ಕೊಲೆ ಆರೋಪಿ ಬೆಂಕಿ ರಾಜ ಆಸ್ಪತ್ರೆಯಿಂದ ಪರಾರಿ: ಇಬ್ಬರು ಪೇದೆಗಳು ಅಮಾನತು
ಬೆಂಗಳೂರು, ಎ.3: ಕೊಲೆ ಪ್ರಕರಣವೊಂದರ ಸಂಬಂಧ ಪೊಲೀಸರ ವಶದಲ್ಲಿದ್ದ ರಾಜೇಂದ್ರ ಯಾನೆ ಬೆಂಕಿ ರಾಜ ಆಸ್ಪತ್ರೆಯಿಂದ ಪರಾರಿಯಾಗಿದ್ದ ಹಿನ್ನೆಲೆ ದಕ್ಷಿಣ ವಿಭಾಗ ಡಿಸಿಪಿ ಅಣ್ಣಾಮಲೈ ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನತುಗೊಳಿಸಿದ್ದಾರೆ.
ಇಂದು ಬೆಳಗಿನ ಜಾವ 4:30ಕ್ಕೆ ಬೆಂಕಿ ರಾಜೇಂದ್ರ ವಿಕ್ಟೋರಿಯಾ ಆಸ್ಪತ್ರೆಯಿಂದ ಪರಾರಿಯಾಗಿದ್ದ. ಈ ಕೂಡಲೇ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ, ಬೆಂಕಿ ರಾಜನನ್ನು ಹುಡುಕಲು ಕ್ಷಿಪ್ರವಾಗಿ 15 ತಂಡ ರಚನೆ ಮಾಡಿ ನಗರದೆಲ್ಲೆಡೆ ಕಾರ್ಯಾಚರಣೆ ನಡೆಸಿದರು.
ಇದರಲ್ಲಿ ಮೂರು ತಂಡ ವಿಕ್ಟೋರಿಯಾ ಆಸ್ಪತ್ರೆ ಸುತ್ತುವರೆದಿತ್ತು. ಬಳಿಕ 1 ಗಂಟೆಯ ಒಳಗಾಗಿ ಆರೋಪಿಯನ್ನು ಪೊಲೀಸರು ಹಿಡಿದಿದ್ದರು. ಆದರೆ, ಕರ್ತವ್ಯ ಲೋಪ ಹಿನ್ನೆಲೆ, ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನುತು ಮಾಡಲಾಗಿದೆ.
ಆರೋಪಿ ಬೆಂಕಿ ರಾಜ, ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಎಟಿಎಂಯೊಂದರ ಭದ್ರತಾ ಸಿಬ್ಬಂದಿ ಓರ್ವನನ್ನು ಕೊಲೆಗೈದಿದ್ದ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಇದ್ದು, ಈತನನ್ನು ಪಿಸ್ತೂಲಿನಿಂದ ಗುಂಡು ಹಾರಿಸಿ ಇತ್ತೀಚಿಗೆ ಬಂಧಿಸಲಾಗಿತ್ತು. ಬಳಿಕ ಆರೋಪಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.