ತಡವಾಗಿ ಬಂದ ರೈಲು: 500ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ತಪ್ಪಿದ ನೇಮಕಾತಿ ಪರೀಕ್ಷೆ
ಸಾಂದರ್ಭಿಕ ಚಿತ್ರ
ಬೆಂಗಳೂರು, ಮಾ.20: 5 ಗಂಟೆ ಕಾಲ ತಡವಾಗಿ ರೈಲು ಬಂದ ಕಾರಣ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೇಮಕಾತಿ ಸಂಬಂಧ ಪರೀಕ್ಷೆಗೆ ನೂರಾರು ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ವರದಿಯಾಗಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಬುಧವಾರ ಬೆಂಗಳೂರಿನ ವಿವಿಧ ಕೇಂದ್ರಗಳಲ್ಲಿ ಹಲವು ಹುದ್ದೆಗಳಿಗೆ ನೇಮಕಾತಿ ಮಾಡಲು ಪರೀಕ್ಷೆ ನಿಗದಿಪಡಿಸಿತ್ತು. ಅದರಂತೆ ಬೆಳಗ್ಗೆ 10:30ರಿಂದ 12:30ರವರೆಗೂ ಸಾಮಾನ್ಯ ಜ್ಞಾನ ಪರೀಕ್ಷೆ ಇತ್ತು.
ಪರೀಕ್ಷೆ ಬರೆಯಲು ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಜಮಖಂಡಿ, ಹಾವೇರಿ ಸೇರಿದಂತೆ ಉತ್ತರ ಕರ್ನಾಟಕ ಭಾಗದಿಂದ ಅಭ್ಯರ್ಥಿಗಳು ರಾಣಿ ಚನ್ನಮ್ಮ ಎಕ್ಸ್ಪ್ರೆಸ್ ರೈಲಿನಲ್ಲಿ ಬಂದಿದ್ದಾರೆ. ಆದರೆ, ರೈಲು ಬೆಂಗಳೂರು ತಲುಪಲು 5 ಗಂಟೆ ವಿಳಂಬವಾಗಿದೆ. ಮುಂಜಾನೆ 6:18ಕ್ಕೆ ಯಶವಂತಪುರ ನಿಲ್ದಾಣಕ್ಕೆ ಬರಬೇಕಿದ್ದ ರೈಲು 11:45 ಕ್ಕೆ ಬಂದಿದೆ. ಹೀಗಾಗಿ, ಸುಮಾರು 500ಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆದಿಲ್ಲ ಎಂದು ಹೇಳಲಾಗುತ್ತಿದೆ.
ಇದರಿಂದ ಈಗ ಅಭ್ಯರ್ಥಿಗಳು ಕಂಗಾಲಾಗಿದ್ದು, ತಪ್ಪು ನಮ್ಮದಲ್ಲ, ನಮಗೆ ಪರೀಕ್ಷೆ ಬರೆಯಲು ಮತ್ತೊಮ್ಮೆ ಅವಕಾಶ ನೀಡಿ ಎಂದು ಒತ್ತಾಯ ಮಾಡುತ್ತಿದ್ದಾರೆ.