ಪ್ರಧಾನಿ ಸ್ಥಾನಕ್ಕೆ ಮೋದಿಗೆ ಪರ್ಯಾಯ ಅಭ್ಯರ್ಥಿ ಇಲ್ಲ: ರಾಮ್ ಮಾಧವ್

ಬೆಂಗಳೂರು, ಎ.10: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಸ್ಥಾನವನ್ನು ನರೇಂದ್ರ ಮೋದಿಯನ್ನು ಬಿಟ್ಟರೆ ಸಮರ್ಥವಾಗಿ ನಿಭಾಯಿಸಬಲ್ಲ ಪರ್ಯಾಯ ಅಭ್ಯರ್ಥಿ ಯಾರು ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅಭಿಪ್ರಾಯ ಪಟ್ಟಿದ್ದಾರೆ.
ಬುಧವಾರ ನಗರದ ವಿ.ವಿ.ಪುರಂನಲ್ಲಿರುವ ಶ್ರೀ ಸಂಭವ್ ನಾಥ್ ಭವನದಲ್ಲಿ ಆಯೋಜಿಸಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಒಂದು ಕಡೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಪ್ರಧಾನಿಯಾಗಲು ಕನಸು ಕಾಣುತ್ತಿದ್ದು, ಯಾರೊಬ್ಬರು ಮೋದಿಯಷ್ಟು ಸಮರ್ಥರಲ್ಲ, ಭಾರತದಲ್ಲಿ ಈಗ ಯಾರಿಂದಲೂ ಮೋದಿಗೆ ಪರ್ಯಾಯವಾಗಿ ನಿಲ್ಲುವವರು ಇಲ್ಲ ಎಂದು ಅವರು ಹೇಳಿದರು.
ಈ ಬಾರಿಯ ಚುನಾವಣೆಯ ಫಲಿತಾಂಶ ಆರು ವಾರಗಳ ಮೊದಲೆ ಹೊರಬಿದ್ದಿದ್ದು, ಮತ್ತೊಮ್ಮೆ ಮೋದಿ ಪ್ರಧಾನಿಯಾಗುತ್ತಾರೆ ಎಂದು ಜನರು ನಿರ್ಧರಿಸಿದ್ದಾರೆ. ಅದೇ ರೀತಿಯಲ್ಲಿ ಬೆಂಗಳೂರು ದಕ್ಷಿಣದಲ್ಲೂ ಜನರ ಆಶೀರ್ವಾದದಿಂದ ತೇಜಸ್ವಿ ಸೂರ್ಯ ಗೆಲುವಿನ ದಟ್ಟ ವಾತಾವರಣ ಸೃಷ್ಟಿಯಾಗಿದೆ ಎಂದು ಅವರು ಹೇಳಿದರು.
ಸಾಮಾನ್ಯವಾಗಿ ಚುನಾವಣಾ ಸಂದರ್ಭದಲ್ಲಿ ವಿರೋಧ ಪಕ್ಷಗಳು ಅಲೆ ಎಬ್ಬಿಸುತ್ತವೆ. ಆದರೆ, ಈ ಬಾರಿ ಮಾತ್ರ ಆಡಳಿತ ಪಕ್ಷವೇ ಈ ಅಲೆಯನ್ನು ಸೃಷ್ಟಿಸಿದೆ ಎಂದ ಅವರು, ಶ್ರೀಸಾಮಾನ್ಯ ಜನರು ಮೋದಿಯನ್ನು ಮತ್ತೊಮ್ಮೆ ಬಯಸುತ್ತಿದ್ದಾರೆ ಎಂದರು.
ಮೋದಿ ಜನರ ಜೀವನಾಡಿಯನ್ನು ಅರ್ಥ ಮಾಡಿಕೊಂಡಿದ್ದು, ಅವರಿಗೆ ಏನು ಬೇಕು ಎಂಬುದನ್ನು ಚೆನ್ನಾಗಿ ಅರಿತಿದ್ದಾರೆ. ಈ ವೇಳೆ ಕಾಂಗ್ರೆಸ್ನ ಜಾಗತಿಕ ಕನಿಷ್ಟ ಆದಾಯ ಯೋಜನೆಯನ್ನು ಹೀಯಾಳಿಸಿದ ರಾಮ್ ಮಾಧವ್, ನಾಗರಿಕರನ್ನು ಸೋಮಾರಿಗಳನ್ನಾಗಿಸಲು ಯೋಜಿಸಿರುವ ನೀತಿ ಇದು. ಬಿಜೆಪಿ ಅದರ ಬದಲು ದೇಶದಲ್ಲಿ ಉದ್ಯೋಗದ ಸೃಷ್ಟಿಗೆ ಯೋಜನೆಗಳನ್ನು ರೂಪಿಸಿದೆ ಎಂದರು.
ಮನಮೋಹನ್ ಸಿಂಗ್ ಭ್ರಷ್ಟರಾಗಿರಲಿಲ್ಲ: ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಸರಕಾರದಲ್ಲಿ ಒಂದೇ ಒಂದು ಭ್ರಷ್ಟಾಚಾರ ನಡೆದಿಲ್ಲ. ಈ ಹಿಂದೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಭ್ರಷ್ಟರಾಗಿರಲಿಲ್ಲ, ಆದರೆ, ಅವರ ಸುತ್ತಲಿನ ವಾತಾವರಣ ಭ್ರಷ್ಟವಾಗಿತ್ತು ಎಂದು ರಾಮ್ ಮಾಧವ್ ತಿಳಿಸಿದರು.
ಭಾರತದಲ್ಲಿ ಈಗ ಕಾರ್ಯಾಂಗ, ಆಡಳಿತ ವರ್ಗ, ಭ್ರಷ್ಟಾಚಾರ ರಹಿತ ಕಡೆಗೆ ಸಾಗುತ್ತಿದೆ, ಅದಕ್ಕೆ ಕಾರಣ ನೇರವಾಗಿ ಫಲಾನುಭವಿಗಳ ಖಾತೆಗೆ ನಗದು ನೇರ ಜಮೆ ಯೋಜನೆಗಳು. ಜೊತೆಗೆ ಮೋದಿ ಸರಕಾರ ಜಾರಿಗೆ ತಂದ ನವೋದ್ಯಮ, ಸ್ಟಾರ್ಟ್ ಅಪ್ ಯೋಜನೆಗಳಿಂದ ಏಳು ಕೋಟಿ ಜನರಿಗೆ ಭದ್ರತಾ ರಹಿತ ಸಾಲಗಳನ್ನು ನೀಡಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ಅವರು ಹೇಳಿದರು.
ಭಾರತ ಜಾಗತಿಕವಾಗಿ ಐದು ತ್ವರಿತಗತಿಯ ರಾಷ್ಟ್ರಗಳಲ್ಲಿ ಒಂದಾಗಿದ್ದು, ಆರ್ಥಿಕವಾಗಿ, ಸಾಮಾಜಿಕವಾಗಿ, ಬಲಿಷ್ಠ ಭಾರತವನ್ನು ನಿರ್ಮಿಸಿದ್ದು ಮೋದಿ ಸರಕಾರದ ಮತ್ತೊಂದು ಗರಿ. ದೇಶದ ನಾಗರಿಕರ ಯೋಚನಾ ಶೈಲಿಯು ಈಗ ಬದಲಾಗಿದೆ ಎಂದು ರಾಮ್ ಮಾಧವ್ ತಿಳಿಸಿದರು.
ಸಂವಾದದಲ್ಲಿ ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ, ಚಿಕ್ಕಪೇಟೆ ಶಾಸಕ ಉದಯ ಗರುಡಾಚಾರ್, ಬಿಜೆಪಿ ನಗರ ಜಿಲ್ಲಾ ಅಧ್ಯಕ್ಷ ಸದಾಶಿವ ಉಪಸ್ಥಿತರಿದ್ದರು.
.jpg)







