ಕಳೆದು ಹೋದ ಅವಕಾಶಗಳ ಬಗ್ಗೆ ಚಿಂತಿಸಿ ಫಲವಿಲ್ಲ: ಸಚಿವ ಖಾದರ್
ದ.ಕ.ಜಿಲ್ಲಾ ಯುವ ಸಮಾವೇಶ- ಕ್ರೀಡಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ

ಮಂಗಳೂರು, ಮಾ.9: ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳುವ ಕುರಿತು ವಿದ್ಯಾರ್ಥಿ ಜೀವನದಲ್ಲೇ ಸಿದ್ಧತೆ ಮಾಡಿಕೊಳ್ಳಬೇಕು. ವಯಸ್ಸಾದ ಬಳಿಕ ಕಳೆದು ಹೋದ ಅವಕಾಶಗಳ ಬಗ್ಗೆ ಚಿಂತಿಸಿ ಫಲವಿಲ್ಲ. ಹಾಗಾಗಿ ನಮ್ಮೆಳಗಿರುವ ಸಂಕುಚಿತ ಮನೋಭಾವವನ್ನು ಬದಿಗೊತ್ತಿ ದೇಶದ ಅಭಿವೃದ್ಧಿಗೆ ನಮ್ಮಿಂದಾಗುವಷ್ಟು ಕೊಡುಗೆ ನೀಡಲು ಮುಂದಾಗಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರೂ ಯುವ ಕೇಂದ್ರ ಮಂಗಳೂರು, ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾನಿಲಯ, ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇವುಗಳ ಸಹಯೋಗದಲ್ಲಿ ಶನಿವಾರ ನಗರದ ರವೀಂದ್ರ ಕಲಾ ಭವನದಲ್ಲಿ ಜರುಗಿದ ಜಿಲ್ಲಾ ಯುವ ಸಮಾವೇಶ, ಜಿಲ್ಲಾ ಯುವ ಮಂಡಲ ಪ್ರಶಸ್ತಿ ಪ್ರದಾನ, ಕ್ರೀಡಾ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಲ್ಲೇ ಹಲವು ಕಂಪೆನಿಗಳು ಉದ್ಯೋಗವಕಾಶಗಳನ್ನು ಸೃಷ್ಟಿಸುತ್ತದೆ. ಸ್ವಂತ ಉದ್ಯೋಗ ಮಾಡಲು ಸಾಲ ಇನ್ನಿತರ ಅವಕಾಶಗಳನ್ನು ನೀಡುತ್ತಿದೆ. ಆದರೆ ಬಹುತೇಕ ಯುವಕರು ವಿದೇಶಗಳಿಗೆ ಉದ್ಯೋಗ ಅರಸಿ ಹೋಗುತ್ತಿದ್ದಾರೆ. ದೇಶದ ಸಂಸ್ಕೃತಿ, ಆಚಾರ-ವಿಚಾರಗಳ ಮೌಲ್ಯ ವಿದೇಶಗಳಿಗೆ ಹೋದಾಗ ಅರಿವಾಗುತ್ತದೆ. ಜಗತ್ತಿನಲ್ಲೇ ಭಾರತವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಯುವಜನಾಂಗ ಪಣ ತೊಡಬೇಕಾಗಿದೆ ಎಂದು ಯು.ಟಿ.ಖಾದರ್ ನುಡಿದರು.
ಅಪ್ಪ ಶಾಸಕನೆಂದು ಕುಳಿತಿದ್ದರೆ...
ಎಸ್ಡಿಎಂ ಕಾನೂನು ಕಾಲೇಜಿನಲ್ಲಿ ಪದವಿ ಮಾಡುತ್ತಿದ್ದ ವೇಳೆ ನಾನು ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯನಾಗಿದ್ದೆ. ಅದರಲ್ಲೂ ಎನ್ನೆಸ್ಸೆಸ್ ಶಿಬಿರಗಳಲ್ಲಿ ತಪ್ಪದೆ ಭಾಗವಹಿಸುತ್ತಿದ್ದೆ. ರಸ್ತೆಗಳಿಲ್ಲದ ಊರುಗಳಲ್ಲಿ ರಸ್ತೆ ಮಾಡಲು ಎನ್ನೆಸ್ಸೆಸ್ ವಿದ್ಯಾರ್ಥಿಗಳಾದ ನಾವು ಹೋಗುತ್ತಿದ್ದೆವು. ತಂದೆ ಶಾಸಕರಾಗಿದ್ದ ಆ ಕಾಲದಲ್ಲಿ ನಾನೂ ರಸ್ತೆ ಅಗೆಯುತ್ತಿದ್ದೆ. ನೆಲದ ಮೇಲೆ ಮಲಗುತ್ತಿದ್ದೆ. ನನ್ನ ಸಹಪಾಠಿಗಳು ಶಾಸಕನ ಮಗನಾದ ನಿನಗೆ ಇದೆಲ್ಲಾ ಬೇಕಾ ಎಂದು ಕೇಳುತ್ತಿದ್ದರು. ಅದಕ್ಕೆಲ್ಲಾ ನಾನು ತಲೆ ಕೆಡಿಸಿಕೊಳ್ಳದೆ ನನ್ನ ಕೆಲಸ ಮಾಡುತ್ತಿದ್ದೆ. ಅಂದು ನಾನು ಸುಮ್ಮನೆ ಕುಳಿತಿದ್ದರೆ ಇಂದು ನಾನು ಸಚಿವನಾಗುತ್ತಿರಲಿಲ್ಲ. ಹಾಗಾಗಿ ವಿದ್ಯಾರ್ಥಿ ಜೀವನದಲ್ಲೇ ಭವಿಷ್ಯದ ಕನಸು ಕಾಣಬೇಕು ಎಂದು ಯು.ಟಿ.ಖಾದರ್ ಎಂದರು.
ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಉದಯ್ ಕುಮಾರ್ ಇರ್ವತ್ತೂರು ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಡಾ. ಕೆ. ಕಿಶೋರಿ ನಾಯಕ್, ಜಿಲ್ಲಾ ಯುವಜನ ಒಕ್ಕೂಟದ ಸುರೇಶ್ ರೈ, ಎನ್ನೆಸ್ಸೆಸ್ ವಿಭಾಗದ ವಿನಿತಾ, ನೆಹರೂ ಯುವ ಕೇಂದ್ರದ ರಘುವೀರ್ ಸೂಟರ್ಪೇಟೆ, ಎನ್.ಜಿ. ಮೋಹನ್ ಮತ್ತಿತರರು ಉಪಸ್ಥಿತರಿದ್ದರು.







