ದ.ಕ. ಜಿಲ್ಲೆಯಲ್ಲಿ 10,911 ವಿಕಲಚೇತನ ಮತದಾರರು: ಸಿಇಒ

ಮಂಗಳೂರು, ಎ.9: ದ.ಕ. ಜಿಲ್ಲೆಯಲ್ಲಿ ಎ.18ರಂದು ನಡೆಯುವ ಲೋಕಸಭಾ ಚುನಾವಣೆ ಸಂಬಂಧ ಮತದಾರರ ಜಾಗೃತಿಗಾಗಿ ಸ್ವೀಪ್ ಕಾರ್ಯಕ್ರಮದ ಮುಖಾಂತರ ಹಲವು ಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರಲ್ಲಿ ಅಶಕ್ತರಿಗೆ ಪ್ರಾಧಾನ್ಯತೆ ನೀಡಿ ಅವರಿಗಾಗಿ ವಿಶೇಷ ಸೌಲಭ್ಯಗಳನ್ನು ನೀಡಲಾಗಿದೆ ಎಂದು ಸ್ವೀಪ್ ಸಮಿತಿ ಅಧ್ಯಕ್ಷ ಸಿಇಒ ಡಾ.ಸೆಲ್ವಮಣಿ ಆರ್. ತಿಳಿಸಿದರು.
ಜಿಪಂ ಸಭಾಂಗಣದಲ್ಲಿ ಮಾಹಿತಿ ನೀಡಿದ ಸಿಇಒ, ಜಿಲ್ಲೆಯಲ್ಲಿರುವ ವಿಶೇಷ ಚೇತನರನ್ನು ಜಿಲ್ಲಾ ಅಂಗವಿಕಲ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಈಗಾಗಲೇ ಗುರುತಿಸಿದೆ. ಇವರೆಲ್ಲರೂ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 10,911 ವಿಕಲಚೇತನ ಮತದಾರರಿದ್ದು, ಇವರಲ್ಲಿ ದೈಹಿಕ ವಿಕಲಚೇತನರು 5,756, ಅಂಧರು 829. ಶ್ರವಣದೋಷವುಳ್ಳವರು 1,006, ಬಹುವಿಧ ವಿಕಲಚೇತನರು 3,320. ಅರ್ಹ ಮತದಾರರು ಯಾವುದೇ ಕಾರಣದಿಂದ ಮತದಾನದಿಂದ ವಂಚಿತರಾಗಬಾರದು ಎಂಬುದು ಚುನಾವಣಾ ಆಯೋಗದ ಧ್ಯೇಯ. ಈ ನಿಟ್ಟಿನಲ್ಲಿ ವಿಶೇಷ ಚೇತನರನ್ನು ಗಮನದಲ್ಲಿರಿಸಿ 1,014 ಮತ ಕೇಂದ್ರಗಳಿಗೆ ವಾಹನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.
ಸ್ವಯಂ ಪ್ರೇರಿತರಾಗಿ ಆಗಮಿಸಿ ಮತದಾನ ಮಾಡುವಂತೆ ಪ್ರೇರೇಪಿಸಲು 1,861 ಮತಗಟ್ಟೆಗಳಲ್ಲಿ ರ್ಯಾಂಪ್ ವ್ಯವಸ್ಥೆ, ಮತಗಟ್ಟೆಗಳಲ್ಲಿ ಭೂತಕನ್ನಡಿ ವ್ಯವಸ್ಥೆ ಮತ್ತು 1,014 ಮತಕೇಂದ್ರಗಳಿಗೆ ವಾಹನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.
ಮತದಾನ ಮಾಡಲು ಮತಗಟ್ಟೆಗೆ ಬರುವ ಅಂಧರಿಗೆ ಎಲ್ಲ ಮತದಾನ ಕೇಂದ್ರಗಳಲ್ಲಿ ಕನ್ನಡ ಹಾಗೂ ಇಂಗ್ಲಿಷ್ನಲ್ಲಿ ಬ್ರೈಲ್ ಲಿಪಿ ಮಾದರಿ ಮತಪತ್ರವನ್ನು ಒದಗಿಸಲಾಗುತ್ತಿದೆ. ವಿಕಲಚೇತರನ್ನೊಳಗೊಂಡಂತೆ ಪ್ರತಿಯೊಂದು ತಾಲೂಕಿನಲ್ಲೂ ಸ್ವೀಪ್ ಸಮಿತಿ ಸಹಯೋಗದೊಂದಿಗೆ ಮತದಾನ ಜಾಗೃತಿ ಶಿಬಿರ ಹಾಗೂ ಪಥಸಂಚಲನಗಳನ್ನು ಮಾಡಲಾಗುತ್ತಿದೆ. ಇವರೆಡೆಗೆ ತೆರಳಿ ಇವಿಎಂ ಮೂಲಕ ಮತದಾನ ಮಾಡುವ ಕುರಿತು ಜಾಗೃತಿ ಮೂಡಿಸಲಾಗಿದೆ ಎಂದರು.
ಮೂರು ವಿಕಲಚೇತನ ಸ್ನೇಹಿ ಮತಗಟ್ಟೆ:
ಪ್ರತಿಯೊಂದು ಗ್ರಾಮ ಪಂಚಾಯತ್ನಲ್ಲಿ ಮತದಾನದ ದಿನ ಎಲ್ಲ ವ್ಯವಸ್ಥೆಗಳ ಉಸ್ತುವಾರಿಯನ್ನು ನೋಡಿಕೊಳ್ಳಲು ನೋಡಲ್ ಅಧಿಕಾರಿಗಳನ್ನು ನೇಮಿಸ ಲಾಗಿದೆ. ಜಿಲ್ಲೆಯಲ್ಲಿ ಮಂಗಳೂರು, ಬೆಳ್ತಂಗಡಿ, ಪುತ್ತೂರು ತಾಲೂಕಿನಲ್ಲಿ ಒಂದೊಂದು ವಿಕಲಚೇತನ ಸ್ನೇಹಿ ಮತಗಟ್ಟೆ (ಪಿಡಬ್ಲುಡಿ) ಗಳನ್ನು ಸಿದ್ಧಪಡಿಸಲಾಗಿದೆ ಎಂದು ಅಂಗವಿಕಲ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ಅಧಿಕಾರಿ ಯಮುನಾ ಮಾಹಿತಿ ನೀಡಿದ್ದಾರೆ.
ಪಿಡಬ್ಲುಡಿ ಮತಗಟ್ಟೆಗಳ ವಿಶೇಷ ಎಂದರೆ ಮತಗಟ್ಟೆಯ ಎಲ್ಲ ಅಧಿಕಾರಿಗಳೂ ವಿಕಲಚೇತನರು. ಇವರು ಎಲ್ಲ ರೀತಿಯ ಕೆಲಸಗಳನ್ನು ನಿಭಾಯಿಸಬಲ್ಲರು ಎಂಬದುನ್ನು ತೋರಿಸುವುದು ಹಾಗೂ ಸಮಾನರು ಎಂದು ತೋರಿಸಲು ಈ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಈ ಬಾರಿ ಶೇ.100 ವಿಕಲಚೇತನರ ಮತದಾನ ದಾಖಲಿಸಲು ಜಿಲ್ಲೆಯಲ್ಲಿ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.







