿಗೆ ನೌಕರಿ ಆಮಿಷ ತೋರಿಸಿ, ಹಣ ಸಂಪಾದನೆಯಲ್ಲಿ ತೊಡಗಿರುವುದು ತನಿಖೆಯಿಂದ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿತರ ವಿರುದ್ಧ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ‘ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯಿದೆ-2000 ಅಡಿ’ ಪ್ರಕರಣ ದಾಖಲಿಸಲಾಗಿದೆ ಎಂದು ಗಿರೀಶ್ ತಿಳಿಸಿದರು.
ಪೊಲೀಸ್ ಪೇದೆ ಮತ್ತು ಪಿಎಸ್ಸೈ ನೇಮಕಾತಿ ಪ್ರಕರಣದಲ್ಲಿ ಆರೋಪಿ ಶಿವಕುಮಾರ್ ಮತ್ತು ಬಸವರಾಜು ನ್ಯಾಯಾಂಗ ಬಂಧನದಲ್ಲಿದ್ದಾರೆ. ಜಮೀನಿನ ಮೇಲೆ ಹೊರಗಿದ್ದ ಆರೋಪಿ ಸಿ.ಟಿ.ಬಸವರಾಜುನನ್ನು ವಶಕ್ಕೆ ಪಡೆಯಲಾಗಿದೆ.