ಮಹಿಳಾ ಸಬಲೀಕರಣಕ್ಕಾಗಿ ಕುಟುಂಬ ಸದಸ್ಯರ ಮನಸ್ಥಿತಿ ಬದಲಾಗಬೇಕು: ಲೇಖಕಿ ಪ್ರತಿಭಾ ನಂದಕುಮಾರ್
ಬೆಂಗಳೂರು, ಮಾ. 8: ಮಹಿಳಾ ಸಬಲೀಕರಣಕ್ಕಾಗಿ ಸಮಾಜ ಬದಲಾಗಬೇಕಾದರೆ ಮೊದಲು ಕುಟುಂಬ ಸದಸ್ಯರ ಮನಸ್ಥಿತಿ ಬದಲಾಗಬೇಕು ಎಂದು ಲೇಖಕಿ ಪ್ರತಿಭಾ ನಂದಕುಮಾರ್ ತಿಳಿಸಿದರು.
ಶುಕ್ರವಾರ ಬೆಂಗಳೂರು ವಿಶ್ವವಿದ್ಯಾಲಯದ ವೆಂಕಟಗಿರಿಗೌಡ ಸಭಾಂಗಣದಲ್ಲಿ ಮಹಿಳಾ ಅಧ್ಯಯನ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪುರುಷ ಪ್ರಧಾನ ಕುಟುಂಬ ವ್ಯವಸ್ಥೆಯಲ್ಲಿ ಮಹಿಳೆಗೆ ತನ್ನದೇ ಆದ ಇತಿಮಿತಿಗಳಿವೆ. ಪುರುಷರಂತೆ ಶಿಕ್ಷಣ, ವ್ಯವಹಾರದಲ್ಲಿ ಭಾಗಿಯಾಗದೆ, ಅಡುಗೆ ಮನೆಗೆ ಸೀಮಿತವಾಗಿದ್ದಾಳೆ. ಈ ವ್ಯವಸ್ಥೆ ಬದಲಾಗಬೇಕಾದರೆ ಕುಟುಂಬ ಸದಸ್ಯರ ಮನಸ್ಥಿತಿ ಬದಲಾಗಬೇಕು ಎಂದರು.
ಹೆಣ್ಣು ಮನಸ್ಸು ಮಾಡಿದರೆ ಏನನ್ನಾದರೂ, ಸಾಧಿಸಬಲ್ಲಳು ಎಂದು ತೋರಿಸಿದ್ದಾಳೆ. ಎಲ್ಲಾ ಕ್ಷೇತ್ರದಲ್ಲಿಯೂ ಛಾಪು ಮೂಡಿಸಿದ್ದು, ಆಧುನಿಕ ಯುಗದಲ್ಲಿಯೂ ಸಮಾನತೆ ಸಿಕ್ಕಿಲ್ಲ. ಅಶ್ಲೀಲ ಪದಗಳಲ್ಲಿ ಹೆಣ್ಣನ್ನು ಬೈದರೆ ಅವಳು ಕುಗ್ಗುತ್ತಾಳೆ ಎಂಬ ಮನೋಭಾವ ಪುರುಷರಲ್ಲಿದ್ದು, ನಿರಂತರವಾಗಿ ಶೋಷಣೆ ಎದುರಿಸುತ್ತಿದ್ದಾಳೆ. ಒತ್ತಾಯಪೂರ್ವಕವಾಗಿ ಕೆಲವು ನಿರ್ಬಂಧಗಳನ್ನು ವಿಧಿಸಲಾಗುತ್ತಿದ್ದು, ಮಹಿಳಾ ಸಬಲೀಕರಣವಾಗಬೇಕಿದೆ ಎಂದರು.
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಮಾತನಾಡಿ, ಜಪಾನಿನಲ್ಲಿ 50 ಸಾವಿರ ಜನ ನೂರು ವರ್ಷಕ್ಕಿಂತ ಮೇಲ್ಪಟ್ಟವರಿದ್ದು, ಅದರಲ್ಲಿ ಶೇ.95ರಷ್ಟು ಮಹಿಳೆಯರಿದ್ದಾರೆ. ಮಹಿಳೆಯರು ಸದಾ ಚೇತನ್ಯದಿಂದ ಕೆಲಸ ಮಾಡುವುದರಿಂದ ಹೆಚ್ಚು ವರ್ಷ ಬದುಕುತ್ತಾರೆ. ಒಂದು ಹೆಣ್ಣಿಗೆ ಶಿಕ್ಷಣ ನೀಡಿದರೆ ಇಡೀ ಕುಟುಂಬವೇ ಬದಲಾಗುತ್ತದೆ. ಸಮಾಜದಲ್ಲಿ ಹೆಣ್ಣಿಗೆ ಗೌರವ ಸ್ಥಾನವಿದ್ದು, ಆರ್ಥಿಕ, ಸಾಮಾಜಿಕ, ರಾಜಕೀಯ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆ ಗುರುತಿಸಿಕೊಂಡು ಸೇವೆ ಸಲ್ಲಿಸುತ್ತಿದ್ದಾಳೆ ಎಂದರು.
ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಬಿ.ಕೆ.ರವಿ ಮಾತನಾಡಿ, ಕೆಲ ದೇಶಗಳಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ನೀಡಿಲ್ಲ. ಇನ್ನು ಕೆಲ ದೇಶಗಳಲ್ಲಿ ದಶಕಗಳ ಹಿಂದೆಯಷ್ಟೆ ಮತದಾನ ಹಕ್ಕು ನೀಡಲಾಗಿದೆ. ಆದರೆ ಭಾರತದಲ್ಲಿ ಸಂವಿಧಾನ ಆರಂಭದಿಂದ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಲಾಗಿದೆ. ಪುರುಷ ಪ್ರಧಾನ ಸಮಾಜದಲ್ಲಿ ಪುರುಷರೇ ಹೆಚ್ಚು ಎಂಬ ಮನೋಭಾವವಿದೆ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಮಾಜದಲ್ಲಿ ಶೋಷಿತ ವರ್ಗವಿದ್ದರೆ ಅದು ಮಹಿಳಾ ವರ್ಗ. ಆದ್ದರಿಂದ ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಪ್ರೋತ್ಸಾಹಿಸುವ ಮೂಲಕ ಸಮಾನತೆಯ ಸಮಾಜ ಕಟ್ಟಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಸಿ. ಶಿವರಾಜು ಸೇರಿದಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು