ತರೀಕೆರೆ: ಕೊಲೆ ಪ್ರಕರಣ; ಆರು ಆರೋಪಿಗಳ ಬಂಧನ
ತರೀಕೆರೆ, ಮಾ.18: ಪಟ್ಟಣದಲ್ಲಿ ಇತ್ತೀಚೆಗೆ ನಡೆದಿದ್ದ ಅರುಣ ಎಂಬ ಯುವಕನ ಕೊಲೆ ಪ್ರಕರಣದ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಓರ್ವ ನಾಪತ್ತೆಯಾಗಿದ್ದಾನೆ. ಬಂಧಿತರಿಂದ ಕೊಲೆಗೆ ಬಳಸಲಾಗಿದ್ದ ಮಾರಕಾಸ್ತ್ರಗಳನ್ನು ಸೇರಿದಂತೆ ಒಂದು ಮಾರುತಿ ಓಮ್ನಿ ವಶಕ್ಕೆ ಪಡೆಯಲಾಗಿದೆ ಎಂದು ಡಿವೈಎಸ್ಪಿ ಜೆ.ಜೆ.ತಿರುಮಲೇಶ್ ತಿಳಿಸಿದರು.
ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು ಸಂಜು ಅಲಿಯಾಸ್ ಗುಂಡ, ಕಿರಣ ಅಲಿಯಾಸ್ ಕೆ.ಪಿ.ಸುಬ್ರಹ್ಮಣ್ಯ ಅಲಿಯಾಸ್ ಸುಬ್ಬು, ಶಿವಪ್ರಸಾದ ಅಲಿಯಾಸ್ ಶಿವ, ಪವನ್ ಕಲ್ಯಾಣ್ ಅಲಿಯಾಸ್ ಸನ್ನಿ, ಪ್ರಜ್ವಲ್ ಅಲಿಯಾಸ್ ಜಂಗ್ಲಿ, ಮಂಜುನಾಥ್ ಅಲಿಯಾಸ್ ಕೋರೆ ಮಂಜ ಬಂಧಿತ ಆರೋಪಿಗಳಾಗಿದ್ದು, ಇನ್ನೋರ್ವ ಆರೋಪಿ ಅರುಣ ಎಂಬಾತ ತಲೆ ಮರೆಸಿಕೊಂಡಿದ್ದಾನೆ ಎಂದು ಹೇಳಿದರು.
ಪಟ್ಟಣದಲ್ಲಿ ಇತ್ತೀಚೆಗೆ ಕನಮನಹಟ್ಟಿ ವಾಸಿ ಅರುಣ (23) ಎಂಬ ಯುವಕನ ಕಣ್ಣಿಗೆ ಕಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಲೆಮಾಡಿ ಆರೋಪಿಗಳು ಪರಾರಿಯಾಗಿದ್ದರು. ಕೊಲೆ ಪ್ರಕರಣವನ್ನು ಭೇದಿಸಲು ಪೊಲೀಸ್ ನಿರೀಕ್ಷಕ ಜಯಂತ್ ಗೌಳಿ ಇವರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ಮೃತ ಅರುಣ ಹಾಗೂ ಆರೋಪಿತರ ಮಧ್ಯೆ ಇರುವ ವೈಷಮ್ಯವೇ ಕೊಲೆಗೆ ಕಾರಣ ಎಂದು ತಿಳಿಸಿದ್ದಾರೆ.