ರಾಜಕೀಯದಲ್ಲಿ ಮಹಿಳೆಯರ ನಿರ್ಣಯಕ್ಕೆ ಮನ್ನಣೆ ಸಿಗಲಿ: ಕರಂದ್ಲಾಜೆ

ಉಡುಪಿ, ಮಾ.8: ರಾಜಕೀಯ ಕ್ಷೇತ್ರ, ದೇವಸ್ಥಾನದ ಆಡಳಿತ ಕಮಿಟಿ ಸೇರಿ ದಂತೆ ವಿವಿಧ ಸಂಘಟನೆಗಳಲ್ಲಿರುವ ಮಹಿಳೆಯರ ಯಾವುದೇ ಮಾತು, ನಿರ್ಣಯವನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಆದುದರಿಂದ ಸರಕಾರ ಸೇರಿ ದಂತೆ ಮಹಿಳೆಯರು ಇರುವ ಸಂಘಟನೆಗಳು ಅವರ ಮಾತಿಗೂ ಗೌರವ ನೀಡುವ ಕೆಲಸ ಮಾಡಬೇಕು ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸ್ತ್ರೀಶಕ್ತಿ ಒಕ್ಕೂಟ ಹಾಗೂ ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಆಯೋಜಿಸಲಾದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಜಿಲ್ಲಾ ಸ್ತ್ರೀಶಕ್ತಿ ಸಮಾವೇಶದಲ್ಲಿ ಅವರು ಮಾತ ನಾಡುತಿದ್ದರು.
ಮಹಿಳೆಯರಿಗೆ ಪುರುಷರ ಅನುಕಂಪ ಬೇಕಾಗಿಲ್ಲ. ಗೌರವ ಸಿಗುವ ಕಾರ್ಯ ಆಗಬೇಕು. ಪುರುಷರು ಮಹಿಳೆಯರ ನೋವು, ಭಾವನೆ ಅರ್ಥ ಮಾಡಿಕೊಳ್ಳ ಬೇಕು. ಶಿಕ್ಷಣ ನೀಡುವುದರ ಜೊತೆಗೆ ಆರ್ಥಿಕ ಸದೃಢವಾದರೆ ಮಹಿಳೆಯರಿಗೆ ಶಕ್ತಿ ಬರಲು ಸಾಧ್ಯ. ಮಹಿಳೆಯರ ಶಕ್ತಿ ಸಮಾಜಕ್ಕೆ ಸದ್ಬಳಕೆ ಆಗಬೇಕು ಎಂದು ಅರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ನಾಲ್ಕು ಗೋಡೆ ಮಧ್ಯೆ ಇದ್ದ ಮಹಿಳೆಯರ ಮನಸ್ಥಿತಿ ಇಂದು ಬದಲಾಗಿದೆ. ಸ್ವಾವಲಂಬಿಯಾಗಿ ಬದುಕು ನಡೆಸುತ್ತ, ಅಧಿಕಾರಿಯುತವಾಗಿ ತಮ್ಮ ಹಕ್ಕು ಗಳನ್ನು ಕೇಳುತ್ತಿದ್ದಾರೆ. ಇದರಲ್ಲಿ ಸ್ವಸಹಾಯ ಸಂಘಗಳ ಪಾತ್ರ ಮಹತ್ತರವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮವನ್ನು ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಉದ್ಘಾಟಿಸಿ ದರು. ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಜಿಪಂ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಸಿಂಧು ಬಿ.ರೂಪೇಶ್, ಜಿಪಂ ಸದಸ್ಯರಾದ ಶಿಲ್ಪಾ ಸುವರ್ಣ, ಗೀತಾಂಜಲಿ ಸುವರ್ಣ, ರೇಶ್ಮಾ ಉದಯ ಶೆಟ್ಟಿ, ಒಕ್ಕೂಟದ ಅಧ್ಯಕ್ಷೆ ಸರಳಾ ಕಾಂಚನ್, ವಸಂತಿ ರಾವ್ ಕೊರಡ್ಕಲ್, ರಾಧಾದಾಸ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಂಗೋಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸ ಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೋನ್ಸಾಲಿಸ್ ಸ್ವಾಗತಿಸಿದರು. ವೀಣಾ ಕಾರ್ಯಕ್ರಮ ನಿರೂಪಿಸಿದರು.
‘ಧಾರಾವಾಹಿ ವೀಕ್ಷಣೆ ತ್ಯಾಗ ಮಾಡಿ’
ಮಹಿಳೆಯರು ಇಂದು ಮನೆಯಲ್ಲಿ ಮಾತ್ರವಲ್ಲ ಸಮಾಜದಲ್ಲೂ ಶೋಷಣೆಗೆ ಒಳಗಾಗುತ್ತಿದ್ದಾರೆ. ಮಹಿಳೆಯರಿಗೆ ಮನೆ ಹಾಗೂ ಸಮಾಜದಲ್ಲಿ ಗೌರವ ಸ್ಥಾನ ನೀಡುವ ಜವಾಬ್ದಾರಿ ಪುರುಷರ ಮೇಲಿದೆ. ಮಹಿಳೆಯರು ಧಾರಾವಾಹಿ ದಾಸರಾಗದೆ ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಪೋಷಕರ ತ್ಯಾಗ ಮಕ್ಕಳ ಉತ್ತಮ ಭವಿಷ್ಯ ಮತ್ತು ದೊಡ್ಡ ಸಾಧನೆಗೆ ಕಾರಣವಾಗುತ್ತದೆ. ನನ್ನ ತಂದೆ ತಾಯಿ 25ವರ್ಷಗಳ ಕಾಲ ನಮಗಾಗಿ ಟಿವಿ ವೀಕ್ಷಣೆಯನ್ನೇ ತ್ಯಾಗ ಮಾಡಿದ್ದರು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದರು.







