ಚುನಾವಣೆ ಸ್ಪರ್ಧೆಯ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ: ಉತ್ಪಲ್ ಪಾರಿಕ್ಕರ್
ಪಣಜಿ, ಮಾ.29: ಪಣಜಿ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ತಾನಿನ್ನೂ ನಿರ್ಧರಿಸಿಲ್ಲ . ಈ ಕುರಿತು ಸೂಕ್ತ ಸಮಯದಲ್ಲಿ ನಿರ್ಧರಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಹಿರಿಯ ಪುತ್ರ ಉತ್ಪಲ್ ಪಾರಿಕ್ಕರ್ ಹೇಳಿದ್ದಾರೆ. ಮನೋಹರ್ ಪಾರಿಕ್ಕರ್ ನಿಧನದಿಂದಾಗಿ ಪಣಜಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು ಬಿಜೆಪಿ ಕಾರ್ಯಕರ್ತರ ಒಂದು ತಂಡ ಉತ್ಪಲ್ ಪಾರಿಕ್ಕರ್ ಸ್ಪರ್ಧೆಗೆ ಒತ್ತಾಯಿಸುತ್ತಿದೆ.
ಪಣಜಿ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಆಹ್ವಾನದೊಂದಿಗೆ ಬಿಜೆಪಿ ಮುಖಂಡರು ನಿಮ್ಮನ್ನು ಸಂಪರ್ಕಿಸಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಉತ್ಪಲ್, ತಂದೆ ನಿಧನರಾಗಿ ಎರಡು ವಾರವೂ ಆಗಿಲ್ಲ. ಇದುವರೆಗೆ ಅಂತಹ ಯಾವುದೇ ಚರ್ಚೆ ನಡೆದಿಲ್ಲ ಎಂದರು. ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಅವಿನಾಶ್ ರಾಯ್ ಖನ್ನ ಕೆಲ ದಿನಗಳ ಹಿಂದೆ ಉತ್ಪಲ್ ಪಾರಿಕ್ಕರ್ ಮತ್ತು ಅವರ ಸಹೋದರ ಅಭಿಜಿತ್ ಪಾರಿಕ್ಕರ್ರನ್ನು ಭೇಟಿ ಮಾಡಿ ಬಿಜೆಪಿ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಒತ್ತಾಯಿಸಿದ್ದರು.
Next Story