ಕಾರ್ಕಳ: ಜಿಲ್ಲಾ ಗಡಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ

ಉಡುಪಿ, ಮಾ.8: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹಾಗೂ ಪೊಲೀಸ್ ಜಿಲ್ಲಾ ವರಿಷ್ಠಾಧಿ ಕಾರಿ ನಿಶಾ ಜೇಮ್ಸ್, ಸಹಾಯಕ ಚುನಾವಣಾಧಿಕಾರಿ, ಕಾರ್ಕಳದ ತಹಶೀಲ್ದಾರ್, ಹೆಬ್ರಿ ತಾಲೂಕಿನ ತಹಶೀಲ್ದಾರ್, ಕಾರ್ಕಳ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು, ಎಲ್ಲಾ ಸೆಕ್ಟರ್ ಅಧಿಕಾರಿಗಳ ಜೊತೆಗೆ ಗುರುವಾರ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಿಲ್ಲಾ ಗಡಿ ಪ್ರದೇಶಗಳಲ್ಲಿ ಚೆಕ್ಪೋಸ್ಟ್ ನಿರ್ಮಾಣ ಮಾಡುವ ಸಂಬಂಧ ಕಾರ್ಕಳ ತಾಲೂಕಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ನಾಡ್ಪಾಲು ಗ್ರಾಮದ ಸೋಮೇಶ್ವರ ಚೆಕ್ಪೋಸ್ಟ್ಗೆ ಮತ್ತು ಮುಡಾರು ಗ್ರಾಮದ ಬಜಗೋಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸ್ಥಳೀಯ ಮತದಾರರು ಗುರುತು ಚೀಟಿಯನ್ನು ಹೊಂದಿರುವ ಬಗ್ಗೆ ಪರಿಶೀಲಿಸಿದರು.
ಅನಂತರ ಅವರು ಜಿಲ್ಲಾ ಗಡಿ ಪ್ರದೇಶವಾದ ಈದು ಗ್ರಾಮಕ್ಕೆ ಭೇಟಿ ನೀಡಿದರು. ಅಲ್ಲಿಂದ ಮಾಳ ಗ್ರಾಮದ ಜಿಲ್ಲಾ ಗಡಿ ಪ್ರದೇಶ ಎಸ್.ಕೆ ಬಾರ್ಡರ್ ಹಾಗೂ ಸಾಣೂರು ಗ್ರಾಮದ ಮುರತಂಗಡಿ ಚೆಕ್ಪೋಸ್ಟ್ಗೆ ಭೇಟಿ ನೀಡಿ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರೊಂದಿಗೆ ಚರ್ಚಿಸಿ ಈ ಸ್ಥಳಗಳಲ್ಲಿ ಚೆಕ್ಪೋಸ್ಟ್ ನಿರ್ಮಾಣ ಮಾಡುವ ಬಗ್ಗೆ ಸೂಚನೆಗಳನ್ನು ನೀಡಿದರು.
ಕಾರ್ಕಳ ತಾಲೂಕು ಕಚೇರಿಗೆ ಭೇಟಿ ನೀಡಿ ಸೆಕ್ಟರ್ ಅಧಿಕಾರಿಗಳ ಸಭೆ ನಡೆಸಿದರು. ಎಂಸಿಸಿ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಬಗ್ಗೆ ಹಾಗೂ ಯಾವುದೇ ಲೋಪದೋಷವಿಲ್ಲದೆ ಚುನಾವಣಾ ಕಾರ್ಯವನ್ನು ಎಚ್ಚರಿಕೆ ಯಿಂದ ನಡೆಸುವಂತೆ ಹಾಗೂ ಕೆಪಿಎಸ್ಐಎಸ್ ಆ್ಯಪ್ ಮೂಲಕ ಎಲ್ಲವನ್ನೂ ದಾಖಲಿಸುವಂತೆ ಸೆಕ್ಟರ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.







