ಮತದಾರರ ದಿಕ್ಕುತಪ್ಪಿಸುವ ಷಡ್ಯಂತ್ರ: ಸುಮಲತಾ ಆರೋಪ

ಮಂಡ್ಯ, ಮಾ.31: ಮತಪೆಟ್ಟಿಗೆಯ ಕ್ರಮ ಸಂಖ್ಯೆಯಲ್ಲೂ ರಾಜಕೀಯ ಬೆರಸಿ ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡಲಾಗಿದೆ ಎಂದು ಲೋಕಸಭಾ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಆರೋಪಿಸಿದ್ದಾರೆ.
ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭ್ಯರ್ಥಿಯ ಹೆಸರಿನ ವರ್ಣಮಾಲೆ ಅನುಸಾರ ಮತಪೆಟ್ಟಿಗೆಯ ಕ್ರಮ ಸಂಖ್ಯೆಯನ್ನು ನೀಡಲಾಗುತ್ತದೆ. ಆದರೆ, ಚುನಾವಣಾ ಸಿಬ್ಬಂದಿ ಮುಖ್ಯಮಂತ್ರಿಗಳ ರಾಜಕೀಯ ಪ್ರಭಾವಕ್ಕೆ ಮಣಿದು ಈ ನಿಯಮವನ್ನು ಉಲ್ಲಂಘಿಸಿ ತಮಗೆ ಅನ್ಯಾಯ ಮಾಡಿದ್ದಾರೆಂದು ದೂರಿದರು.
ನನ್ನ ಹೆಸರು ಎ.ಅಂಬರೀಷ್. ಅದರ ಪ್ರಕಾರ ಇತರರಿಗಿಂತ ಮುನ್ನವೇ ನನ್ನ ಕ್ರಮ ಸಂಖ್ಯೆ ಇರಬೇಕಿತ್ತು. ಆದರೆ, ದುರುದ್ದೇಶದಿಂದ ಕಣಕ್ಕಿಳಿದಿರುವ ಮೂವರು ಸುಮಲತಾರ ಪೈಕಿ ಒಬ್ಬರ ಹೆಸರನ್ನು ನನಗಿಂತ ಮೊದಲು, ಇನ್ನಿಬ್ಬರ ಹೆಸರನ್ನು ನನ್ನ ನಂತರವೂ ಸೇರಿಸಲಾಗಿದೆ. ನನಗೆ ಕ್ರಮ ಸಂಖ್ಯೆ 20 ನೀಡಿರುವ ಉದ್ದೇಶದಲ್ಲಿ ರಾಜಕೀಯ ಷಡ್ಯಂತ್ರ ತಳ್ಳಿಹಾಕಲು ಸಾಧ್ಯವೇ ಇಲ್ಲವೆಂದು ಅವರು ಪ್ರತಿಪಾದಿಸಿದರು.
ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿಯೇ ಮತಪೆಟ್ಟಿಗೆಯ ಮೊದಲಲ್ಲಿಯೇ ನಿಖಿಲ್ ಹೆಸರು ಇರುತ್ತದೆ, ಗಮನಿಸಿ ಮತ ನೀಡಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಜನರಿಗೆ ಕರೆ ನೀಡಿದ್ದರು. ಅಂತೆಯೇ ಮತಪೆಟ್ಟಿಗೆಯಲ್ಲಿ ನಿಖಿಲ್ ಕ್ರಮ ಸಂಖ್ಯೆ 1ನ್ನು ನೀಡಲಾಗಿದೆ. ರಾಜಕೀಯ ಪ್ರಭಾವಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ ಎಂದು ಅವರು ತಮ್ಮ ಆರೋಪವನ್ನು ಸಮರ್ಥಿಸಿಕೊಂಡರು.
ನಾನು ನಾಮಪತ್ರ ಸಲ್ಲಿಸಿ ರ್ಯಾಲಿ ನಡೆಸುವ ವೇಳೆ ಕೇಬಲ್ ನೆಟ್ವರ್ಕ್ ಕಟ್ ಮಾಡಿ ಟಿವಿ ಚಾನಲ್ಗಳು ಪ್ರಸಾರವಾಗದಂತೆ ನೋಡಿಕೊಂಡಿದ್ದರು. ಇವತ್ತೂ ಸಹ ನನ್ನ ಸುದ್ದಿಗೋಷ್ಠಿಯನ್ನು ಟಿವಿಗಳು ಪ್ರಸಾರ ಮಾಡುವುದನ್ನು ತಡೆಗಟ್ಟಲು ಆ ಕೆಲಸವನ್ನು ಪುನರಾವರ್ತಿಸಿದ್ದಾರೆ ಎಂದು ಅವರು ಆರೋಪಿಸಿದರು.
ನಿಖಿಲ್ ನಾಮಪತ್ರ ಸಿಂಧು ಪ್ರಕರಣಕ್ಕೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುಮಲತಾ, ನಾಮಪತ್ರ ಪರಿಶೀಲನೆ ವೇಳೆ ನಮಗೆ ಅನ್ಯಾಯವಾಗಿದೆ ಎಂಬುದು ಕಂಡುಬಂದಿತು. ಹಾಗಾಗಿ ಅದನ್ನು ಪ್ರಶ್ನಿಸಿದ್ದೇವೆ, ಅದು ನಮ್ಮ ಹಕ್ಕು. ನ್ಯಾಯ ಸಿಗುವವರೆಗೂ ಹೋರಾಟ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಚುನಾವಣಾಧಿಕಾರಿಗೆ ಕೆಲಸದ ಒತ್ತಡಗಳು ಇರುತ್ತವೆ. ಹಾಗಂತ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯ ಮಾಡಬಾರದು. ಎಲ್ಲ ಅಭ್ಯರ್ಥಿಗಳನ್ನು ಸರಿಸಮನಾಗಿ ಕಾಣುವ ಮೂಲಕ ನ್ಯಾಯ ಸಮ್ಮತ ಚುನಾವಣೆ ನಡೆಸಬೇಕು. ಒತ್ತಡ ಹಾಗೂ ಗೊಂದಲಗಳನ್ನು ಎದುರಿಸಲು ಸಾಧ್ಯವಾಗದಿದ್ದರೆ, ಅವರೇ ಸ್ವತಃ ಬೇರೆಡೆಗೆ ವರ್ಗಾವಣೆ ಮಾಡಿಸಿಕೊಂಡು ಹೋಗಲಿ. ಅವರ ಜಾಗಕ್ಕೆ ಮತ್ತೊಬ್ಬ ದಕ್ಷ ಅಧಿಕಾರಿಯನ್ನು ನೇಮಿಸಲಿ. ಕೇಂದ್ರ ಚುನಾವಣಾ ಆಯೋಗಕ್ಕೆ ನಾವು ಈಗಾಗಲೇ ದೂರು ನೀಡಿದ್ದು, ಮಂಡ್ಯ ಲೋಕಸಭಾ ಕ್ಷೇತ್ರವನ್ನು ಸೂಕ್ಷ್ಮ ಕ್ಷೇತ್ರವೆಂದು ಪರಿಗಣಿಸಿ ನ್ಯಾಯ ಹಾಗೂ ಪಾರದರ್ಶಕ ಚುನಾವಣೆ ನಡೆಸುವಂತೆ ಮನವಿ ಮಾಡಿದ್ದೇವೆ ಎಂದು ಅವರು ತಿಳಿಸಿದರು.
ನನ್ನ ಕ್ರಮ ಸಂಖ್ಯೆ ಮೇಲೆ ಕೆಳಗೆ ಇತರ ಸುಮಲತಾರ ಕ್ರಮ ಸಂಖ್ಯೆ ನೀಡಿ ಮತದಾರರಲ್ಲಿ ಗೊಂದಲ ಮೂಡಿಸಲು ಯತ್ನಿಸಲಾಗಿದೆ. ಇದರಿಂದ ಕೆಲವು ಮತಗಳು ವ್ಯತ್ಯಾಸವಾಗಬಹುದು. ಆದರೆ, ಪ್ರಜ್ಞಾವಂತ ಮತದಾರರು ತಮಗೆ ಬೆಂಬಲ ನೀಡಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.








