ಮಕ್ಕಳು, ವೃದ್ಧರೆಂದು ನೋಡದೆ ಥಳಿಸಿದರು, ನಾವು ಊರು ಬಿಡುತ್ತೇವೆ
ಮುಸ್ಲಿಂ ಕುಟುಂಬದ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಪ್ರಕರಣ

ಗುರುಗ್ರಾಮ,ಮಾ.24: ದಿಲ್ಲಿ ಸಮೀಪದ ಗುರುಗ್ರಾಮದಲ್ಲಿ ಗುರುವಾರ ಮುಸ್ಲಿಂ ಕುಟುಂಬವೊಂದರ ಮೇಲೆ ಕ್ಷುಲ್ಲಕ ಕಾರಣಕ್ಕೆ 40ರಷ್ಟು ಜನರಿದ್ದ ದುಷ್ಕರ್ಮಿಗಳ ಗುಂಪು ಹಲ್ಲೆ ನಡೆಸಿದ ಪರಿಣಾಮವಾಗಿ ಸದ್ಯ ಸಂತ್ರಸ್ತ ಕುಟುಂಬ ಊರನ್ನೇ ತೊರೆದು ಹೋಗಲು ಸಿದ್ಧತೆ ನಡೆಸುತ್ತಿದೆ.
ಘಟನೆಯ ಬಗ್ಗೆ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಮನೆಯ ಯಜಮಾನ ಮುಹಮ್ಮದ್ ಸಾಜಿದ್, “ನಾವು ನಮ್ಮ ಹಳ್ಳಿಗೆ ಅಥವಾ ದಿಲ್ಲಿಗೆ ತೆರಳಲು ಯೋಚಿಸುತ್ತಿದ್ದೇವೆ. ಇಲ್ಲಿ ಇಂಥ ಘಟನೆ ಒಂದು ಬಾರಿ ನಡೆದರೆ ಇನ್ನು ಮುಂದೆಯೂ ನಡೆಯಬಹುದಾದ ಸಾಧ್ಯತೆಯಿದೆ. ನಮ್ಮ ಹಳ್ಳಿಯಲ್ಲಿ ಇಂಥ ಘಟನೆ ನಡೆದಿದ್ದರೆ ನಮ್ಮ ಬೆಂಬಲಕ್ಕೆ ಕನಿಷ್ಟ 15-20 ಮಂದಿ ಬರುತ್ತಿದ್ದರು. ಆದರೆ ಇಲ್ಲಿ ನಮ್ಮವರು ಯಾರೂ ಇಲ್ಲ” ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಉತ್ತರ ಪ್ರದೇಶದ ಬಗ್ಪತ್ ನಿವಾಸಿಯಾಗಿರುವ ಸಾಜಿದ್ ಮೂರು ವರ್ಷಗಳ ಹಿಂದೆ ಗುರುಗ್ರಾಮದ ದುಮಸ್ಪುರ್ನ ಭೂಪ್ಸಿಂಗ್ ಕಾಲನಿಯಲ್ಲಿ ಮನೆ ನಿರ್ಮಿಸಿ ಪತ್ನಿ ಮತ್ತು ಆರು ಮಕ್ಕಳ ಜೊತೆ ವಾಸವಾಗಿದ್ದಾರೆ.
ಭೊಂಡ್ಸಿ ಪೊಲೀಸ್ ಠಾಣೆಯಲ್ಲಿ ಸಾಜಿದ್ ಸೋದರಳಿಯ ದಿಲ್ಶಾದ್ ದಾಖಲಿಸಿರುವ ದೂರಿನ ಪ್ರಕಾರ, ಮಾರ್ಚ್ 21ರಂದು ಹೋಲಿ ಹಬ್ಬದ ಹಿನ್ನೆಲೆಯಲ್ಲಿ ಸಾಜಿದ್ ಅವರ ಸಂಬಂಧಿಕರು ಗುರುಗ್ರಾಮದ ಮನೆಗೆ ಆಗಮಿಸಿದ್ದರು. ಘಟನೆ ನಡೆದ ದಿನ ಮನೆಯ ಕೆಲವು ಯುವಕರು ಸಮೀಪದ ಖಾಲಿ ಜಾಗದಲ್ಲಿ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ ಯುವಕರ ತಂಡ, “ನೀವು ಇಲ್ಲೇನು ಮಾಡುತ್ತಿದ್ದೀರಿ? ಹೋಗಿ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಿ” ಎಂದು ಗದರಿಸಿದ್ದಾರೆ. ಈ ಸಂದರ್ಭದಲ್ಲಿ ಸಾಜಿದ್ ಮಧ್ಯಪ್ರವೇಶಿಸಿದಾಗ ಬೈಕ್ನಲ್ಲಿ ಕುಳಿತಿದ್ದ ಒಬ್ಬ ವ್ಯಕ್ತಿ ಸಾಜಿದ್ರ ಕೆನ್ನೆಗೆ ಹೊಡೆದಿದ್ದಾನೆ. ಇಷ್ಟಕ್ಕೇ ನಿಲ್ಲಿಸದ ದುಷ್ಕರ್ಮಿಗಳು ಇನ್ನಷ್ಟು ಜನರನ್ನು ಒಟ್ಟುಗೂಡಿಸಿ ಸಾಜಿದ್ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.
ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿರುವಂತೆ, ಸುಮಾರು 25ರಿಂದ 40ರಷ್ಟಿದ್ದ ದುಷ್ಕರ್ಮಿಗಳ ತಂಡ ಸಾಜಿದ್ ಮನೆಯ ಒಳಗೆ ಅಕ್ರಮ ಪ್ರವೇಶಗೈದು ಒಳಗಿದ್ದ ಪುರುಷರ ಮೇಲೆ ಕಬ್ಬಿಣದ ರಾಡ್ ಮತ್ತು ಕೋಲಿನಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಕೆಲವರು ಮಕ್ಕಳನ್ನು ಹಿಡಿದು ಮನೆಯ ತಾರಸಿಗೆ ಓಡಿದರೆ ಇನ್ನು ಕೆಲವರು ಹಲ್ಲೆ ನಡೆಸದಂತೆ ದುಷ್ಕರ್ಮಿಗಳನ್ನು ತಡೆಯಲು ಪ್ರಯತ್ನಿಸಿದ್ದಾರೆ.
ಅರ್ಧ ಗಂಟೆಗಳ ಕಾಲ ನಡೆದ ಹೀನಾಯ ಕೃತ್ಯದಲ್ಲಿ ಹಲ್ಲೆಕೋರರು ವೃದ್ಧರು, ಮಕ್ಕಳು ಎಂದು ಪರಿಗಣಿಸದೆ ಎಲ್ಲರ ಮೇಲೆಯೂ ಪೈಶಾಚಿಕವಾಗಿ ಎರಗಿದ್ದಾರೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ.
ಹಲ್ಲೆಯ ದೃಶ್ಯವನ್ನು ಕಂಡ ಮೂರು ಮಕ್ಕಳು ಕಪಾಟಿನೊಳಗೆ ಅವಿತು ಕುಳಿತಿದ್ದರು. ಅವರನ್ನೂ ಹೊರಗೆಳೆದು ಹಲ್ಲೆ ನಡೆಸಲಾಗಿದೆ. ಮನೆಯ ಮಕ್ಕಳು ಈಗಲೂ ಭಯದಲ್ಲೇ ಕೋಣೆಯೊಳಗೆ ಕುಳಿತಿದ್ದಾರೆ. ಮನೆಯನ್ನು ತೊರೆಯುವ ಮೊದಲು ಕೆಲವು ದುಷ್ಕರ್ಮಿಗಳು ನಮ್ಮನ್ನು ಜೀವಂತ ಸುಡುವುದಾಗಿ ಬೆದರಿಕೆ ಹಾಕಿದ್ದಾರೆ. ಹಾಗಾಗಿ ಈ ಘಟನೆ ಇನ್ನೊಮ್ಮೆ ಮರುಕಳಿಸಬಹುದು ಎಂಬ ಆತಂಕ ನಮ್ಮಲ್ಲಿದೆ ಎಂದು ದಿಲ್ಶಾದ್ ‘ಇಂಡಿಯನ್ ಎಕ್ಸ್ಪ್ರೆಸ್’ ಪತ್ರಿಕೆಗೆ ತಿಳಿಸಿದ್ದಾರೆ.
“ಇಷ್ಟು ದೊಡ್ಡ ಘಟನೆ ನಡೆದರೂ ಅಕ್ಕಪಕ್ಕದ ಮನೆಯ ಯಾರೂ ನಮ್ಮ ರಕ್ಷಣೆಗೆ ಧಾವಿಸಲಿಲ್ಲ. ಅದು ಹಿಂದು ಬಾಹುಳ್ಯದ ಪ್ರದೇಶವಾಗಿರುವುದರಿಂದ ಹೀಗಾಗಿರಬಹುದು. ಹಾಗಾಗಿ ನಾವು ಈ ಜಾಗವನ್ನು ತೊರೆದು ನಮ್ಮ ಊರಿಗೆ ಅಥವಾ ದಿಲ್ಲಿಗೆ ತೆರಳುವ ಬಗ್ಗೆ ಯೋಚಿಸುತ್ತಿದ್ದೇವೆ” ಎಂದು ದಿಲ್ಶಾದ್ ತಿಳಿಸಿದ್ದಾರೆ.
ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು ಮಹೇಶ್ ಕುಮಾರ್ ಎಂಬಾತನನ್ನು ಶುಕ್ರವಾರ ಬಂಧಿಸಿದ್ದಾರೆ. “ನಾನು ಮತ್ತು ನನ್ನ ಗೆಳೆಯ ಮದ್ಯದ ಅಮಲಿನಲ್ಲಿ ಈ ಗಲಾಟೆ ನಡೆಸಿರುವುದಾಗಿ ಮತ್ತು ನಂತರ ಹೆಚ್ಚಿನ ಜನರನ್ನು ಸೇರಿಸಿ ಮನೆಮಂದಿಯ ಮೇಲೆ ಹಲ್ಲೆ ನಡೆಸಿರುವುದಾಗಿ” ಬಂಧಿತ ಆರೋಪಿ ಒಪ್ಪಿಕೊಂಡಿದ್ದಾನೆ. ಉಳಿದ ಆರು ಆರೋಪಿಗಳನ್ನೂ ಗುರುತಿಸಲಾಗಿದ್ದು ಅವರನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.







