ಬೆದರಿಸಿ ದರೋಡೆ: ಇಬ್ಬರು ಆರೋಪಿಗಳ ಬಂಧನ
ಬೆಂಗಳೂರು, ಮಾ.26: ಒಬ್ಬಂಟಿಯಾಗಿ ಓಡಾಡುವವರನ್ನು ಬೆದರಿಸಿ, ಹಲ್ಲೆ ಮಾಡಿ, ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ.
ಗೋವಿಂದಪುರದ ಸೈಯದ್ ವಸೀಂ(33), ನಾಗವಾರದ ರೋಷನ್ ಉಲ್ಲಾ ಬೇಗ್(26) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದ್ದು, ಹುಣಸವಾರನಹಳ್ಳಿಯ ಸರ್ವೀಸ್ ರಸ್ತೆ ಬಳಿ ಮಾ. 14ರಂದು ಬೆಳಗ್ಗೆ 4.20ಕ್ಕೆ ಶಿವಾಜಿ ಎಂಬುವರು ನಿಂತಿದ್ದ ವೇಳೆ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಸುಲಿಗೆ ಮಾಡಿದ್ದರು.
ಬಾಗಲೂರು ಬಳಿ ಮಾ. 19ರಂದು ಬೆಳಗ್ಗೆ 5.30ರ ವೇಳೆಗೆ ವಾಕಿಂಗ್ ಮುಗಿಸಿಕೊಂಡು ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಲಕ್ಷ್ಮೀ ಎಂಬುವವರ 40 ಗ್ರಾಂ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದರು. ಈ ಬಗ್ಗೆ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ದೂರ ದಾಖಲಾಗಿದ್ದು, ಆರೋಪಿಗಳಿಗಾಗಲಿ ಬಲೆ ಬೀಸಿದ್ದ ಚಿಕ್ಕಜಾಲ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ 23ಗ್ರಾಂ ತೂಕದ ಚಿನ್ನದ ಸರ, 1 ಮೊಬೈಲ್, ಕೃತ್ಯಕ್ಕೆ ಬಳಸಿದ್ದ ಮಚ್ಚು, ಚಾಕು ಸೇರಿ ನಗದನ್ನು ವಶಪಡಿಸಿಕೊಂಡಿದ್ದಾರೆ. ಐಷಾರಾಮಿ ಜೀವನ ನಡೆಸಲು ಕೃತ್ಯಕ್ಕೆ ಕೈ ಹಾಕಿರುವುದಾಗಿ ಆರೋಪಿಗಳು ಬಾಯಿಬಿಟ್ಟಿದ್ದಾರೆ.
ಚಿಕ್ಕಜಾಲ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಟಿ.ಮುತ್ತುರಾಜು ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಪಿಎಸ್ಐ ಪ್ರವೀಣ್ ಕುಮಾರ್, ಸಿಬ್ಬಂದಿ ಯಶವಂತ ಡಿ. ಪವಾರ್, ಸಕರೆಪ್ಪ, ಭಾಸ್ಕರ್, ರವಿ, ಲೋಕೇಶ್ ತಂಡದಲ್ಲಿದ್ದರು.