‘ಭಾರತ ಮೊದಲು’ ನೀತಿ ಪುನರುಚ್ಚರಿಸಿದ ಮಾಲ್ದೀವ್ಸ್ ಅಧ್ಯಕ್ಷ
ಮಾಲೆ (ಮಾಲ್ದೀವ್ಸ್), ಮಾ. 18: ಭಾರತದ ಭದ್ರತೆ ಮತ್ತು ಸೇನಾ ಕಳವಳಗಳಿಗೆ ಸೂಕ್ಷ್ಮವಾಗಿ ಸ್ಪಂದಿಸುವುದನ್ನು ಮುಂದುವರಿಸುವುದಾಗಿ ಮಾಲ್ದೀವ್ಸ್ ಸೋಮವಾರ ಹೇಳಿದೆ.
ವಿದೇಶ ಸಚಿವೆ ಸುಶ್ಮಾ ಸ್ವರಾಜ್ ಮಾಲ್ದೀವ್ಸ್ಗೆ ನೀಡಿದ ಭೇಟಿಯ ವೇಳೆ ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರ ಈ ಭರವಸೆ ನೀಡಿದೆ.
ಇದೇ ಸಂದರ್ಭದಲ್ಲಿ ಉಭಯ ದೇಶಗಳು ಸಮುದಾಯ ಅಭಿವೃದ್ಧಿ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಗಳಿಗೆ ಸಂಬಂಧಿಸಿದ ಮೂರು ಸಹಕಾರ ಒಪ್ಪಂದಗಳಿಗೆ ಸಹಿಹಾಕಿದವು.
ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಇಬ್ರಾಹೀಮ್ ಮುಹಮ್ಮದ್ ಸೊಲಿಹ್ ನೇತೃತ್ವದ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ, ಉಭಯ ದೇಶಗಳ ನಡುವಿನ ಬಾಂಧವ್ಯ ಸುಧಾರಿಸಿದೆ.
ಸೊಲಿಹ್ರ ಪೂರ್ವಾಧಿಕಾರಿ ಅಬ್ದುಲ್ಲಾ ಯಮೀನ್ರ ಆಳ್ವಿಕೆಯಲ್ಲಿ ಭಾರತ ಮತ್ತು ಮಾಲ್ದೀವ್ಸ್ಗಳ ನಡುವಿನ ಸಂಬಂಧ ಸಾರ್ವಕಾಲಿಕ ಕುಸಿತ ಕಂಡಿತ್ತು.
ಸುಶ್ಮಾ ಸ್ವರಾಜ್ರ ಎರಡು ದಿನಗಳ ಭೇಟಿಯ ಕೊನೆಯಲ್ಲಿ ನೀಡಿದ ಜಂಟಿ ಹೇಳಿಕೆಯೊಂದರಲ್ಲಿ, ಮಾಲ್ದೀವ್ಸ್ ಅಧ್ಯಕ್ಷ ಸೊಲಿಹ್ ತನ್ನ ಸರಕಾರದ ‘ಭಾರತ ಮೊದಲು’ ನೀತಿಯನ್ನು ಪುನರುಚ್ಚರಿಸಿದರು.