ಹವಾಲಾ ದಂಧೆ ಆರೋಪ: ಸಚಿವ ಡಿಕೆಶಿ ವಿರುದ್ಧದ ಸಮನ್ಸ್ ರದ್ದುಗೊಳಿಸಬೇಡಿ- ಹೈಕೋರ್ಟ್ಗೆ ಮನವಿ
![ಹವಾಲಾ ದಂಧೆ ಆರೋಪ: ಸಚಿವ ಡಿಕೆಶಿ ವಿರುದ್ಧದ ಸಮನ್ಸ್ ರದ್ದುಗೊಳಿಸಬೇಡಿ- ಹೈಕೋರ್ಟ್ಗೆ ಮನವಿ ಹವಾಲಾ ದಂಧೆ ಆರೋಪ: ಸಚಿವ ಡಿಕೆಶಿ ವಿರುದ್ಧದ ಸಮನ್ಸ್ ರದ್ದುಗೊಳಿಸಬೇಡಿ- ಹೈಕೋರ್ಟ್ಗೆ ಮನವಿ](https://www.varthabharati.in/sites/default/files/images/articles/2019/03/11/181731.jpg)
ಬೆಂಗಳೂರು, ಮಾ.11: ಹವಾಲಾ ದಂಧೆಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಐವರು ಭಾಗಿಯಾಗಿದ್ದಾರೆ. ಹೀಗಾಗಿ, ಇವರ ವಿರುದ್ಧ ತನಿಖೆ ನಡೆಸಲು ಅವಕಾಶ ನೀಡಬೇಕೆಂದು ಇಡಿ ಪರ ವಕೀಲರು ಹೈಕೋರ್ಟ್ಗೆ ಮನವಿ ಮಾಡಿದರು.
ಈ ಸಂಬಂಧ ವಿಚಾರಣೆಗೆ ಹಾಜರಾಗಬೇಕೆಂದು ಇಡಿ ನೀಡಿರುವ ನೋಟಿಸ್ ರದ್ದುಕೋರಿ ಡಿಕೆಶಿ ಸಲ್ಲಿಸಿರುವ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಅರವಿಂದಕುಮಾರ್ ಅವರಿದ್ದ ನ್ಯಾಯಪೀಠದಲ್ಲಿ ನಡೆಯಿತು. ಇಡಿ ಪರ ವಾದಿಸಿದ ವಕೀಲ ಅಡಿಷನಲ್ ಸಾಲಿಸಿಟರ್ ಜನರಲ್ ಪ್ರಭುಲಿಂಗ ನಾವಡಗಿ ಅವರು, ಡಿ.ಕೆ.ಶಿವಕುಮಾರ್ ಅವರ ಮೇಲೆ ದಾಖಲಾಗಿರುವ ಐಟಿ ಕಾಯಿದೆ 276 ಹಾಗೂ 277 ಅಡಿ ಶಿಕ್ಷೆ ನೀಡುವಂತಹ ಪ್ರಕರಣ. ಐಟಿ ಇಲಾಖೆ ಪ್ರಧಾನ ನಿರ್ದೇಶಕರ ಅನುಮತಿ ಮೇಲೆ ಆರ್ಥಿಕ ಅಪರಾಧ ಕೋರ್ಟ್ನಲ್ಲಿ ದೂರು ಸಲ್ಲಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ಡಿ.ಕೆ.ಶಿವಕುಮಾರ್ಗೆ ಸೇರಿದ ಪ್ರಾಪರ್ಟಿ ಮೇಲೆ ಐಟಿ ದಾಳಿ ಮಾಡಿದಾಗ ಆರೋಪಿ ಮನೆಯಲ್ಲಿ ಸಾಕಷ್ಟು ಚಿನ್ನಾಭರಣ, ದಾಖಲೆಗಳು ಲಭ್ಯವಾಗಿವೆ . ಹಾಗೆಯೆ ಇಡಿ ಮಾಡಿರುವ ಆರೋಪದಿಂದ ಶಿವಕುಮಾರ್ ಅವರು ಇನ್ನೂ ಮುಕ್ತರಾಗಿಲ್ಲ ಎಂದು ಪೀಠಕ್ಕೆ ತಿಳಿಸಿದರು. ಹವಲಾ ದಂಧೆಯಲ್ಲಿ ಡಿ.ಕೆ.ಶಿವಕುಮಾರ್, ಸಚಿನ್ ನಾರಾಯಣ್, ಸುನಿಲ್ಕುಮಾರ್ ಶರ್ಮ, ಎನ್.ರಾಜೇದ್ರ ಮತ್ತು ಆಂಜನೇಯ ಹನುಮಂತಯ್ಯ ಭಾಗಿಯಾಗಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು. ಎರಡನೆ ಆರೋಪಿ ಸಚಿನ್ ನಾರಾಯಣ್, ಡಿಕೆಶಿಯಿಂದ ಹಣ ಪಡೆದು ಹಲವು ಕಂಪೆನಿ ನಡೆಸುತ್ತಿದ್ದಾರೆ. ಮೂರನೆ ಅರೋಪಿ ಸುನಿಲ್ಶರ್ಮಾ ಟ್ರಾವೆಲ್ ಉದ್ಯಮದಲ್ಲಿ ಡಿಕೆಶಿ ಹಣ ಹೂಡಿಕೆ ಮಾಡಿದ್ದಾರೆ. ನಾಲ್ಕನೆ ಆರೋಪಿ ಹಾಗೂ ಐದನೆ ಆರೋಪಿಯ ಮನೆಯಲ್ಲಿ ಡಿಕೆಶಿಗೆ ಸೇರಿದ ಹಣ ಐಟಿ ಅವರು ದಾಳಿ ಮಾಡಿದಾಗ ಸಿಕ್ಕಿದೆ ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ವಿಚಾರಣೆಯನ್ನು ಮಾ.12ಕ್ಕೆ ಮುಂದೂಡಿತು.