ಅನುಭವಿಗಳ ಮಾರ್ಗದರ್ಶನ ಯುವ ಸಂಶೋಧಕರಿಗೆ ಸಿಗುತ್ತಿಲ್ಲ: ಸಾಹಿತಿ ಡಾ.ಜಿ.ಅಶ್ವತ್ಥನಾರಾಯಣ
![ಅನುಭವಿಗಳ ಮಾರ್ಗದರ್ಶನ ಯುವ ಸಂಶೋಧಕರಿಗೆ ಸಿಗುತ್ತಿಲ್ಲ: ಸಾಹಿತಿ ಡಾ.ಜಿ.ಅಶ್ವತ್ಥನಾರಾಯಣ ಅನುಭವಿಗಳ ಮಾರ್ಗದರ್ಶನ ಯುವ ಸಂಶೋಧಕರಿಗೆ ಸಿಗುತ್ತಿಲ್ಲ: ಸಾಹಿತಿ ಡಾ.ಜಿ.ಅಶ್ವತ್ಥನಾರಾಯಣ](/images/placeholder.jpg)
ಬೆಂಗಳೂರು, ಮಾ.10: ಪ್ರತಿಭಾವಂತ ಹಿರಿಯ ಅನುಭವಿಗಳ ಮಾರ್ಗದರ್ಶನದ ಕೊರತೆಯಿಂದಾಗಿ ಸಂಶೋಧನೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಒಂದು ರೀತಿಯಲ್ಲಿ ಅನಾಥರಾಗಿದ್ದಾರೆ ಎಂದು ಹಿರಿಯ ಸಾಹಿತಿ ಪ್ರೊ.ಜಿ.ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಸಿದ್ಧಮಂಗಳಾ ಸೇವಾ ಕೇಂದ್ರ ಆಯೋಜಿಸಿದ್ದ ‘ಜಗದಗಲ ಮಂಟಪ’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಅಧಿಕೃತ ಸಂಶೋಧಕರಿಗೆ ಅರ್ಹತೆ ಸಾಲದು. ಅನಧಿಕೃತ ಸಂಶೋಧಕರಿಗೆ ಅವಕಾಶವಿಲ್ಲ ಎಂಬ ದುಸ್ಥಿತಿ ಪರಿಹಾರವಾದಲ್ಲಿ ಸಂಶೋಧನಾ ಬರಹಗಳು ಉತ್ತಮ ಮಟ್ಟಕ್ಕೆ ಏರಲಿವೆ. ಈ ನಿಟ್ಟಿನಲ್ಲಿ ಅಸಹಾಯಕ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುತ್ತಿರುವ ಡಾ.ಶೀಲಾದೇವಿ ಎಸ್.ಮಳೀಮಠ ಅವರ ಕಾರ್ಯ ನಿಜಕ್ಕೂ ಪ್ರಶಂಸನೀಯ. ಅವರ ಸಂಪಾದತಕ್ವದಲ್ಲಿ ಮೂಡಿ ಬಂದಿರುವ ಜಗದಗಲ ಮಂಟಪ ಕೃತಿ ಅತ್ಯದ್ಭುತ ಸಂಶೋಧನಾ ಮೀಮಾಂಸೆಯಾಗಿ ಹೊರಹೊಮ್ಮಿದೆ ಎಂದರು.
ಕೇವಲ ಪದವಿಗಾಗಿ ಅಧ್ಯಯನ ಮಾಡುವ ಸಂಶೋಧಕರೇ ನಮ್ಮಲ್ಲಿ ಹೆಚ್ಚಾಗಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಬಲ್ಲ ಸಂಶೋಧಾನಾತ್ಮಕ ಸಾಹಿತಿಗಳ ಅವಶ್ಯವಿದೆ. ನಮ್ಮಲ್ಲಿ ಬಿಡುವಿನ ವೇಳೆಯಲ್ಲಿ ಕೆಲಸಮಾಡುವ ಸಂಶೋಧಕರೇ ಹೆಚ್ಚಾಗಿದ್ದು, ಕೆಲ ಸಂಶೋಧಕರು ಕಾಲ ಮಿತಿಯಲ್ಲಿ ಕೆಲಸ ಮಾಡುವುದು ಹಾಗೂ ನಾನಾ ಕಾರಣಗಳಿಂದ ಪಾರ್ಟ್ ಟೈಮ್ ಬಿಝಿನೆಸ್ ಮಾಡಿಕೊಂಡಿದ್ದಾರೆ. ಸಂಶೋಧನೆ ಪೂರ್ಣ ಪ್ರಮಾಣ ಕೆಲಸವೇ ಹೊರತು ಅರೆಹೊತ್ತಿನ ಕೆಲಸವಲ್ಲ. ಮೂಲ ಗ್ರಂಥವನ್ನು ಅಧ್ಯಯನ ಮಾಡಿ ಶ್ರೇಷ್ಠ ಲೇಖನದ ಮೂಲದ ಅಮೂಲ್ಯವಾದ ಕೊಡುಗೆ ನೀಡುವವರೇ ನಮ್ಮಲ್ಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಮಾತನಾಡಿ, ಲೇಖಕರು ಸಂಶೋಧನಾತ್ಮ ಸಾಹಿತ್ಯಗಳ ಮಹತ್ವವೇನೆಂಬುದನ್ನು ಅರಿಯಬೇಕಿದೆ. ಸಂಶೋಧನಾ ಕ್ಷೇತ್ರದಲ್ಲಿ ತಿದ್ದಿ, ತೀಡುವ ಪರಂಪರೆ ಮರುಕಳಿಸಬೇಕು. ಸಂಶೋಧನಾ ಸಾಹಿತ್ಯ ರಚಿಸುವವನಿಗೆ ಮೂಲಗ್ರಂಥ ಅಧ್ಯಯನ, ಭಾಷೆಯ ಮೇಲಿನ ಹಿಡಿತ,ಪದ ಬಳಕೆ ಹಾಗೂ ಸಾಮಾನ್ಯವಾದ ತಿಳಿವಳಿಕೆ ಅಗತ್ಯವಿದೆ. ಇಂದಿನ ಯುವ ಸಾಹಿತಿಗಳು ಇದನ್ನು ಅರಿಯಬೇಕಿದೆ ಎಂದು ಹೇಳಿದರು.
ಮಹಾರಾಣಿ ಅಮ್ಮಣ್ಣಿ ಕಾಲೇಜು ಸ್ನಾತಕೋತ್ತರ ಮತ್ತು ಸಂಶೋಧನಾ ಅಧ್ಯಯನ ಕೇಂದ್ರ ಮುಖ್ಯಸ್ಥ ಡಾ.ಅನ್ನದಾನೇಶ, ಸಿದ್ಧಮಂಗಳ ಸೇವಾ ಕೇಂದ್ರ ಅಧ್ಯಕ್ಷೆ ಪ್ರೊ.ಜಯಶ್ರೀ ಎಂ.ವಡೆಯರ್, ವೀರಶೈವ ಮಹಾಸಭಾ, ಅಖಿಲಭಾರತ ರಾಷ್ಟ್ರೀಯ ಮಹಿಳಾ ಘಟಕಾಧ್ಯಕ್ಷೆ ಗೀತಾ ಜಯಂತ್ , ಜಗದಗಲ ಮಂಟಪ ಪ್ರಧಾನ ಸಂಪಾದಕಿ ಡಾ. ಶೀಲಾದೇವಿ ಎನ್.ಮಳೀಮಠ, ಸಹ ಸಂಪಾದಕಿ ಜಿ.ಬಿ.ಮಹೇಶ್ವರಿ ಮತ್ತಿತರರು ಉಪಸ್ಥಿತರಿದ್ದರು.