ಭ್ರಷ್ಟರಿಗೆ ಪ್ರೋತ್ಸಾಹ ನೀಡುವುದೇ ಸಮ್ಮಿಶ್ರ ಸರ್ಕಾರದ ಉದ್ದೇಶ: ಸ್ಮೃತಿ ಇರಾನಿ

ಕೋಲಾರ: ಭ್ರಷ್ಟರಿಗೆ ಪ್ರೋತ್ಸಾಹ ನೀಡುವುದೇ ಸಮ್ಮಿಶ್ರ ಸರ್ಕಾರದ ಉದ್ದೇಶ, ಸಂಸದ ಕೆ.ಎಚ್.ಮುನಿಯಪ್ಪ ಸಮ್ಮಿಶ್ರ ಸರ್ಕಾರದ ರೋಲ್ಮಾಡಲ್, ಇಂತಹ ವ್ಯಕ್ತಿಯನ್ನು ಈ ಚುನಾವಣೆಯಲ್ಲಿ ಮನೆಗೆ ಕಳಿಸಲು ಬಿಜೆಪಿ ಪಕ್ಷಕ್ಕೆ ಮತ ಹಾಕಬೇಕು ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಕರೆ ನೀಡಿದರು.
ನಗರದಲ್ಲಿ ಬಿಜೆಪಿಯಿಂದ ರವಿವಾರ ಹಮ್ಮಿಕೊಂಡಿದ್ದ ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಸ್ಮೃತಿ ಇರಾನಿ ಕಾಂಗ್ರೆಸ್ ನಾಯಕರು ಆಸ್ತಿ ಗಳಿಕೆಯಲ್ಲಿ ವರ್ಷದಿಂದ ವರ್ಷಕ್ಕೆ ಮೇಲುಗೈ ಸಾಧಿಸುತ್ತಿದ್ದಾರೆ’ ಎಂದು ದೂರಿದರು.
‘ಸಂಸದ ಕೆ.ಎಚ್.ಮುನಿಯಪ್ಪ 7 ಬಾರಿ ಸಂಸದರಾದರೂ ಜಿಲ್ಲೆಯ ಸಮಸ್ಯೆಗಳನ್ನು ಬಗೆರಹರಿಸುವಲ್ಲಿ ವಿಫಲರಾಗಿದ್ದಾರೆ. ಜಾತಿ-ಜಾತಿಗಳ ನಡುವೆ ವಿಷಬೀಜ ಭಿತ್ತಿ ಗಲಭೆಗಳನ್ನು ಸೃಷ್ಟಿ ಮಾಡಿಸಿದ್ದಾರೆ. ಕೇಂದ್ರದ ಮಂತ್ರಿಯಾಗಿದ್ದರೂ ಕೈಗಾರಿಕೆಗಳನ್ನು ತಂದು ನಿರುದ್ಯೋಗ ನಿವಾರಣೆ ಮಾಡಿಲ್ಲ. ಇಂತಹ ವ್ಯಕ್ತಿಯನ್ನು ಈ ಚುನಾವಣೆಯಲ್ಲಿ ಮನೆಗೆ ಕಳುಹಿಸಲು ಮತದಾರರು ಕಮಲಕ್ಕೆ ಮತ ಹಾಕಬೇಕು’ ಎಂದು ಕೋರಿದರು.
‘ರಾಜ್ಯದ ಮಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಅಧಿಕಾರ ಸಿಕ್ಕಿದ್ದರೂ ಸ್ವತಂತ್ರವಾಗಿ ಅಧಿಕಾರ ನಡೆಸಲು ಸ್ವತಂತ್ರವಿಲ್ಲ, ನಾನು ರಿಮೋಟ್ ಕಂಟ್ರೋಲ್ನಲ್ಲಿ ಇದ್ದೇನೆ ಎಂದು ಹೋದ ಕಡೆಯಲ್ಲ ಕುಮಾರಸ್ವಾಮಿಗೆ ಕಣ್ಣೀರು ಹಾಕುವುದು ಬಿಟ್ಟರೆ, ಅಭಿವೃದ್ಧಿ ಹೇಗೆ ಮಾಡಬೇಕು ಎಂಬುದರ ಬಗ್ಗೆ ಅರಿವಿಲ್ಲ’ ಎಂದು ವ್ಯಂಗ್ಯವಾಡಿದರು.
‘ಹಿಂದಿನ ಯುಪಿಎ ಸರ್ಕಾರಕ್ಕೆ ಮಹಿಳೆಯರ ಸಮಸ್ಯೆಗಳು ಕಾಣುತ್ತಿರಲಿಲ್ಲ. ಮಹಿಳೆಯರು ಒಲೆ ಊದುತ್ತಾ ಕಷ್ಟ ಪಡುತ್ತಿದ್ದರೂ ಸಮಸ್ಯೆ ನಿವಾರಣೆಗೆ ಮನಸ್ಸು ಬರಲಿಲ್ಲ, ಆದರೆ ಮೋದಿ ಸರ್ಕಾರ ಮಹಿಳೆಯರನ್ನು ಹೊಗೆ ಗೂಡಿನಿಂದ ಮುಕ್ತ ಮಾಡುವ ಸಲುವಾಗಿ ಉಜ್ವಲ ಯೋಜನೆಯಡಿ 30 ಲಕ್ಷ ಮನೆಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ’ ಎಂದರು.
‘ರಾಜ್ಯದಲ್ಲಿನ ಸಮಸ್ಯೆಗಳ ನಿವಾರಣೆಗೆ ಎಂದೂ ಹೋರಾಟ ನಡೆಸದ ಇಲ್ಲಿನ ರಾಜಕಾರಣಿಗಳು ಐಟಿ ದಾಳಿ ನಡೆದರೆ ಕಾಂಗ್ರೆಸ್ ಮತ್ತು ಜೆಡಿಎಸ್ನವರು ಜಂಟಿಯಾಗಿ ಹೋರಾಟ ಮಾಡುತ್ತಾರೆ ಎಂದು ಟೀಕಿಸಿದರು.
‘ಗುತ್ತಿಗೆದಾರರ, ಎಂಜನಿಯರ್ಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸುತ್ತಾರೆ. ಆದರೆ ಭ್ರಷ್ಟರಿಗೆ ಪ್ರೋತ್ಸಾಹ ನೀಡುವುದೇ ಸಮ್ಮಿಶ್ರ ಸರ್ಕಾರದ ಉದ್ದೇಶ. ಕಾಂಗ್ರೆಸ್, ಜೆಡಿಎಸ್ ನಾಯಕರ ಅಕ್ರಮ ಆಸ್ತಿ ಅವರ ಬಳಿ ಇರುವುದರಿಂದ ಬೀದಿಗೆ ಇಳಿದು ಧರಣಿ ನಡೆಸಿದ್ದಾರೆ’ ಎಂದು ಆರೋಪಿಸಿದರು.
‘ಆಯೋಧ್ಯೆಗೆ ಹೋಗುವ ಕಾಂಗ್ರೆಸ್ ಮುಖಂಡರು ರಾಮಮಂದಿರಕ್ಕೆ ಹೋಗೋದಿಲ್ಲ, ಅವರಿಗೆ ಅಲ್ಪಸಂಖ್ಯಾತರ ಮತ ಎಲ್ಲಿ ತಪ್ಪುತ್ತದೆಯೇ ಎಂಬ ಭಯ ಎಂದು ವ್ಯಂಗ್ಯವಾಡಿದರು. ಓಟಿನ ರಾಜಕಾರಣದಲ್ಲಿ ದೇವರನ್ನು ಕಾಂಗ್ರೆಸ್ ದುರುಪಯೋಗಪಡಿಸಿಕೊಂಡಿದೆ. ರಾಮನೇ ಇಲ್ಲ ಎಂದು ಕೋರ್ಟಿಗೆ ಪ್ರಮಾಣ ಪತ್ರ ಸಲ್ಲಿಸಿರುವ ಕಾಂಗ್ರೆಸ್ನವರು ಈಗ ಗಲ್ಲಿಗಲ್ಲಿಯಲ್ಲೂ ರಾಮನ ಜಪ ಮಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.
‘ಪಾಕಿಸ್ತಾನಕ್ಕೆ ಟೊಮೆಟೊ ರಪ್ತು ನಿಲ್ಲಿಸಿದ ಕೋಲಾರ ರೈತರಿಗೆ ಅಭಿನಂದನೆ ಸಲ್ಲಿಸಿದರು. ಆತಂಕವಾದಿಗಳ ಕ್ಯಾಂಪ್ ನಾಶ ಪಡಿಸಲು ಸೈನ್ಯಕ್ಕೆ ಆತ್ಮಸ್ಥೈರ್ಯ ತುಂಬಿದ್ದು ಮೋದಿಯೇ ಹೊರತೂ ಕಾಂಗ್ರೆಸ್ಸಿಗರಲ್ಲ ಎಂದು ತಿಳಿಸಿದರು.
‘ಮೋದಿ ರಾಜ್ಯದ 1.40 ಲಕ್ಷ ಜನಧನ ಖಾತೆ ಆರಂಭ, ಮುದ್ರಾ ಯೋಜನೆಯಲ್ಲಿ 1.30 ಲಕ್ಷ ಯುವಕರಿಗೆ ರೂ. 56 ಸಾವಿರ ಕೋಟಿ ಅನುದಾನ ನೀಡಿ ಉದ್ಯೋಗ ಕಲ್ಪಿಸಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರಕಾರ ರಾಜ್ಯದಲ್ಲಿ 49 ಲಕ್ಷ ಮನೆಗಳಿಗೆ ಶೌಚಾಲಯ ಕಟ್ಟಿಸಿಕೊಟ್ಟು ಮಹಿಳೆಯರ ಮಾನ ರಕ್ಷಣೆ ಮಾಡಿದೆ, ಸ್ವಾಭಿಮಾನದಿಂದ ಬದುಕುವಂತೆ ಮಾಡಿದೆ’ ಎಂದು ಹೇಳಿದರು.
ಕೇಂದ್ರ ಸರ್ಕಾರ ರೈತರಿಗಾಗಿ ಕಿಸಾನ್ ಆರೋಗ್ಯ ಕಾರ್ಡ್ ವಿತರಿಸಿ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಕೆಲಸ ಮಾಡಿದೆ. 12 ಕೋಟಿ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ರೂ.6 ಸಾವಿರ ಪರಿಹಾರ ನೀಡಲು ಕ್ರಮ ಕೈಗೊಂಡಿದೆ.ಆದರೆ ರಾಜ್ಯ ಸರ್ಕಾರ ಇದುವರೆಗೂ ರೈತರ ಪಟ್ಟಿ ಸಲ್ಲಿಸಿಲ್ಲ ಎಂದು ದೂರಿದರು.
ಏಳು ಭಾರಿಯಿಂದ ಸಂಸದರಾಗಿ ಆಯ್ಕೆಯಾಗಿರುವ ಕೆ.ಎಚ್.ಮುನಿಯಪ್ಪ ಕ್ಷೇತ್ರದಲ್ಲಿ ಯಾವುದೇ ಶಾಶ್ವತ ಕೆಲಸ ಮಾಡಿಲ್ಲ. ಈ ವ್ಯಕ್ತಿಗೆ ಇನ್ನಾದರೂ ಕ್ಷೇತ್ರದ ಜನ ವಿಶ್ರಾಂತಿ ಕೊಡಬೇಕು’ ಎಂದು ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ಮತದಾರರಿಗೆ ಮನವಿ ಮಾಡಿದರು.
ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆ ರಣಕಹಳೆ ಮೊಳಗಿಸಲಾಗಿದೆ. ಯಾವ ಭಾಗಕ್ಕೆ ಹೋದರೂ ಮೋದಿ ಅಲೆ ಬೀಸುತ್ತಿದೆ. ಮೋದಿಯನ್ನು ಪ್ರಧಾನಿ ಮಾಡಲು ಇಲ್ಲಿನ ಜನ ನನ್ನನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ನದಿ ಜೋಡಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಸಂಸತ್ತಿನಲ್ಲಿ ದನಿಯೆತ್ತುತ್ತೇನೆ. ಆದ್ದರಿಂದ ಜನತೆ ಆಶೀರ್ವಾದ ಮಾಡಬೇಕು. ಸಂಸದ ಕೆ.ಎಚ್.ಮುನಿಯಪ್ಪ ಜಿಲ್ಲೆಗೆ ಯಾವುದೇ ಶಾಶ್ವತ ಯೋಜನೆಗಳನ್ನು ನೀಡಿಲ್ಲ. ಯುವಕರಿಗೆ ಉದ್ಯೋಗ ಕಲ್ಪಿಸಿಲ್ಲ, ರೈತರ ಸಮಸ್ಯೆಗಳು ತೀವ್ರಗೊಳ್ಳುತ್ತಿವೆ ಎಂದು ಆಪಾದಿಸಿದರು.
‘ರಾಹುಲ್ ಗಾಂಧಿ ವಿರುದ್ಧ ಸ್ಮೃತಿ ಇರಾನಿ ಸ್ಪರ್ಧಿಸಿದ್ದಾರೆ. ಇರಾನಿಯವರ ಗೆಲುವು ಖಚಿತ. ದೇಶದ ಹಿತಕ್ಕಾಗಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು. ಆ ಜವಾಬ್ದಾರಿ ಜನಪರ ಮೇಲಿದೆ’ ಎಂದು ಹೇಳಿದರು.
ಚುನಾವಣಾ ಸಂಚಾಲಕ ಕೃಷ್ಣಾರೆಡ್ಡಿ, ಮಾಜಿ ಶಾಸಕ ವೈ.ಸಂಪಂಗಿ, ಎಸ್ಸಿ ಮೋರ್ಚಾ ಅಧ್ಯಕ್ಷ ಚಿ.ನಾ.ರಾಮು, ವಕ್ತಾರ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟಮುನಿಯಪ್ಪ, ಯುವ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಓಂ ಶಕ್ತಿ ಚಲಪತಿ, ನಗರ ಘಟಕದ ಅಧ್ಯಕ್ಷ ಪಿ.ನಾರಾಯಣಸ್ವಾಮಿ ಹಾಜರಿದ್ದರು.







