ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪತ್ನಿ ಬಗ್ಗೆ ಅಶ್ಲೀಲ ಬರಹ: ಓರ್ವನ ಬಂಧನ
ತಬು ರಾವ್- ದಿನೇಶ್ ಗುಂಡೂರಾವ್
ಬೆಂಗಳೂರು, ಮಾ.20: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಪತ್ನಿ ತಬು ರಾವ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಬರಹ ಪ್ರಕಟಿಸಿದ ಆರೋಪದಡಿ ವ್ಯಕ್ತಿಯೋರ್ವರನ್ನು ಸೈಬರ್ ಕ್ರೈಂ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಗಂಗಾ ನಗರದ ನಿವಾಸಿ ಆರ್. ಮಲ್ಲಿಕಾರ್ಜುನ ಬಂಧಿತ ಆರೋಪಿ ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.
ಆರೋಪಿ ಮಲ್ಲಿಕಾರ್ಜುನ್ ತನ್ನ ಫೇಸ್ ಬುಕ್ ಖಾತೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಅವರ ಪತ್ನಿ ತಬು ರಾವ್ ಅವರ ಬಗ್ಗೆ ಅಶ್ಲೀಲ ಮತ್ತು ಅನುಚಿತ ರೀತಿಯಲ್ಲಿ ಬರಹಗಳನ್ನು ಪ್ರಕಟಿಸಿದ್ದ. ಈ ಸಂಬಂಧ ನಂದನ್ ಎಂಬವರು ಮಾ.15ರಂದು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ಇದರ ಅನ್ವಯ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಪ್ರಕಟಿಸುವ ಮುನ್ನ, ಯಾವುದೇ ವ್ಯಕ್ತಿ, ಗುಂಪು, ಧರ್ಮದ ಭಾವನೆಗಳಿಗೆ ಧಕ್ಕೆಯಾಗದ ಅಂಶಗಳ ಬಗ್ಗೆ ಗಮನಹರಿಸುವುದು, ಭಾಷೆಯ ಮೇಲೆ ಹಿಡಿತ ಸಾಧಿಸುವುದು ಅಗತ್ಯ.
-ಎಸ್.ಗಿರೀಶ್, ಡಿಸಿಪಿ, ಸಿಸಿಬಿ