ಹಾಸನ: ಬಿಜೆಪಿ ಮುಖಂಡರು ಜೆಡಿಎಸ್ಗೆ ಸೇರ್ಪಡೆ

ಹಾಸನ, ಮಾ.27: ಬಿಜೆಪಿ ಪಕ್ಷದಲ್ಲಿ ಪ್ರಾಮಾಣಿಕವಾಗಿ ದುಡಿದವರನ್ನು ಕಡೆಗಣಿಸಲಾಗಿದ್ದು, ಸ್ವಾಭಿಮಾನಕ್ಕೆ ದಕ್ಕೆಯಾಗಿ ಜೆಡಿಎಸ್ ಪಕ್ಷಕ್ಕೆ ಹಲವಾರು ಮುಖಂಡರು ಸೇರ್ಪಡೆಗೊಂಡಿರುವುದಾಗಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದ್ದಾರೆ.
ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ಗೆ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿ ಹಲವಾರು ವರ್ಷಗಳ ಕಾಲ ಕೆಲಸ ಮಾಡಿ, ನಂತರ ವಿಧಾನಸಭೆ ಚುನಾವಣೆಗೆ ಟಿಕೆಟ್ ಕೇಳಿದಂತಹ ಅಗಿಲೆ ಯೋಗಿಶ್, ಕಟ್ಟಾಯ ಅಶೋಕ್ ಆಕಾಂಕ್ಷಿಗಳು ವಂಚಿತರಾದರು ಎಂದು ಹೇಳಿದರು.
ಪ್ರಜ್ವಲ್ ನಾಮಪತ್ರ ಸಲ್ಲಿಸುವಾಗ ನಾಮಪತ್ರದಲ್ಲಿ ಆಸ್ತಿಯನ್ನು ಮರೆಮಾಚಲಾಗಿದೆ ಎಂದು ಎ.ಮಂಜು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಮತ್ತು ಭೂ ಕಬಳಿಕೆ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಎಚ್.ಡಿ.ರೇವಣ್ಣ, ಚುನಾವಣೆ ಎದುರಿಸುವ ಶಕ್ತಿ ಇಲ್ಲದವರಿಂದ ಇಂತಹ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ ಎಂದು ಹೇಳಿದರು.
ಶಾಸಕ ಪ್ರೀತಮ್ ವಿರುದ್ಧ ಆಕ್ರೋಶ
ಬಿಜೆಪಿ ಪಕ್ಷದಿಂದ ಜೆಡಿಎಸ್ಗೆ ಸೇರ್ಪಡೆಗೊಂಡ ಮುಖಂಡರು ಶಾಸಕ ಪ್ರೀತಮ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಗಿಲೆ ಯೋಗಿಶ್ ಮಾತನಾಡಿ, ಕಳೆದ 30 ವರ್ಷಗಳ ಕಾಲ ಬಿಜೆಪಿ ಕಾರ್ಯಕರ್ತನಾಗಿ, ಆರೆಸ್ಸೆಸ್ನಲ್ಲೂ ಕೆಲಸ ಮಾಡಿದ್ದೇನೆ. ಆದರೆ ಅನಿವಾರ್ಯ ಕಾರಣಗಳಿಂದ ಜೆಡಿಎಸ್ ಸೇರ್ಪಡೆ ಆಗಬೇಕಾಗಿದೆ ಎಂದರು. ಪ್ರೀತಮ್ ಆಕಸ್ಮಿಕವಾಗಿ ಬಿಜೆಪಿ ಶಾಸಕನಾಗಿರುವುದು. ಪ್ರಾಮಾಣಿಕವಾಗಿ ಕೆಲಸ ಮಾಡಿದವರಿಗೆ ನೀವು ಕೊಟ್ಟ ಬೆಲೆ ಏನು? 25 ಕೆರೆಗಳ ಊಳು ತೆಗೆಸಿದ್ದೇನೆ. ಸಾಲಮನ್ನಾಕ್ಕಾಗಿ ಹೋರಾಟ ಮಾಡಿದ್ದೇನೆ. ನೀರಿಗಾಗಿ ಪ್ರತಿಭಟನೆಗಳು ಮಾಡಲಾಗಿದ್ದು, ಇದರ ಫಲ ಎಂಬಂತೆ ಬ್ರೋಕರ್, ದಲ್ಲಾಳಿ ಕೆಲಸ ಮಾಡಿಕೊಂಡು ಬಂದ ಪ್ರೀತಮ್ನಂತಹ ಕೊಳೆಯನ್ನು, ರಕ್ತ ಇರುವವರೆಗೂ ಕಿತ್ತು ಹಾಕುತ್ತೇನೆ ಎಂದು ಎಚ್ಚರಿಸಿದರು.
ಮಾಜಿ ಶಾಸಕ ಬಿ.ವಿ.ಕರೀಗೌಡ, ಕಟ್ಟಾಯ ಅಶೋಕ್, ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಗೊಂಡ ಬಿ.ವಿ. ಕರೀಗೌಡ, ಅಗಿಲೆ ಯೋಗಿಶ್, ಕಟ್ಟಾಯ ಅಶೋಕ್, ಎಬಿವಿಪಿ ಅಮಿತ್, ಮಂಜುಳಾ, ರುದ್ರೇಗೌಡ, ಗೊರೂರು ಸಲೀಂ, ಬಿಟ್ಟಗೌಡನಹಳ್ಳಿ ಸುರೇಶ್, ಪರಮೇಶ್, ನವೀನ್, ಭುವನ್ ಮಂಜುನಾಥ ಶರ್ಮ, ಪ್ರಭು, ಮೋಹನ್, ತೇಜೂರು ಆನಂದ್, ರತ್ನಕ್ಕ, ನವೀನ್, ನವೀನ್, ಬಿಜೆಪಿ ದೇವರಾಜು, ಬಾಬು, ಮತ್ತು ಹುಡಾ ಅಧ್ಯಕ್ಷ. ಕೆ.ಎಂ.ರಾಜೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಪಟೇಲ್ ಶಿವರಾಂ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ, ಲೋಕಸಭೆ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ರೈತ ಮುಖಂಡ ಸುರೇಶ್ ಬಾಬು, ನಗರಸಭೆ ಮಾಜಿ ಅಧ್ಯಕ್ಷ ಚನ್ನವೀರಪ್ಪ, ಎಚ್.ಎಸ್.ಅನಿಲ್ ಕುಮಾರ್, ಸ್ವರೂಪ್, ಎಸ್.ದ್ಯಾವೇಗೌಡ ಮೊದಲಾದವರು ಉಪಸ್ಥಿತರಿದ್ದರು.
ಅಗಿಲೆ ಯೋಗೀಶ್ ನೇತೃತ್ವದಲ್ಲಿ ಮೆರವಣಿಗೆ
ಬಿಜೆಪಿ ತೊರೆದು ಜೆಡಿಎಸ್ಗೆ ಸೇರ್ಪಡೆಯಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಹೇಮಾವತಿ ಪ್ರತಿಮೆ ಬಳಿ ಅಗಿಲೆ ಯೋಗೀಶ್ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ನಡೆಯಿತು.
ಹೇಮಾವತಿ ಪ್ರತಿಮೆಯಿಂದ ಹೊರಡುವ ಮೊದಲು ಚುನಾವಣೆ ನೀತಿ ಸಂಹಿತೆ ಇದ್ದು, ಅನುಮತಿ ಪಡೆದು ನಂತರ ಹೋಗಬೇಕು ಎಂದು ಪೊಲೀಸ್ ಅಧಿಕಾರಿಗಳು ತಡೆದರು. ಈ ಸಮಯದಲ್ಲಿ ಅಗಿಲೆ ಯೋಗೀಶ್ ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು. ಕೊನೆಯಲ್ಲಿ ಘೋಷಣೆ ಕೂಗದೆ ಮೆರವಣಿಗೆ ಸಾಗಬೇಕಾಯಿತು.







