ಐಟಿ ದಾಳಿ ಮೂಲಕ ಭಯದ ವಾತಾವರಣ ಸೃಷ್ಟಿಸುವ ತಂತ್ರ ಕೈಬಿಡಿ: ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ, ಮಾ. 28: ವಿಪಕ್ಷಗಳ ನಾಯಕರ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸುವ ಮೂಲಕ ಭಯದ ವಾತಾವರಣ ಸೃಷ್ಟಿಸುವ ತಂತ್ರವನ್ನು ಕೈಬಿಡಬೇಕು ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ವಿಪಕ್ಷಗಳ ನಾಯಕರು ಕೆಲಸ ಮಾಡದಂತೆ ಬೆದರಿಸಿ ಚುನಾವಣೆ ಗೆಲ್ಲುವ ತಂತ್ರವನ್ನು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಮಾಡುತ್ತಿದೆ ಎಂದು ದೂರಿದರು.
ಐಟಿ ದಾಳಿಯ ಮೂಲಕ ಅನೇಕ ನಾಯಕರನ್ನು ಹೆದರಿಸಿ, ಬೆದರಿಸಿ ಅವರ ಮೇಲೆ ಮಾನಸಿಕ ಒತ್ತಡ ಹೇರುವ ಕಲುಷಿತ ವಾತಾವರಣವನ್ನು ಮೋದಿ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಚುನಾವಣೆ ಘೋಷಣೆಗೂ ಮುನ್ನ ದಾಳಿ ನಡೆಸಲು ಇವರಿಗೆ ಸಮಯ ಇರಲಿಲ್ಲವೇ? ಎಂದು ಪ್ರಶ್ನಿಸಿದರು.
ಮತಕ್ಕಾಗಿ ಇಂತಹ ತಂತ್ರ ಪ್ರಯೋಗ ಸರಿಯಲ್ಲ. ನೀವು ಎಷ್ಟೇ ಹೆದರಿಸುವ ತಂತ್ರ ಅನುಸರಿಸಿದರೂ ಜನರು ತಮ್ಮ ನಿಲುವನ್ನು ಯಾವುದೇ ಕಾರಣಕ್ಕೂ ಬದಲಿಸುವುದಿಲ್ಲ. ತಮ್ಮ ಮನಸ್ಸಿನಲ್ಲಿರುವುದನ್ನು ಮತದಾನದ ದಿನ ವ್ಯಕ್ತಪಡಿಸಲಿದ್ದಾರೆ ಎಂದು ಹೇಳಿದರು.
ಸಿಬಿಐಯನ್ನು ದುರುಪಯೋಗ ಪಡಿಸಿಕೊಂಡು ರಾಜಕೀಯ ಮಾಡಿದ್ದೀರಿ ಎಂದು ನಾನು ಲೋಕಸಭೆಯಲ್ಲಿಯೇ ಪ್ರಧಾನಿ ಮೋದಿಯವರಿಗೆ ಹೇಳಿದ್ದೇನೆ ಎಂದ ಮಲ್ಲಿಕಾರ್ಜುನ ಖರ್ಗೆ, ಐಟಿ ದಾಳಿಯ ಮೂಲಕ ಹೆದರಿಸುವ ಯತ್ನವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.







