ರಾಜಧಾನಿ ಬೆಂಗಳೂರಿನೆಲ್ಲೆಡೆ ಹಣ್ಣುಗಳ ರಾಜನ ಘಮಲು...!
![ರಾಜಧಾನಿ ಬೆಂಗಳೂರಿನೆಲ್ಲೆಡೆ ಹಣ್ಣುಗಳ ರಾಜನ ಘಮಲು...! ರಾಜಧಾನಿ ಬೆಂಗಳೂರಿನೆಲ್ಲೆಡೆ ಹಣ್ಣುಗಳ ರಾಜನ ಘಮಲು...!](https://www.varthabharati.in/sites/default/files/images/articles/2019/04/7/185874.jpg)
ಸಾಂದರ್ಭಿಕ ಚಿತ್ರ
ಬೆಂಗಳೂರು, ಎ.7: ಹಣ್ಣುಗಳ ರಾಜನೆಂದೇ ಖ್ಯಾತಿ ಪಡೆದಿರುವ ಮಾವಿನ ಹಣ್ಣುಗಳು ಮುಂಗಾರು ಪೂರ್ವದಲ್ಲೇ ರಾಜಧಾನಿ ಬೆಂಗಳೂರಿಗೆ ಲಗ್ಗೆ ಇಟ್ಟಿದ್ದು, ನಗರದೆಲ್ಲೆಡೆ ಈಗ ಮಾವಿನ ಘಮಲು ಹಬ್ಬಿದೆ.
ಮಾವಿನ ಸುಗ್ಗಿ ಶುರುವಾಗುತ್ತಿದ್ದಂತೆ ತರಹೇವಾರಿ ಮಾವು ಬಿಕರಿಗೆ ಲಭ್ಯವಿದ್ದು, ಸ್ವಾದಿಷ್ಟ ಹಣ್ಣುಗಳು ಕಣ್ಣಿಗೆ ಬೀಳುತ್ತಿವೆ. ಇನ್ನು ಈ ಬಾರಿ ಉಪ್ಪಿನ ಕಾಯಿಗೆ ಹೇಳಿ ಮಾಡಿಸಿದಂತಿರುವ ಮಾವಿನ ಕಾಯಿಗಳು ಮಾರುಕಟ್ಟೆಗೆ ಬಂದಿರುವುದು ವಿಶೇಷ.
ನಗರದ ಪ್ರಮುಖ ಕಡೆ, ಹಣ್ಣಿನ ಮಳಿಗೆಗಳು, ಸೂಪರ್ ಮಾರ್ಕೆಟ್ಗಳು, ಬಜಾರ್ಗಳಲ್ಲಿ ಹವಾನಿಯಂತ್ರಿತ ವಾತಾವರಣದಲ್ಲಿ ಮಾವಿನ ದಾಸ್ತಾನು ಮಾರಾಟಕ್ಕಿದೆ. ಇನ್ನೊಂದೆಡೆ ತಳ್ಳುಗಾಡಿಗಳು, ಬೀದಿಬದಿ ವ್ಯಾಪಾರ ಮಳಿಗೆಗಳಲ್ಲಿ ಭಾರಿ ಪ್ರಮಾಣದಲ್ಲಿ ಮಾವಿನ ಹಣ್ಣಿನ ರಾಶಿ ಕಾಣುತ್ತಿದೆ.
ಜಯಮಹಲ್ ರಸ್ತೆ: ನಗರದ ಜಯಮಹಲ್ ರಸ್ತೆಯ ಫನ್ವರ್ಲ್ಡ್ ಅಕ್ಕ ಪಕ್ಕದ ಖಾಲಿ ಜಾಗದಲ್ಲಿ 100ಕ್ಕೂ ಹೆಚ್ಚು ಮಾವಿನಹಣ್ಣಿನ ಅಂಗಡಿಗಳು ತಲೆ ಎತ್ತುತ್ತಿವೆ. ತಮಿಳುನಾಡಿನ ಸೇಲಂ, ತಿರಕೋಯಿಲೂರು, ಕಾಟಾಡಿ, ಧರ್ಮಪುರಿ ಮೂಲದ ವ್ಯಾಪಾರಿಗಳು ಕಳೆದ 15-20 ವರ್ಷಗಳಿಂದ ಮಾವಿನ ಸುಗ್ಗಿ ಆರಂಭವಾಗುತ್ತಿದ್ದಂತೆ ಕುಟುಂಬ ಸಮೇತ ಬಂದು ಕೆಲ ತಿಂಗಳು ವ್ಯಾಪಾರ ಮಾಡುತ್ತಾರೆ.
ಬೆಲೆ ಜಾಸ್ತಿ?: ಪ್ರಕೃತಿ ವೈಪರೀತ್ಯದ ಹಿನ್ನೆಲೆಯಲ್ಲಿ ಈ ಬಾರಿ ಮಾವಿನ ಆಗಮನ ತಿಂಗಳ ಮಟ್ಟಿಗೆ ತಡವಾಗಿದೆ. ಹೀಗಾಗಿ ಬೇಡಿಕೆ ಹೆಚ್ಚಾಗಿದ್ದು, ಬೆಲೆಯು ತುಸು ಹೆಚ್ಚಿದೆ. ಕಳೆದ ಬಾರಿಗೆ ಹೊಲಿಸಿದರೆ ಕೆ.ಜಿ.ಗೆ 20ರಿಂದ 30 ರೂ. ಹೆಚ್ಚಾಗಿದೆ.
ಯಾವ ಮಾವು?: ಬಾದಾಮಿ, ಹಿಮಾಯತ್, ಮಲ್ಲಿಕಾ, ರಸಪೂರಿ, ಸಿಂಧೂರ, ರತ್ನಗಿರಿ, ತೋತಾಪುರಿ, ದಶೇರಿ, ಕಾಲಾಪಹಾಡ್ , ಕುದಾದಾಸ್, ಬೈಗಾನ್ಪಲ್ಲಿ ಸೇರಿದಂತೆ 16ಕ್ಕೂ ಹೆಚ್ಚಿನ ತಳಿಗಳು ಮಾರುಕಟ್ಟೆಗೆ ಆಗಮಿಸಿವೆ. ಇವುಗಳಲ್ಲಿ ಬಾದಾಮಿ ಹಾಗೂ ಹಿಮಾಯತ್ ತಳಿಗಳು ರುಚಿಭರಿತವಾಗಿದ್ದು, ಗ್ರಾಹಕರ ಆದ್ಯತೆಯ ಹಣ್ಣಾಗಿದೆ ಎಂದು ಎನ್ನುತ್ತಾರೆ ಕೋಲಾರದ ವ್ಯಾಪಾರಿ ಸುರೇಶ್.
ನೆರೆರಾಜ್ಯಗಳ ಹಣ್ಣು ಲಭ್ಯ: ರಾಜ್ಯದಲ್ಲಿ ಈ ಬಾರಿ ಮಾವಿನ ಫಸಲು ತಡವಾದ ಹಿನ್ನೆಲೆ ಹೊರ ರಾಜ್ಯಗಳಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಮಾವು ಬೆಂಗಳೂರಿಗೆ ಪೂರೈಕೆಯಾಗಿದೆ. ಪ್ರಮುಖವಾಗಿ ಆಂಧ್ರಪ್ರದೇಶ, ತಮಿಳುನಾಡಿನ ವಿವಿಧ ಭಾಗಗಳಿಂದ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದು, ಸದ್ಯದಲ್ಲೇ ಚಿಂತಾಮಣಿ, ಶ್ರೀನಿವಾಸಪುರ ಭಾಗಗಳಿಂದ ಮಾವು ಬರಲಿದೆ.
ದರ ಪಟ್ಟಿ (ಕೆ.ಜಿ.ಗೆ)
ತಳಿ-ದರ
*ಹಿಮಾಯತ್ 200 ರೂ.
*ರತ್ನಗಿರಿ 150 ರೂ.
*ಬಾದಾಮಿ 100ರಿಂದ 120 ರೂ.
*ಮಲ್ಗೊವಾ 100 ರಿಂದ 120ರೂ.
*ದಶೇರಿ 100 ರೂ.
*ಕಾಲಾಪಹಡ್ 100 ರೂ.
*ರಸಪೂರಿ 80 ರೂ.
*ಮಲ್ಲಿಕಾ 80 ರೂ.
*ತೊತಾಪುರಿ 60 ರೂ.
*ಸಿಂಧೂರ 50 ರೂ.
ತಗ್ಗಿದ ಇಳುವರಿ..!
ಕಳೆದ ವರ್ಷ ಉತ್ತಮ ಫಸಲು ಬಂದಿತ್ತು. ಆದರೆ, ಈ ಬಾರಿ ಮಾವಿನ ಇಳುವರಿ ಕಡಿಮೆ ಇದೆ. ಬೇಸಿಗೆ ವೇಳೆ ಮಳೆಯಿಂದ ತೇವಾಂಶ ಹೆಚ್ಚಾಗಿ ಮಾವು ಹೂವು ಉದುರಿ ಹೋಯಿತು. ಇದರಿಂದ ಈ ಬಾರಿ ಮಾವಿನ ಕಾಯಿ ಇಳುವರಿ ಕಡಿಮೆಯಾಗಲಿದೆ.
-ಬಾಷಾಸಾಬ್, ವ್ಯಾಪಾರಿ