ಕಾಲುಬಾಯಿ ರೋಗಕ್ಕೆ ಬೆಂಗಳೂರಿನಲ್ಲಿಯೇ ಔಷಧಿ ತಯಾರಿಕೆ
ಬೆಂಗಳೂರು, ಎ.8: ಜಾನುವಾರುಗಳಿಗೆ ಕಾಡುವ ಬಹು ದೊಡ್ಡ ಮಾರಣಾಂತಿಕ ಕಾಯಿಲೆಯಾದ ಕಾಲುಬಾಯಿ ರೋಗಕ್ಕೆ ಬೆಂಗಳೂರಿನಲ್ಲೇ ಔಷಧಿ ತಯಾರಿಕೆಗೆ ಸರಕಾರ ಮುಂದಾಗಿದೆ.
ಕಾಲುಬಾಯಿ ರೋಗ ಒಂದು ಸಾಂಕ್ರಾಮಿಕ ರೋಗವಾಗಿದ್ದು, ಅತಿ ಬೇಗನೇ ಜಾನುವಾರುಗಳಿಂದ ಮತ್ತೊಂದಕ್ಕೆ ಹರಡುತ್ತದೆ. ನೇರ ಸಂಪರ್ಕ, ಗಾಳಿ, ಆಹಾರದಿಂದ ರಾಸುಗಳಿಗೆ ಹರಡುವ ಈ ಖಾಯಿಲೆಗೆ ಪಶುಸಂಗೋಪನ ಇಲಾಖೆಯಿಂದ ರೋಗ ನಿರೋಧಕ ಲಸಿಕೆ ಹಾಕಿಸಲಾಗುತ್ತದೆ.
ಜಾನುವಾರುಗಳಿಗೆ ಹಾಕುವ ಎಲ್ಲ ಲಸಿಕೆಗಳನ್ನೂ ಭಾರತೀಯ ಪಶು ಸಂಶೋಧನಾ ಸಂಸ್ಥೆ ಸಿದ್ಧಪಡಿಸುತ್ತದೆ. ಆದರೆ, ಈ ಕಾಲುಬಾಯಿ ರೋಗದ ಲಸಿಕೆಯನ್ನ ಖಾಸಗಿ ಸಂಸ್ಥೆಯಿಂದ ಖರೀದಿಸಬೇಕಿತ್ತು. ಸದ್ಯ ಬೆಂಗಳೂರಿನಲ್ಲಿರುವ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ ರಾಸುಗಳ ಕಾಲುಬಾಯಿ ರೋಗಕ್ಕೆ ಲಸಿಕೆ ತಯಾರಿಸಲು ಮುಂದಾಗಿದೆ.
ಲಸಿಕೆ ತಯಾರಿಕೆಗೆ ಈಗಾಗಲೇ ಸರಕಾರದಿಂದ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಸಿದ್ಧವಾಗಿದ್ದು, ಯಲಹಂಕದಲ್ಲಿರುವ ಭಾರತೀಯ ಪಶು ಸಂಶೋಧನಾ ಸಂಸ್ಥೆಯಿಂದ 20 ಎಕರೆ ಜಾಗ ತೆಗೆದುಕೊಳ್ಳಲಾಗಿದೆ. ಇನ್ನು 3-4 ವರ್ಷಗಳಲ್ಲಿ ಲಸಿಕೆ ತಯಾರಿಸಲಾಗುತ್ತೆ ಎಂದು ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ನಿರ್ದೇಶಕರಾಗಿರುವ ಎಸ್.ಎಂ.ಭೈರೇಗೌಡ ಮಾಹಿತಿ ನೀಡಿದ್ದಾರೆ.





