ಇಟ್ಟಿಗೆ ಗೂಡಿನಲ್ಲಿ ದುಡಿಯುತ್ತಿದ್ದ ಒಡಿಶಾ ಮೂಲದ 38 ಜೀತದಾಳುಗಳ ರಕ್ಷಣೆ
ಸಾಂದರ್ಭಿಕ ಚಿತ್ರ
ಬೆಂಗಳೂರು, ಮಾ.20: ಯಾದಗಿರಿ ಜಿಲ್ಲೆಯ ರಾಮಸಮುದ್ರ ಬಳಿಯ ಇಟ್ಟಿಗೆ ಗೂಡಿನಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ ಒಡಿಶಾ ಮೂಲದ 38 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಯಾದಗಿರಿ ಜಿಲ್ಲಾಡಳಿತ, ಸ್ಥಳೀಯ ಪೊಲೀಸರು, ಕಾರ್ಮಿಕ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಮಾ.18ರಂದು ಇಟ್ಟಿಗೆ ಗೂಡಿಗೆ ದಾಳಿ ನಡೆಸಿ, ಜೀತದಾಳುಗಳನ್ನು ರಕ್ಷಣೆ ಮಾಡಲಾಗಿದೆ. ಹಾಗೂ ಇಟ್ಟಿಗೆ ಗೂಡಿನ ಮಾಲಕರ ವಿರುದ್ಧ ಯಾದಗಿರಿ ಗ್ರಾಮಾಂತರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಮಾಲಕರ ದೌರ್ಜನ್ಯದ ಆರೋಪ:
ಇಟ್ಟಿಗೆ ಗೂಡಿನ ಮಾಲಕರ ವಾರದ ಏಳು ದಿನವೂ ಕೆಲಸ ಮಾಡುವಂತೆ ಒತ್ತಾಯಿಸುತ್ತಿದ್ದರು. ಒಂದು ಹೊತ್ತಿನ ಊಟಕ್ಕೆ ಸಾಕಾಗುಷ್ಟು ಮಾತ್ರ ಅಡುಗೆ ಪದಾರ್ಥಗಳನ್ನು ಕೊಡುತ್ತಿದ್ದರು. ಇದರಲ್ಲಿ ಮೂರು ಹೊತ್ತಿನ ಊಟವನ್ನು ಮಾಡಿಕೊಳ್ಳಬೇಕಾಗಿತ್ತು ಎಂದು ಜೀತದಾಳುಗಳು ಆರೋಪಿಸಿದ್ದಾರೆ.
ಜೀತದಾಳುಗಳ ಸಂಬಂಧಿಕರು ಸಾವನ್ನಪ್ಪಿದರೂ ಊರಿಗೆ ಹೋಗಲು ಅವಕಾಶ ನೀಡುತ್ತಿರಲಿಲ್ಲ. ಬೆಳಗ್ಗೆ 6.30ಕ್ಕೆ ಕೆಲಸ ಪ್ರಾರಂಭಿಸಿದರೆ ಸಂಜೆ 6.30ರವರೆಗೆ ಕೆಲಸ ಮಾಡಬೇಕಿತ್ತು. ಆರೋಗ್ಯ ಕೆಟ್ಟರು ನಮಗೆ ಆಸ್ಪತ್ರೆಗೆ ಹೋಗುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಈಗ ನಮಗೆ ಇಟ್ಟಿಗೆ ಮಾಲಕರಿಂದ ಮುಕ್ತಿ ಸಿಕ್ಕಿರುವುದು ಸಮಾಧಾನ ತಂದಿದೆ ಎಂದು ಜೀತದಾಳುಗಳು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.