ಮಂಡ್ಯ ನಾಯಕರಿಗೆ ಮೈತ್ರಿ ಧರ್ಮ ಮನದಟ್ಟು ಮಾಡಿದ ಡಿಕೆಶಿ

ಬೆಂಗಳೂರು, ಮಾ.11: ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರರಾಗಿ ಸುಮಲತಾ ಅಂಬರೀಶ್ ಹಾಗೂ ಜೆಡಿಎಸ್ ಪಕ್ಷದಿಂದ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗಿಳಿಯುತ್ತಿರುವುದರಿಂದ ಕಾಂಗ್ರೆಸ್ ಮುಖಂಡರಲ್ಲಿ ಉಂಟಾಗಿರುವ ಗೊಂದಲಗಳನ್ನು ನಿವಾರಿಸಲು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ರವಿವಾರ ರಾತ್ರಿ ಮಂಡ್ಯ ನಾಯಕರೊಂದಿಗೆ ಸಭೆ ನಡೆಸಿದರು.
ಪಕ್ಷದ ಕಾರ್ಯಕರ್ತರಾಗಿ ಹೈಕಮಾಂಡ್ ಸೂಚನೆಯನ್ನು ಪಾಲಿಸೋಣ. ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಮೈತ್ರಿ ಹಿನ್ನೆಲೆಯಲ್ಲಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟು ಕೊಡಲಾಗಿದೆ ಎಂದು ಸಭೆಯಲ್ಲಿ ಮುಖಂಡರಿಗೆ ಶಿವಕುಮಾರ್ ಮನವರಿಕೆ ಮಾಡಿಕೊಟ್ಟರು. ಹೀಗಾಗಿ ಅಲ್ಲಿ ಯಾರು ಅಭ್ಯರ್ಥಿಯಾಗಬೇಕು ಎಂಬುದನ್ನು ಆ ಪಕ್ಷದ ನಾಯಕರ ತೀರ್ಮಾನವೇ ಅಂತಿಮ. ಅದರಲ್ಲಿ ನಾವು ತಲೆ ಹಾಕುವುದು ಬೇಡ. ಅದೇ ರೀತಿ ನಮ್ಮ ಕ್ಷೇತ್ರಗಳಲ್ಲಿ ಅಭ್ಯರ್ಥಿ ವಿಚಾರವಾಗಿ ಅವರು ಹಸ್ತಕ್ಷೇಪ ಮಾಡವುದಿಲ್ಲ ಎಂದು ಶಿವಕುಮಾರ್ ಹೇಳಿದರು.
ಮೈತ್ರಿ ಧರ್ಮದ ಪ್ರಕಾರ ಮಂಡ್ಯದಲ್ಲಿ ಜೆಡಿಎಸ್ ಯಾರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುತ್ತದೆಯೋ ಅದಕ್ಕೆ ನಮ್ಮ ಬೆಂಬಲ ಇರಬೇಕು. ಅವರು ಸುಮಲತಾರನ್ನೇ ಅಭ್ಯರ್ಥಿ ಮಾಡಲಿ ಅಥವಾ ಬೇರೆಯವರನ್ನೇ ಕಣಕ್ಕಿಳಿಸಲಿ. ಅವರನ್ನು ನಾವು ಬೆಂಬಲಿಸಬೇಕು. ಹೈಕಮಾಂಡ್ ಕ್ಷೇತ್ರ ಬಿಟ್ಟುಕೊಟ್ಟ ಹಿನ್ನೆಲೆಯಲ್ಲಿ ಅವರ ಅಭ್ಯರ್ಥಿ ಆಯ್ಕೆಯನ್ನು ನಾವು ಪ್ರಶ್ನಿಸುವಂತಿಲ್ಲ. ಇಲ್ಲಿ ಯಾವ ಪಕ್ಷಕ್ಕೆ ಅನುಕೂಲ ಅಥವಾ ಯಾವ ಪಕ್ಷಕ್ಕೆ ಅನಾನುಕೂಲ ಎಂದು ಚರ್ಚೆ ಅನಗತ್ಯ. ಹೀಗಾಗಿ ಹೈಕಮಾಂಡ್ ಸೂಚನೆಯಂತೆ ನಾವು ನಡೆಯೋಣ ಎಂದು ಅವರು ಹೇಳಿದರು.
ಸುಮಲತಾ ಅವರು ನಮ್ಮ ಮನೆಯ ಹೆಣ್ಣು ಮಗಳು. ಅವರ ಬಗ್ಗೆ ನನಗೆ ಬಹಳ ಗೌರವವಿದೆ. ಅಂಬರೀಶ್ ಕೂಡ ನನಗೆ ಆತ್ಮೀಯರಾಗಿದ್ದವರು. ಆ ಕುಟುಂಬದ ಜತೆ ಉತ್ತಮ ಸಂಬಂಧ ಹೊಂದಿದ್ದೇವೆ. ಅವರಿಗೆ ನಮ್ಮ ಭಾವನೆಯನ್ನು ತಿಳಿಸಿದ್ದೇವೆ. ಅವರೂ ತಮ್ಮ ಭಾವನೆಯನ್ನು ಹೇಳಿಕೊಂಡಿದ್ದಾರೆ. ಇಲ್ಲಿ ಯಾವುದೇ ಅಸಮಾಧಾನ, ವಿವಾದ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಶಿವಕುಮಾರ್ ವಿವರಿಸಿದರು.
ಸಭೆಯಲ್ಲಿ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರ ಸ್ವಾಮಿ, ಮಧು ಮಾದೇಗೌಡ, ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಸೇರಿದಂತೆ ಇನ್ನಿತರ ನಾಯಕರು ಭಾಗವಹಿಸಿದ್ದರು.







