ಉಮೇಶ್ ಜಾಧವ್ ಬೆಂಬಲಿಗರಿಂದ ಜೀವ ಬೆದರಿಕೆ: ಪಿ.ಟಿ.ಪರಮೇಶ್ವರ ನಾಯಕ್
![ಉಮೇಶ್ ಜಾಧವ್ ಬೆಂಬಲಿಗರಿಂದ ಜೀವ ಬೆದರಿಕೆ: ಪಿ.ಟಿ.ಪರಮೇಶ್ವರ ನಾಯಕ್ ಉಮೇಶ್ ಜಾಧವ್ ಬೆಂಬಲಿಗರಿಂದ ಜೀವ ಬೆದರಿಕೆ: ಪಿ.ಟಿ.ಪರಮೇಶ್ವರ ನಾಯಕ್](https://www.varthabharati.in/sites/default/files/images/articles/2019/04/11/186407.png)
ಬೆಂಗಳೂರು, ಎ.11: ಚಿತ್ತಾಪುರ ತಾಲೂಕಿನ ತಾಂಡಾಗಳಲ್ಲಿ ಪ್ರಚಾರ ಮುಗಿಸಿಕೊಂಡು ಬರುವಾಗ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಬೆಂಬಲಿಗರು ನನ್ನ ಕಾರನ್ನು ಅಡ್ಡಗಟ್ಟಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸಚಿವ ಪಿ.ಟಿ.ಪರಮೇಶ್ವರ ನಾಯಕ್ ತಿಳಿಸಿದರು.
ಬಿಜೆಪಿ ನಾಯಕರು ಜಾತಿಗಳ ಮಧ್ಯೆ ವಿಷಬೀಜ ಬಿತ್ತಿ ಸಾಮರಸ್ಯ ಹಾಳು ಮಾಡುವ ಮೂಲಕ ರಾಜಕೀಯ ಮಾಡಲು ಹೊರಟಿದ್ದಾರೆ. ಬಿಜೆಪಿ ಕಾರ್ಯಕರ್ತರು ಸಚಿವರಿಗೇ ಜೀವ ಬೆದರಿಕೆ ಹಾಕುತ್ತಾರೆ ಎಂದರೆ ಇನ್ನು ಸಾಮಾನ್ಯರ ಮೇಲೆ ಯಾವ ರೀತಿಯಲ್ಲಿ ವರ್ತಿಸಬಹುದೆಂದು ಊಹಿಸಿದರೆ ಭಯವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಲಂಬಾಣಿ ತಾಂಡಾಗಳಲ್ಲಿ ಪ್ರಚಾರಕ್ಕೆ ಹೋದಾಗ ತಾಂಡಾದ ಜನರು ನಮಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆಗೆ ನಮ್ಮ ಮತ ಎಂದೇಳುತ್ತಿದ್ದಾರೆ. ಇದನ್ನು ಸಹಿಸದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ನಾಯಕರಿಗೆ ತಾಂಡಾಗಳಿಗೆ ಹೋದರೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರು ಆಪಾದಿಸಿದರು.
ಕಲಬುರ್ಗಿ ಕ್ಷೇತ್ರದಲ್ಲಿ ಜಾತಿವಿಷ ಬೀಜ ಬಿತ್ತಲು ಆರೆಸ್ಸೆಸ್ನ ಕೈವಾಡ ಇದೆ. ಬಿಜೆಪಿಗೆ ನಮ್ಮ ಮೇಲೆ ಆಪಾದನೆ ಮಾಡಲು ಯಾವುದೆ ವಿಷಯಗಳಿಲ್ಲ. ಹೀಗಾಗಿ ವಿನಾಕಾರಣ ವೈಯಕ್ತಿಕವಾಗಿ ಹಲ್ಲೆ ಮಾಡಿ ತೇಜೋವಧೆ ಮಾಡುವಂತಹ ಹಂತಕ್ಕೆ ಮುಟ್ಟಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.