ದೇಶದ ಗಮನ ಸೆಳೆಯುವ ಕಾಂಗ್ರೆಸ್ ಪ್ರಣಾಳಿಕೆ: ಖುಷ್ಬೂ ಸುಂದರ್

ಬೆಂಗಳೂರು, ಎ.10: ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಪ್ರಣಾಳಿಕೆಯು ಇಡೀ ದೇಶದ ಗಮನ ಸೆಳೆಯುತ್ತಿದೆ. ನಾವು ಈಡೇರಿಸ ಬಹುದಾದ ಭರವಸೆಗಳನ್ನೆ ಜನತೆಯ ಮುಂದೆ ಇಟ್ಟಿದ್ದೇವೆ ಎಂದು ಎಐಸಿಸಿ ವಕ್ತಾರೆ ಖುಷ್ಬೂ ಸುಂದರ್ ತಿಳಿಸಿದರು.
ಬುಧವಾರ ನಗರದ ಕ್ವೀನ್ಸ್ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಪ್ರಣಾಳಿಕೆಯನ್ನು ನಾವು ಬಿಡುಗಡೆ ಮಾಡಿದ್ದೇವೆ. ಸಮಾಜದ ಎಲ್ಲ ವರ್ಗಗಳ ಕಲ್ಯಾಣಕ್ಕೆ ಆದ್ಯತೆ ನೀಡಲಾಗಿದೆ ಎಂದರು.
ಬಡತನದ ವಿರುದ್ಧ ಹೋರಾಡಲು ನಾವು ಅನುಷ್ಠಾನಗೊಳಿಸಲು ಉದ್ದೇಶಿಸಿರುವ ಮಹತ್ವಾಕಾಂಕ್ಷಿಯ ‘ನ್ಯಾಯ್’ ಯೋಜನೆಯು ನಮ್ಮ ಭರವಸೆಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಜೊತೆಗೆ, ಮಹಿಳೆಯರು, ಬಡವರು, ಮಧ್ಯಮ ವರ್ಗದವರು, ಕಾರ್ಮಿಕರು, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡಿದ್ದೇವೆ ಎಂದು ಅವರು ಹೇಳಿದರು.
ತಳಮಟ್ಟದಿಂದ ಜನರ ಸಮಸ್ಯೆಗಳ ಬಗ್ಗೆ ಗಮನ ಹರಿಸಿ, ನಮ್ಮ ಪಕ್ಷ ಪ್ರಣಾಳಿಕೆಯನ್ನು ಸಿದ್ಧಪಡಿಸಿದೆ. ಯಾವ ಭರವಸೆಗಳನ್ನು ಈಡೇರಿಸಲು ಸಾಧ್ಯವೋ, ಅಂತಹ ಭರವಸೆಗಳನ್ನೆ ನಾವು ಜನತೆಗೆ ನೀಡಿದ್ದೇವೆಯೇ ಹೊರತು, ಪ್ರಧಾನಿ ನರೇಂದ್ರಮೋದಿ ರೀತಿಯಲ್ಲಿ ಈಡೇರಿಸಲು ಸಾಧ್ಯವಾಗದಂತಹ ಭರವಸೆಗಳನ್ನು ಕೊಟ್ಟಿಲ್ಲ ಎಂದು ಖುಷ್ಬೂ ಸುಂದರ್ ಟೀಕಿಸಿದರು.
ಜಿಎಸ್ಟಿ ನಮ್ಮ ಕನಸಿನ ಯೋಜನೆ. ಆದರೆ ಅದರ ಅನುಷ್ಠಾನವನ್ನು ಸರಿಯಾದ ರೀತಿಯಲ್ಲಿ ಮಾಡದೆ, ಸಣ್ಣ ಸಣ್ಣ ವ್ಯಾಪಾರಿಗಳು, ಜನ ಸಾಮಾನ್ಯರು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ನೋಟುಗಳ ಅಮಾನ್ಯೀಕರಣದಿಂದ ಆಗಿರುವ ಸಮಸ್ಯೆಗಳಿಂದ ಜನರು ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ತಪ್ಪು ಮಾಡಿದ್ದೇವೆ ಎಂಬ ಭಾವನೆ, ದೇಶದ ಜನರಲ್ಲಿ ಮೂಡಿದೆ. ಮತ್ತೊಂದು ಅವಧಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಜನತೆ ಸಿದ್ಧವಾಗಿಲ್ಲ. ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಜನ ಆಶೀರ್ವಾದ ಮಾಡಲಿದ್ದಾರೆ ಎಂದು ಖುಷ್ಬೂ ಸುಂದರ್ ವಿಶ್ವಾಸ ವ್ಯಕ್ತಪಡಿಸಿದರು.
ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದ ಬಿಜೆಪಿ, ಐದು ವರ್ಷಗಳ ತನ್ನ ಆಡಳಿತಾವಧಿಯಲ್ಲಿ 10 ಕೋಟಿ ಉದ್ಯೋಗ ಸೃಷ್ಟಿಸಬೇಕಿತ್ತು. ಆದರೆ, ದೇಶದ ಯುವ ಜನತೆಗೆ ನೀಡಿದ್ದ ಈ ಭರವಸೆಯನ್ನು ಈಡೇರಿಸುವಲ್ಲಿ ಪ್ರಧಾನಿ ಮೋದಿ ವಿಫಲವಾಗಿದ್ದಾರೆ ಎಂದು ಅವರು ಹೇಳಿದರು.
ಬಿಜೆಪಿಗೆ ಲೋಕಸಭೆಯಲ್ಲಿ ಬಹುಮತ ಬಂದರೆ ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಕಾಯ್ದೆ ಜಾರಿಗೆ ತರುವುದಾಗಿ ಮೋದಿ ಭರವಸೆ ನೀಡಿದ್ದರು. ಆದರೆ, ಐದು ವರ್ಷಗಳಲ್ಲಿ ಮಹಿಳಾ ಮೀಸಲಾತಿ ಬಗ್ಗೆ ಒಮ್ಮೆಯೂ ಸದನದಲ್ಲಿ ಚಕಾರವೆತ್ತಿಲ್ಲ ಎಂದು ಖುಷ್ಬೂ ಸುಂದರ್ ಟೀಕಿಸಿದರು.
ಬಿಜೆಪಿ ಪಕ್ಷದ ಪರಿಸ್ಥಿತಿ ‘ಚೌಕಿದಾರ್ ಚೋರ್ ಹೈ’ ಎನ್ನುವಂತಾಗಿದೆ. ಕಳ್ಳರನ್ನು ವಿದೇಶಕ್ಕೆ ಪರಾರಿಯಾಗಲು ಅವಕಾಶಕೊಟ್ಟ ಬಿಜೆಪಿಯವರದ್ದು, ಕಳ್ಳರ ಪಕ್ಷವಾಗಿದೆ. ತನ್ನನ್ನು ಚೌಕಿದಾರ್ ಎನ್ನುವ ಮೋದಿ, ಯಾವುದೇ ಆರೋಪಗಳ ಕುರಿತು ತನಿಖೆಗೆ ಮುಂದಾಗುತ್ತಿಲ್ಲ. ದೇಶದ ಖಜಾನೆ ಲೂಟಿಯಾಗುತ್ತಿರುವ ಈ ಕಳ್ಳತನಗಳಲ್ಲಿ ಇವರ ಪಾತ್ರವೂ ಇದೆಯೇನೊ ಎನ್ನುವ ಅನುಮಾನ ಕಾಡುತ್ತಿದೆ ಎಂದು ಅವರು ಆರೋಪಿಸಿದರು.
ಐದು ವರ್ಷಗಳ ಆಡಳಿತಾವಧಿಯಲ್ಲಿ ಜನಸಾಮಾನ್ಯರ ಕಲ್ಯಾಣಕ್ಕಾಗಿ ಒಂದೇ ಒಂದು ಕಾರ್ಯಕ್ರಮವನ್ನು ನೀಡದ ನರೇಂದ್ರ ಮೋದಿ ಸರಕಾರ, ದೇಶದ ಸೈನಿಕರು ನಡೆಸಿದ ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಆಧಾರದ ಮೇಲೆ ಮತ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಸೈನಿಕರ ತ್ಯಾಗ, ಬಲಿದಾನ, ಪರಾಕ್ರಮವನ್ನು ತಮ್ಮ ಮತ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಖುಷ್ಬೂ ಸುಂದರ್ ಆಕ್ರೋಶ ವ್ಯಕ್ತಪಡಿಸಿದರು.
ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ಕುರಿತ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಗೆ ಸೂಚಿಸಿರುವುದು ಸ್ವಾಗತಾರ್ಹ. ದೇಶದಲ್ಲಿ ಈ ಬಾರಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಡಾ.ಬಿ.ಎಲ್.ಶಂಕರ್, ಪ್ರಧಾನ ಕಾರ್ಯದರ್ಶಿ ಎನ್.ವೈ.ಘೋರ್ಪಡೆ, ಪ್ರಕಾಶಂ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







