ಶಿರೂರು ಮಠದ ವ್ಯವಸ್ಥೆ ಸರಿಪಡಿಸಿ ಉತ್ತರಾಧಿಕಾರಿ ನೇಮಕ: ದ್ವಂದ್ವ ಮಠವಾದ ಸೋದೆಶ್ರೀಗಳ ಭರವಸೆ

ಉಡುಪಿ, ಎ.7: 9 ತಿಂಗಳ ಹಿಂದೆ ಹಠಾತ್ತನೆ ನಿಧನರಾದ ಶಿರೂರು ಮಠದ ಶ್ರೀಲಕ್ಷ್ಮಿವರ ತೀರ್ಥ ಶ್ರೀಪಾದರ ಉತ್ತರಾಧಿಕಾರಿ ನೇಮಕಕ್ಕೆ ಮುನ್ನ ಶಿರೂರು ಮಠದಲ್ಲಿರುವ ಅವ್ಯವಸ್ಥೆಯನ್ನು ಸರಿಪಡಿಸಬೇಕಾಗಿದೆ. ಪೀಠವನ್ನೇರುವ ವಟು, ಕೋರ್ಟು-ಕಚೇರಿ ಎಂದು ತಲೆಕೆಡಿಸಿಕೊಳ್ಳದೇ ಭಕ್ತಿ, ಜ್ಞಾನ ಹಾಗೂ ವೈರಾಗ್ಯ ದಲ್ಲೇ ಗಮನ ಕೇಂದ್ರೀಕರಿಸಬೇಕು ಎಂದು ಶಿರೂರು ಮಠದ ದ್ವಂದ್ವ ಮಠವಾದ ಶ್ರೀಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭತೀರ್ಥರು ಹೇಳಿದ್ದಾರೆ.
ಶ್ರೀಲಕ್ಷ್ಮಿವರ ತೀರ್ಥರು ಹರಿಪಾದ ಸೇರಿರುವುದರಿಂದ ಶಿರೂರು ಮಠದ ಮುಂದಿನ ಭವಿಷ್ಯ, ಉತ್ತರಾಧಿಕಾರಿಯ ಆಯ್ಕೆ ವಿಷಯದ ಕುರಿತು ಚರ್ಚಿಸಲು ಮಠದ ಶಿಷ್ಯವೃಂದ ಇಂದು ಶಿರೂರು ಮಠದಲ್ಲಿ ಕರೆದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಮಠದ ಉತ್ತರಾಧಿಕಾರಿಯ ಆಯ್ಕೆಯ ಕುರಿತು ಮಾತನಾಡಿದ ಸೋದೆಶ್ರೀ, ನಾವು ಯಾರೊ ಒಬ್ಬರನ್ನು ಪೀಠಕ್ಕೆ ಉತ್ತರಾಧಿಕಾರಿಯಾಗಿ ಕೂರಿಸಬಹುದು. ಆದರೆ 800 ವರ್ಷಗಳ ಭವ್ಯ ಪರಂಪರೆ ಇರುವ ಮಠಕ್ಕೆ ಸಮರ್ಥ ಉತ್ತರಾಧಿ ಕಾರಿಯನ್ನೇ ಆಯ್ಕೆ ಮಾಡಬೇಕು. ಇದಕ್ಕೆ ಜಾತಕದ ಪರಿಶೀಲನೆಯೊಂದೇ ಸಾಕಾಗದು. ಸೂಕ್ಷ್ಮವಾಗಿ ಪರಿಶೀಲಿಸಿ, ಕೆಲ ವರ್ಷ ಆತನನ್ನು ಪರೀಕ್ಷಿಸಿದ ಬಳಿಕ ಎಲ್ಲಾ ರೀತಿಯಲ್ಲೂ ಸಮರ್ಥನೆಂದು ಕಂಡುಬಂದ ಮೇಲೆ ಸನ್ಯಾಸತ್ವ ವನ್ನು ನೀಡಬೇಕಾಗುತ್ತದೆ ಎಂದರು.
ಉತ್ತರಾಧಿಕಾರಿಯ ಆಯ್ಕೆಗೆ ಮುನ್ನ ಶಿರೂರು ಮಠದ ಪರಿಸ್ಥಿತಿಯನ್ನು ಸರಿಪಡಿಸಬೇಕಾಗಿದೆ. ಅಲ್ಲಿ ದೊಡ್ಡ ಹೊಂಡವಿದೆ. ಸದ್ಯದ ಪರಿಸ್ಥಿತಿಯಲ್ಲಿ ಯಾರನ್ನು ತಂದರೂ ಸಮಸ್ಯೆ ಬಗೆಹರಿಯುವುದಿಲ್ಲ. ಮಠದ ಪರಿಸ್ಥಿತಿ ನೋಡಿ, ಕೇಳಿ ಯಾರೂ ಶಿಷ್ಯತ್ವ ಸ್ವೀಕಾರಕ್ಕೆ ಯಾರೂ ಮುಂದೆ ಬರುತ್ತಿಲ್ಲ ಎಂದರು.
ಶಿರೂರು ಸ್ವಾಮೀಜಿ ಅವರು, ಉದ್ಯಮಿ ತೋನ್ಸೆ ಜಯಕೃಷ್ಣ ಶೆಟ್ಟಿ ಅವರೊಂದಿಗೆ ಕಲ್ಸಂಕದ ಮಠದ ಜಾಗದಲ್ಲಿ ಪ್ರಾರಂಭಿಸಿದ ಕನಕ ಮಹಲ್ಗಾಗಿ ಮಣಿಪಾಲದ ಕಾರ್ಪೋರೇಷನ್ ಬ್ಯಾಂಕಿನಿಂದ 25 ಕೋಟಿ ರೂ. ಸಾಲ ಪಡೆದಿದ್ದು, ಇದರಲ್ಲಿ 15 ಕೋಟಿ ರೂ.ಗಳನ್ನು ಬ್ಯಾಂಕ್ ಬಿಡುಗಡೆಗೊಳಿಸಿತ್ತು. ಆದರೆ ಅವರೊಳಗೆ ಭಿನ್ನಮತ ಕಾಣಿಸಿಕೊಂಡು ನಿರ್ಮಾಣ ಅರ್ಧಕ್ಕೆ ನಿಂತಿತ್ತು. ಆಗ ಬ್ಯಾಂಕ್ ಪಾವತಿಸಿದ ಹಣವನ್ನು ಮರುಪಾವತಿಸುವಂತೆ ನೋಟೀಸು ನೀಡಿದ್ದಲ್ಲದೇ ಕೊನೆಗೆ ಅದನ್ನು ಜಪ್ತಿ ಮಾಡಿತ್ತು. ಈ ಬಗ್ಗೆ ಹೈಕೋರ್ಟ್ನಲ್ಲಿ ಕೇಸು ನಡೆಯುತ್ತಿದೆ ಎಂದರು.
ಇದರೊಂದಿಗೆ ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ ಶಿರೂರು ಸ್ವಾಮೀಜಿಗೆ 17.36 ಕೋಟಿ ರೂ. ದಂಡವಿಧಿಸಿ ಸೋದೆ ಮಠಕ್ಕೆ ನೋಟೀಸು ಕಳುಹಿಸಿದೆ. ಇದರಲ್ಲಿ ಕನಿಷ್ಠ ಮೂರೂವರೆ ಕೋಟಿ ರೂ.ಗಳನ್ನು ಕಟ್ಟಬೇಕಾಗಿದೆ. ಅಲ್ಲದೇ ಶಿರೂರಿನಲ್ಲಿರುವ ಮೂಲಮಠ ಜೀರ್ಣಾವಸ್ಥೆಯಲ್ಲಿದ್ದು, ಅವರ ನವೀಕರಣಕ್ಕೆ 25 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗಿದೆ. ಅಲ್ಲೇ ಸಮೀಪದ ಪಾಪುಜೆ ಮಠ ಹಾಗೂ ವೃಂದಾವನದ ಜೀರ್ಣೋದ್ಧಾರವೂ ನಡೆಯಬೇಕಿದೆ ಎಂದರು.
ಶಿರೂರು ಶ್ರೀಗಳಲ್ಲಿ 10 ಲಕ್ಷ ರೂ.ಫಿಕ್ಸೆಡ್ ಡಿಪಾಸಿಟ್ ಬಿಟ್ಟರೆ ಮಠದಲ್ಲಿ ಬೇರೆ ಆರ್ಥಿಕ ಸಂಪತ್ತು ಇರಲಿಲ್ಲ. ಮಠಕ್ಕೆ ಸೇರಿದ ಕೆಲವು ಕಟ್ಟಡಗಳ ಬಾಡಿಗೆ ಬರುತಿದ್ದು, ಅದರಿಂದಲೇ ಮಠದ ದಿನದ ಖರ್ಚನ್ನು ನಿಭಾಯಿಸಲಾಗುತ್ತಿದೆ. ಇಂಥ ಸ್ಥಿತಿಯಲ್ಲಿ ಉತ್ತರಾಧಿಕಾರಿಯನ್ನು ನೇಮಿಸಿದರೆ ಅವರು ಕೋರ್ಟು ಕಚೇರಿ ಅಲೆಯಬೇಕಾಗುತ್ತದೆ ಎಂದರು.
ಕನಕ ಮಹಲ್: ಶಿರೂರು ಮಠದ ಆರ್ಥಿಕ ಸಂಕಷ್ಟಗಳ ವರದಿ ತೆರೆದಿಟ್ಟ ಸೋದೆ ಮಠದ ರತ್ನಕುಮಾರ್ ಅವರು, ಶಿರೂರು ಶ್ರೀಗಳು, ಜಯಕೃಷ್ಣ ಶೆಟ್ಟಿ ತೋನ್ಸೆ ಅವರ 70:30ರ ಪ್ರಮಾಣದಲ್ಲಿ ಒಡಂಬಡಿಕೆ ಮಾಡಿಕೊಂಡಿದ್ದರು. ಇದಕ್ಕಾಗಿ ಕಾರ್ಪ್ ಬ್ಯಾಂಕಿನಿಂದ 25 ಕೋಟಿ ರೂ.ಸಾಲ ಪಡೆದಿದ್ದರು. ಬ್ಯಾಂಕ್ 15.5 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿತ್ತು. ಮುಂದೆ ಇಬ್ಬರ ಮಧ್ಯೆ ಭಿನ್ನಮತ ತಲೆದೋರಿ ಯೋಜನೆ ನೆನೆಗುದಿಗೆ ಬಿತ್ತು.
ಈ ಮಧ್ಯೆ ಕನಕ ಮಹಲ್ನಲ್ಲಿ ಅಂಗಡಿ ಬಾಡಿಗೆ ನೀಡುವ ಭರವಸೆಯೊಂದಿಗೆ ಜಯಕೃಷ್ಮ ಶೆಟ್ಟಿ ಹಲವರಿಗೆ ಕೋಟ್ಯಾಂತರ ರೂ.ಮುಂಗಡ ಪಡೆದಿದ್ದರು. ಯೋಜನೆ ನಿಂತಾಗ ನೀಡಿದ ಹಣ ವಾಪಾಸು ಬರದಿದ್ದಾಗ ಅವರು ನ್ಯಾಯಾಲಯದ ಮೆಟ್ಟಲು ಹತ್ತಿದರು ಎಂದು ರತ್ನಕುಮಾರ್ ವಿವರಿಸಿದರು.
ಈ ಹಂತದಲ್ಲಿ ಲಕ್ಷ್ಮಿವರತೀರ್ಥರು ಬ್ಯಾಂಕಿನಿಂದ ಪಡೆದ 15.5 ಕೋಟಿ ರೂ.ಗಳನ್ನು ಹಂತಹಂತವಾಗಿ ಹಿಂದಿರುಗಿಸಲು ಮುಂದಾದರು. ತೀರಿಕೊಳ್ಳುವ ಮೊದಲು ಅವರು ಒಟ್ಟು 8.5 ಕೋಟಿ ರೂ.ಗಳನ್ನು ಹಿಂದಿರುಗಿಸಿದ್ದರು. ಈ ಮಧ್ಯೆ ಬ್ಯಾಂಕ್ ಕಟ್ಟಡ, ಜಾಗವನ್ನು ಜಪ್ತಿ ಮಾಡಿತು. ಈಗ ಬ್ಯಾಂಕ್ ಒಟ್ಟು 19.5 ಕೋಟಿ ರೂ.ನೀಡಬೇಕೆಂದು ಕೇಳುತ್ತಿದೆ. ಕಾನೂನಿನ ಹಗ್ಗಜಗ್ಗಾಟ ನಡೆಯುತಿದೆ. ಅಸಲು ಹಣವಾದ 7 ಕೋಟಿ ರೂ.ಗಳನ್ನು ನೀಡಲು ನಾವು ಸಿದ್ಧರಿದ್ದು, ಬ್ಯಾಂಕಿನ ಎಂಡಿಯವರೊಂದಿಗೆ ಮಾತುಕತೆ ನಡೆಯುತ್ತಿದೆ ಎಂದರು.
ಅದೇ ರೀತಿ ಆದಾಯ ತೆರಿಗೆ ಇಲಾಖೆಯೂ 17.34 ಕೋಟಿ ರೂ. ಇನ್ಕಮ್ ಟ್ಯಾಕ್ಸ್ ಕಟ್ಟಲು ನೋಟೀಸು ನೀಡಿದೆ. ಇದೀಗ ಅವರ ನಿಜ ಸ್ಥಿತಿ ತಿಳಿಸಿದ ಬಳಿಕ ಶೇ.80ರಷ್ಟು ಬಿಟ್ಟು ಶೇ.20ರಷ್ಟು ಅಂದರೆ 3.46 ಕೋಟಿ ರೂ.ಗಳನ್ನು ಪಾವತಿಸಲು ಹೇಳಿದೆ. ಇದಕ್ಕಾಗಿ ಶಿರೂರು ಮಠದ ಕೆನರಾ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಿಕೊಂಡಿದೆ ಎಂದರು.
ಶಿರೂರು ಮಠದ ಶಿಷ್ಯವೃಂದದ ಪರವಾಗಿ ಮಂಗಳೂರಿನ ಪ್ರೊ.ಎಂ.ಬಿ. ಪುರಾಣಿಕ್, ಉಡುಪಿಯ ಬಾಲಾಜಿ ರಾಘವೇಂದ್ರ ಆಚಾರ್ಯ, ನ್ಯಾಯವಾದಿ ಶ್ರೀಪತಿ ಆಚಾರ್ಯ ಹಾಗೂ ಮಂಗಳೂರಿನ ಡಾ.ಕಬ್ಬಿನಾಲೆ ಬಾಲಕೃಷ್ಮ ಭಾರದ್ವಾಜ ಮಾತನಾಡಿ, ಸೋದೆ ಶ್ರೀಗಳಿಗೆ ಸಂಪೂರ್ಣ ಸಹಕಾರದ ಭರವಸೆ ನೀಡಿದರು.
ಉತ್ತರಾಧಿಕಾರಿಯ ಆಯ್ಕೆ
ಸದ್ಯಕ್ಕೆ ಶಿರೂರು ಮಠದ ಉತ್ತರಾಧಿಕಾರಿಯಾಗಿ ಒಬ್ಬರನ್ನು ನಾವು ಆಯ್ಕೆ ಮಾಡಿದ್ದೇವೆ. ಸದ್ಯಕ್ಕೆ ಅವರ ಹೆಸರು, ವಿವರಗಳನ್ನು ನಾವು ಬಹಿರಂಗ ಪಡಿಸುವುದಿಲ್ಲ. ಅವರು ನಮ್ಮ ಸೋದೆ ಗುರುಮಠದಲ್ಲಿ ಅಧ್ಯಯನ ಮಾಡುತಿದ್ದಾರೆ. ಅವರನ್ನು 2-3ವರ್ಷ ಪರಿಶೀಲಿಸಿದ ಬಳಿಕವೇ ಸನ್ಯಾಸತ್ವ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸೋದೆಶ್ರೀಗಳು ನುಡಿದರು.
ಶಿರೂರು ಮಠದ ಹಿಂದಿನ ಬ್ರಾಂಡ್ ತೆಗೆದು ಹೊಸ ಬ್ರಾಂಡ್ನ್ನು ನೀಡ ಬೇಕು. ಗಡಿಬಿಡಿ ಮಾಡಿಕೊಟ್ಟರೆ ಸಮಸ್ಯೆಯಾಗಬಹುದು. ಮಠಕ್ಕೆ ಸಮರ್ಥ ಉತ್ತರಾಧಿಕಾರಿಯನ್ನೇ ನೀಡುತ್ತೇವೆ. ಮಠದ ಶಿಷ್ಯರಾದ ನೀವೆಲ್ಲರೂ ನಮಗೆ ಸಲಹೆ, ಸೂಚನೆ, ಸಹಕಾರ ನೀಡುತ್ತೀರಿ ಎಂದರು.








