ಬಾಕಿ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಿ: ಡಾ.ಜಯಮಾಲ
ತ್ರೈಮಾಸಿಕ ಕೆಡಿಪಿ ಸಭೆ

ಉಡುಪಿ, ಮಾ.6: ಶೀಘ್ರವೇ ಮುಂದಿನ ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗುವ ಹಿನ್ನೆಲೆಯಲ್ಲಿ ಬಾಕಿ ಇರುವ ಎಲ್ಲಾ ಕಾಮಗಾರಿಗಳನ್ನು ಬೇಗನೇ ಮುಗಿಸಲು, ಪೂರ್ಣಗೊಳ್ಳದ ಟೆಂಡರ್, ವರ್ಕ್ ಆರ್ಡರ್ ಹಾಗೂ ಇತರ ಕೆಲಸಗಳನ್ನು ಶೀಘ್ರವಾಗಿ ಪೂರೈಸಿಕೊಳ್ಳುವಂತೆ ಆಯಾ ಇಲಾಖೆಗಳ ಅಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ತಿಳಿಸಿದ್ದಾರೆ.
ಬುಧವಾರ ಮಣಿಪಾಲದ ಜಿಪಂ ಸಭಾಂಗಣದಲ್ಲಿ ತನ್ನ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಕೊನೆಗೆ ಸಭೆಯ ವಿವರಗಳನ್ನು ಕರೆದ ಪತ್ರಿಕಾಗೋಷ್ಠಿಯಲ್ಲಿ ವಿವರಿಸುತ್ತಾ ಅವರು ಈ ಮಾಹಿತಿ ನೀಡಿದರು.
11 ಹೊಸ ಸರ್ವಿಸ್ ರಸ್ತೆ: ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ತೆರವುಗೊಳಿಸಿದ ಮರಗಳ ವಿವರ, ಬದಲಿ ಸ್ಥಳಗಳಲ್ಲಿ ನೆಟ್ಟ ಗಿಡಗಳ ಮಾಹಿತಿ ಹಾಗೂ ಇವುಗಳಲ್ಲಿ ಬದುಕಿ ಉಳಿದ ಮರಗಳ ಸಂಪೂರ್ಣ ವರದಿ ನೀಡುವಂತೆ ಅರಣ್ಯ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ತಿಳಿಸಲಾಗಿದೆ.
ಅಲ್ಲದೇ ಕಾಮಗಾರಿ ವಿಳಂಬವಾಗಿರುವ ಬಗ್ಗೆ ಸಂಬಂಧಿತರಿಗೆ ಎಚ್ಚರಿಕೆ ನೀಡಲಾಗಿದೆ. ಇದೀಗ ಹೆದ್ದಾರಿಯ 11 ಕಡೆಗಳಲ್ಲಿ ಹೊಸದಾಗಿ ಸರ್ವೀಸ್ರಸ್ತೆ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಿದ್ದು, ತ್ವರಿತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದರು.
ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಪರಿಶಿಷ್ಟ ಜಾತಿ/ ಪಂಗಡಗಳ ಅಭಿವೃದ್ಧಿ ನಿಗಮಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ ವಿಳಂಬವಾಗಿರುವ ತೆರೆದ ಬಾವಿ ನಿರ್ಮಾಣ, ಪಂಪ್ ಸೆಟ್ ವಿತರಣೆ, ವಿದ್ಯುದ್ದೀಕರಣವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸೂಚನೆಗಳನ್ನು ನೀಡಲಾಗಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಬೇಸಿಗೆಯ ಸಮಯದಲ್ಲಿ ಕುಡಿಯುವ ನೀರಿನ ಪೂರೈಕೆಗೆ ಕೈಕೊಳ್ಳುವ ಕ್ರಮದ ಕುರಿತಂತೆ, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾರದ ರೀತಿಯಲ್ಲಿ ಕ್ರಮ ವಹಿಸಲು ಮತ್ತು ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿಗಳ ಹಾಗೂ ತಾಲೂಕು ಟಾಸ್ಕ್ ಪೋರ್ಸ್ ಸಮಿತಿಗಳ ಸಭೆ ಕರೆದು ಮುಂಚಿತವಾಗಿ ಕಾರ್ಯಕ್ರಮ ಮ್ಮಿಕೊಳ್ಳಲು ತಿಳಿಸಲಾಗಿದೆ ಎಂದರು.
19 ಕಿಂಡಿ ಅಣೆಕಟ್ಟು: ಸಣ್ಣ ನೀರಾವರಿ ಇಲಾಖೆಯಿಂದ ಜಿಲ್ಲೆಯಲ್ಲಿ 19 ಕಿಂಡಿ ಅಣೆಕಟ್ಟು ಪೂರ್ಣಗೊಂಡಿದ್ದು, 8 ಕಿಂಡಿ ಅಣೆಕಟ್ಟು ಪ್ರಗತಿಯಲ್ಲಿದೆ. ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಬಳಸುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾಡುಹೊಳೆಯಲ್ಲಿ ಕಿಂಡಿ ಅಣೆಕಟ್ಟಿಗೆ ಅಳವಡಿಸಿರುವ ಪೈಬರ್ ಹಲಗೆಯಿಂದ ನೀರು ಸೋರಿಕೆಯಾಗುವ ಕುರಿತು ಸಭೆ ಚರ್ಚಿಸಿದ್ದು, ಸೋರಿಕೆ ತಡೆಗಟ್ಟಲು ಕೂಡಲೇ ದುರಸ್ತಿಗೆ ಕ್ರಮ ಕೈಗೊಳ್ಳಲು ಸೂಚಿಸಲಾಯಿತು ಎಂದರು.
ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ-ಕುಂದಾಪುರದಲ್ಲಿ- ಡಯಾಲಿಸೀಸ್ ಯಂತ್ರಗಳು ಕಾರ್ಯನಿರ್ವಹಿಸದಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಿದ್ದು, ಕೂಡಲೇ ರಿಪೇರಿ ನಡೆಸಿ ಬಳಸುವಂತೆ ತಿಳಿಸಲಾಗಿದೆ. ಅಲ್ಲದೇ ಕುಂದಾಪುರ ತಾಲೂಕು ಆಸ್ಪತ್ರೆಯ ಡಯಾಲಿಸಿಸ್ ಕೊಠಡಿಗೆ ಜನರೇಟರ್ ಹಾಗೂ ಹೆಚ್ಚುವರಿ ಡಯಾಲಿಸಿಸ್ ಯಂತ್ರ ಜೋಡಿಸುವ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ ಎಂದರು.
ಕಾರ್ಕಳ ತಾಲೂಕು ಬೆಳ್ಮಣ್ಣುವಿನ ಜಂತ್ರಾದಲ್ಲಿ ನೆಲಸಮಗೊಳಿಸಿರುವ 5 ಮನೆಗಳ ಕುಟುಂಬದವರಿಗೆ ಬದಲಿ ನಿವೇಶನ ನೀಡಿ, ವಸತಿ ಯೋಜನೆಯಡಿ ಮನೆ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗೆ ತಿಳಿಸಲಾಗಿದೆ ಎಂದ ಸಚಿವೆ, ಐಟಿಡಿಪಿ ಯೋಜನೆಯಲ್ಲಿ ಪರಿಶಿಷ್ಟ ವರ್ಗದವರಿಗೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ತ್ವರಿತವಾಗಿ ಪೂಣಗೊರ್ಳಿಸಲು ನಿರ್ಣಯಿಸಲಾಗಿದೆ ಎಂದರು.
ಥೀಮ್ಪಾರ್ಕ್ಗೆ 50 ಎಕರೆ: ಕಾರ್ಕಳದಲ್ಲಿರುವ ಕೋಟಿ ಚೆನ್ನಯ್ಯ ಥೀಂ ಪಾರ್ಕ್ ನಿರ್ಮಾಣಕ್ಕೆ 10 ಎಕರೆ ಜಾಗವನ್ನು ಈಗಾಗಲೇ ಮಂಜೂರು ಮಾಡಲಾಗಿದ್ದು, ಹೆಚ್ಚುವರಿ 50 ಎಕರೆ ಮಂಜೂರು ಮಾಡಿ, ಥೀಂ ಪಾರ್ಕ್ ನಲ್ಲಿ ಕೋಟಿ ಚೆನ್ನಯ್ಯರು ಬೆಳೆದು ಬಂದ ಜೀವನ ಚರಿತ್ರೆಯ ಕುರಿತು ಮಾಹಿತಿ ನೀಡುವ ವ್ಯವಸ್ಥೆ ಆಗಬೇಕು. ಅಲ್ಲದೇ ಇಲ್ಲಿಗೆ ಬರುವ ಪ್ರವಾಸಿಗರಿಗೆ ಪಾರ್ಕಿಂಗ್, ಪುಡ್ಕೋರ್ಟ್, ಚಿರ್ಲ್ಡನ್ ಬುಕ್ ಪಾರ್ಕ್ ಹಾಗೂ ಟಾಯ್ ಟ್ರೈನ್ ಹಾಗೂ ಸೌಂಡ್-ಲೈಟ್ ವ್ಯವಸ್ಥೆ ನಿರ್ಮಾಣದ ಜನೆ ಹಾಕಿಕೊಳ್ಳಲಾಗಿದೆ ಎಂದರು.
ತೋಟಗಾರಿಕಾ ಇಲಾಖೆಯಿಂದ ಅಡಿಕೆ ಕೊಳೆರೋಗದ ಸಮಸ್ಯೆಗೆ ಸಿಲುಕಿದ 6253 ರೈತರಿಗೆ ಒಟ್ಟು 8.7 ಕೋಟಿ ರೂ.ಪರಿಹಾರ ವಿತರಿಸಲಾಗಿದೆ ಎಂದು ತೋಟಗಾರಿಕಾ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ 28 ಹೆಚ್ಚುವರಿ ಅಂಗನವಾಡಿ ಕೇಂದ್ರಗಳ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದೂ ಡಾ.ಜಯಮಾಲ ನುಡಿದರು.
ಸಭೆಯಲ್ಲಿ ಕಾರ್ಕಳ ಶಾಸಕ ವಿ ಸುನೀಲ್ ಕುಮಾರ್, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಕೋಟ ಶ್ರೀನಿವಾಸ ಪೂಜಾರಿ, ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧೂ ಬಿ. ರೂಪೇಶ್, ಜಿಲ್ಲಾ ಎಸ್ಪಿ ನಿಶಾ ಜೇಮ್ಸ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ ಉಪಸ್ಥಿತರಿದ್ದರು.







