ಮೋದಿಗೆ ಮತ ನೀಡಿದರೆ ಪಾಕ್ ಗೆ ಮತ ನೀಡಿದಂತೆ: ಪ್ರಧಾನಿ ವಿರುದ್ಧ ಪ್ರತಿಪಕ್ಷಗಳ ವಾಗ್ದಾಳಿ

ಹೊಸದಿಲ್ಲಿ, ಎ.10: ಬಿಜೆಪಿ ಮತ್ತೆ ಅಧಿಕಾರಕ್ಕೇರಿದಲ್ಲಿ ಭಾರತ- -ಪಾಕ್ ಶಾಂತಿ ಮಾತುಕತೆಗೆ ಹಾಗೂ ಕಾಶ್ಮೀರ ವಿವಾದವನ್ನು ಬಗೆಹರಿಸಲು ಉತ್ತಮ ಅವಕಾಶದೊರೆಯಲಿದೆಯೆಂಬ ಪಾಕ್ ಪ್ರಧಾನಿ ಇಮ್ರಾನ್ ಖಾನ್ರ ಹೇಳಿಕೆಯನ್ನು, ತಮ್ಮ ಚುನಾವಣಾ ಅಸ್ತ್ರವಾಗಿ ಬಳಸಿಕೊಂಡ ಕಾಂಗ್ರೆಸ್ ಮತ್ತಿತರ ಪ್ರತಿಪಕ್ಷಗಳು, ಪ್ರಧಾನಿ ‘ಮೋದಿಗೆನೀಡುವ ಮತವು ಪಾಕಿಸ್ತಾನಕ್ಕೆ ನೀಡುವ ಮತ’ವಾಗಿದೆಯೆಂದು ಟೀಕಾಪ್ರಹಾರ ಮಾಡಿವೆ.
ಪಾಕಿಸ್ತಾನವು ಮೋದಿ ಜೊತೆ ಅಧಿಕೃತವಾಗಿ ಕೈಜೋಡಿಸಿದೆಯೆಂಬುದನ್ನು ಇಮ್ರಾನ್ ಅವರ ಈ ಹೇಳಿಕೆಯು ಪ್ರತಿಬಿಂಬಿಸುತ್ತಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಇಮ್ರಾನ್ ಖಾನ್ ಅವರು ಇಸ್ಲಾಮಾಬಾದ್ನಲ್ಲಿ ವಿದೇಶಿ ಪತ್ರಕರ್ತರ ತಂಡದೊಂದಿಗೆ ಬುಧವಾರ ಮಾತನಾಡುತ್ತಾ, ಲೋಕಸಭಾ ಚುನಾವಣೆಯಲ್ಲಿ ಒಂದು ವೇಳೆ ಮೋದಿನೇತೃತ್ವದ ಬಿಜೆಪಿ ಪಕ್ಷವು ಜಯಗಳಿಸಿದಲ್ಲಿ ಭಾರತದ ಜೊತೆ ಶಾಂತಿ ಮಾತುಕತೆ ನಡೆಸಲು ಹಾಗೂ ಕಾಶ್ಮೀರ ವಿವಾದವನ್ನು ಬಗೆಹರಿಸಲು ಒಳ್ಳೆಯ ಅವಕಾಶ ದೊರೆಯಲಿದೆ ಎಂದುಹೇಳಿದ್ದರು. ಒಂದು ವೇಳೆ ಇತರ ಪಕ್ಷಗಳು ಅಧಿಕಾರಕ್ಕೇರಿದಲ್ಲಿ ಬಲಪಂಥೀಯರ ಆಕ್ರೋಶಕ್ಕೆ ಗುರಿಯಾಗಬಹುದೆಂಬ ಆತಂಕದಿಂದ ಕಾಶ್ಮೀರ ವಿವಾದವನ್ನು ಇತ್ಯರ್ಥಗೊಳಿಸಲು ಅವುಹಿಂದೇಟು ಹಾಕಬಹುದೆಂದು ಇಮ್ರಾನ್ ಹೇಳಿದ್ದರು. ‘‘ಪಾಕ್ ಅಧಿಕೃತವಾಗಿ ಮೋದಿ ಜೊತೆ ಕೈಜೋಡಿಸಿದ್ದಾರೆ!. ಮೋದಿಗೆ ನೀಡುವ ಮತವು ಪಾಕಿಸ್ತಾನಕ್ಕೆ ನೀಡುವ ಮತವಾಗಿದೆ’’ಎಂದು ಸುರ್ಜೆವಾಲಾ ಟ್ವೀಟ್ ಮಾಡಿದ್ದಾರೆ.
‘‘ ಮೋದಿಜೀ, ಮೊದಲಿಗೆ ನಿಮಗೆ ನವಾಝ್ ಶರೀಫ್ ಜೊತೆ ಪ್ರೀತಿಯಿತ್ತು ಹಾಗೂ ಈಗ ಇಮ್ರಾನ್ ಖಾನ್ ನಿಮ್ಮ ಆತ್ಮೀಯ ಸ್ನೇಹಿತ’’ ಎಂದು ಸುರ್ಜೆವಾಲಾ ಹಿಂದಿಯಲ್ಲಿ ಟ್ವೀಟ್ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ತನ್ನ ಚುನಾವಣಾ ಪ್ರಚಾರ ಭಾಷಣಗಳಲ್ಲಿ ಬಾಲಕೋಟ್ ವಾಯುದಾಳಿಗೆ ಸಂಬಂಧಿಸಿ ಕಾಂಗ್ರೆಸ್ ಪಕ್ಷವು ಪಾಕಿಸ್ತಾನದ ಪರ ವಹಿಸಿದೆಯೆಂದುಆರೋಪಿಸಿದ್ದಾರೆ. ಬಾಲಕೋಟ್ ವಾಯುದಾಳಿಯ ಬಗ್ಗೆ ಕಾಂಗ್ರೆಸ್ ನಾಯಕರು ನೀಡುವ ಹೇಳಿಕೆಗಳು ಪಾಕಿಸ್ತಾನಕ್ಕೆ ನೆರವಾಗುತ್ತಿವೆಯೆಂದು ಪ್ರಧಾನಿ ಟೀಕಿಸುತ್ತಾ ಬಂದಿದ್ದಾರೆ.
ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯಚೂರಿ ಕೂಡಾ ಇಮ್ರಾನ್ ಖಾನ್ ಹೇಳಿಕೆಗೆ ಸಂಬಂಧಿಸಿ ಪ್ರಧಾನಿ ಮೋದಿ ವಿರುದ್ಧ ಚಾಟಿ ಬೀಸಿದ್ದು, ಯಾರುಪ್ರಧಾನಿಯಾಗಬೇಕೆಂಬುದನ್ನು ಪಾಕ್ ಬಯಸಿದೆಯೆಂಬುದು ಈಗ ಬಹಿರಂಗವಾಗಿದೆಯೆಂದು ಅವರು ಹೇಳಿದ್ದಾರೆ.
ನಮ್ಮ ಪ್ರಜಾತಾಂತ್ರಿಕ ಪ್ರಕ್ರಿಯೆಯ ಮೇಲೆ ವಿದೇಶಿ ಸರಕಾರಗಳು ಪ್ರಭಾವ ಬೀರುತ್ತಿರುವ ಬಗ್ಗೆ ನಾವು ಗಂಭೀರವಾಗಿ ಆತಂಕಗೊಂಡಿದ್ದೇವೆ. ಮೋದಿ ಪ್ರಧಾನಿಯಾಗಬೇಕೆಂದುಐಎಸ್ಐ ಬಯಸಿರುವುದಾಗಿ ಕಳೆದ ವರ್ಷ ವರದಿಯಾಗಿತ್ತು. ಇದೀಗ ಪಾಕ್ ಪ್ರಧಾನಿ ಕೂಡಾ ಅದನ್ನೇ ಹೇಳುತ್ತಿದ್ದಾರೆ’’ ಎಂದು ಯೆಚೂರಿ ಹೇಳಿದ್ದಾರೆ.
ಒಂದು ವೇಳೆ ಮೋದಿ ಲೋಕಸಭಾ ಚುನಾವಣೆಯಲ್ಲಿ ಗೆದ್ದಲ್ಲಿ ಪಾಕಿಸ್ತಾನದಲ್ಲಿ ಪಟಾಕಿ ಸಿಡಿಯಲಿದೆಯೆಂದು ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಟೀಕಿಸಿದ್ದಾರೆ.
‘‘ ಮೋದಿಜಿ ಪ್ರಧಾನಿಯಾಗಬೇಕೆಂದು ಪಾಕಿಸ್ತಾನ ಯಾಕೆ ಬಯಸಿದೆ. ಪಾಕಿಸ್ತಾನದ ಜೊತೆಗಿನ ತನ್ನ ಬಾಂಧವ್ಯ ಎಷ್ಟು ಗಾಢವಾದುದೆಂದು ಮೋದಿ ದೇಶದ ಜನತೆಗೆತಿಳಿಸಬೇಕಾಗಿದೆ. ಒಂದು ವೇಳೆ ಮೋದಿ ಗೆದ್ದಲ್ಲಿ ಪಾಕಿಸ್ತಾನದಲ್ಲಿ ಪಟಾಕಿ ಸಿಡಿಯಲಿದೆ ಎಂದು ಎಲ್ಲಾ ಭಾರತೀಯರು ಅರಿತುಕೊಳ್ಳಬೇಕು’’ ಎಂದು ಕೇಜ್ರಿವಾಲ್ ಹೇಳಿದ್ದಾರೆ.







