ಮಹಿಳಾ ಸ್ವಾಭಿಮಾನಿ ಬದುಕಿಗಾಗಿ ಸರ್ಕಾರದಿಂದ ಹಲವಾರು ಯೋಜನೆ-ಶಾಸಕ ಮಠಂದೂರು
ವಿಶ್ವ ಮಹಿಳಾ ದಿನಾಚರಣೆ

ಪುತ್ತೂರು, ಮಾ. 8: ಸಮಾಜದಲ್ಲಿ ಪರಿವರ್ತನೆಯ ರೂವಾರಿ ಮಹಿಳೆ ಎನ್ನುವುದನ್ನು ಅರಿತಿರುವ ಕೇಂದ್ರ ಸರಕಾರ ಬೇಟಿ ಬಜಾವೋ, ಬೇಟಿ ಪಡಾವೋ ಯೋಜನೆಯ ಮೂಲಕ ಹೆಣ್ಣು ಮಕ್ಕಳನ್ನು ರಕ್ಷಿಸಿ ಶಿಕ್ಷಣ ನೀಡುವ ಜಾಗೃತಿ ಮೂಡಿಸುತ್ತಿದೆ. 12 ಕೋಟಿ ಮಂದಿಗೆ ಪ್ರಯೋಜನವಾಗುವ ಉಜ್ವಲಾ ಯೋಜನೆಯನ್ನು ಜಾರಿಗೊಳಿಸಿದೆ. ಮಹಿಳೆಯರ ಸ್ವಾಭಿಮಾನಿ ಬದುಕಿಗಾಗಿ ಸರಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಪುತ್ತೂರು ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಶುಕ್ರವಾರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಜವಾಬ್ದಾರಿ ನಿರ್ವಹಣೆಯಲ್ಲಿ ಸಾಮರ್ಥ್ಯ ಪ್ರದರ್ಶನದೊಂದಿಗೆ ಮಹಿಳೆ ತಾನು ಪುರುಷರಿಗಿಂತಲೂ ಮಿಗಿಲು ಎನ್ನುವುದನ್ನು ಸಾಭೀತುಪಡಿಸಿದ್ದಾಳೆ. ಇತಿಹಾಸದ ಅಬ್ಬಕ್ಕರಾಣಿ, ಕಿತ್ತೂರು ರಾಣಿ ಚೆನ್ನಮ್ಮನಿಂದ ಹಿಡಿದು ದೇಶದ ಪ್ರಥಮ ಮಹಿಳಾ ರಕ್ಷಣಾ ಸಚಿವೆಯಾಗಿ ಸರ್ಜಿಕಲ್ ಸ್ಟೈಕ್ನಂತಹ ಮಹತ್ವದ ಜವಾಬ್ದಾರಿ ನಿಭಾಯಿಸಿದ ನಿರ್ಮಲಾ ಸೀತಾರಾಮ್, ವಿದೇಶಾಂಗ ಖಾತೆಯನ್ನು ಯಶಸ್ವಿಯಾಗಿ ನಿರ್ವಹಿಸುವ ಸುಷ್ಮಾ ಸ್ವರಾಜ್ರಂತವರು ತಮ್ಮ ಸಾಮರ್ಥ್ಯವನ್ನು ಸಾಭೀತುಪಡಿಸಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಾಮಾಜಿಕ ಕಾರ್ಯಕರ್ತೆ, ಬಯಲು ಶೌಚ ಮುಕ್ತಗೊಳಿಸಲು ಹೋರಾಟ ನಡೆಸಿದ ಭವ್ಯಾ ರಾಣಿ ಅನಂತಾಡಿ ಮಾತನಾಡಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಸಂದರ್ಭದಲ್ಲಿ ತುಮಕೂರಿಗೆ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದಾಗ ಬಯಲು ಶೌಚ ಸಮಸ್ಯೆ ಕಂಡು ಅನಂತರದಲ್ಲಿ ಕೆಲಸ ತೊರೆದು ಅಲ್ಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದ್ದೇನೆ. 2010 ರಿಂದಲೇ ಶೌಚಾಲಯ ನಿರ್ಮಾಣ ಜಾಗೃತಿಗೆ ತೊಡಗಿಸಿಕೊಂಡಿದ್ದರೂ ಕೇಂದ್ರ ಸರಕಾರದ ಸ್ವಚ್ಛ ಭಾರತ್ ಯೋಜನೆ ಜಾರಿಗೊಂಡ ಬಳಿಕ ಗುರುತಿಸಿಕೊಳ್ಳುವ ಕೆಲಸ ಆಗಿದೆ ಎಂದು ಹೇಳಿದರು.
ರಾಜ್ಯದಲ್ಲಿ 10 ಕೋಟಿ ಶೌಚಾಲಯ ನಿರ್ಮಾಣ ಆಗಿದೆ. ಆದರೆ ಶೇ. 60 ರಷ್ಟು ಉಪಯೋಗ ಆಗುತ್ತಿಲ್ಲ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಹೊಂದಿರುವ ಸ್ವರ್ಗದಂತಹ ಜಿಲ್ಲೆ. ಆದರೆ ಉಳಿದ ಕೆಲವು ಜಿಲ್ಲೆಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ಕಾಲೇಜಿನ ವತಿಯಿಂದ ಮಹಿಳಾ ಸಾಧಕಿ ಭವ್ಯಾರಾಣಿ ಅವರನ್ನು ಶಾಸಕ ಸಂಜೀವ ಮಠಂದೂರು ಸನ್ಮಾನಿಸಿದರು. ಬಳಿಕ ಭವ್ಯಾ ರಾಣಿ ಅವರು ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದರು.
ಕಾಲೇಜಿನ ಪ್ರಾಂಶುಪಾಲ ಝೇವಿಯರ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ| ನರೇಂದ್ರ ರೈ ದೇರ್ಲ, ಸಾಂಸ್ಕøತಿಕ ಸಂಘದ ಸಂಚಾಲಕ ಪ್ರೋ. ಸ್ಟೀವನ್ ಕ್ವಾರ್ಡಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಜೋಸ್ಲಿನ್ ಸ್ವಾಗತಿಸಿ, ವಂದಿಸಿದರು.







