ಜಲಿಯನ್ವಾಲಾ ಬಾಗ್ ಹತ್ಯಾಕಾಂಡಕ್ಕೆ 100 ವರ್ಷ
ಸ್ವಾತಂತ್ರ್ಯಕ್ಕೆ ತೆತ್ತ ಬೆಲೆಯನ್ನು ಮರೆಯಲಾಗದು: ರಾಹುಲ್ ಗಾಂಧಿ
ಅಮೃತಸರ, ಎ.13: ಭಾರತೀಯ ಸ್ವಾತಂತ್ರ ಹೋರಾಟಗಾರರ ಬಲಿದಾನಕ್ಕೆ ಹೆಸರಾಗಿರುವ , ವಿಶ್ವದ ಅತ್ಯಂತ ಘೋರ ಹತ್ಯಾಕಾಂಡ ಎಂದೇ ಹೆಸರಾಗಿರುವ ಜಲಿಯನ್ವಾಲಾ ಬಾಗ್ ಹತ್ಯಾಕಾಂಡ ನಡೆದು ಎಪ್ರಿಲ್ 13ಕ್ಕೆ 100 ವರ್ಷವಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸ್ವಾತಂತ್ರ್ಯಕ್ಕೆ ತೆರಬೇಕಾದ ಬೆಲೆಯನ್ನು ಮರೆಯಲಾಗದು ಎಂದು ಹೇಳಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮಲ್ಲಿದ್ದ ಎಲ್ಲವನ್ನೂ ಕೊಡುಗೆ ನೀಡಿದ ದೇಶದ ಜನತೆಯನ್ನು ನಾವು ಅಭಿನಂದಿಸುತ್ತೇವೆ ಎಂದು ಜಲಿಯನ್ವಾಲಾ ಬಾಗ್ ಸ್ಮಾರಕದಲ್ಲಿರುವ ಸಂದರ್ಶಕರ ಪುಸ್ತಕದಲ್ಲಿ ರಾಹುಲ್ ಬರೆದರು. ಶುಕ್ರವಾರ ಅಮೃತಸರಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿ ಸ್ವರ್ಣಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಸಚಿವ ನವಜೋತ್ ಸಿಂಗ್ ಸಿದು ಅವರ ಜೊತೆಗಿದ್ದರು.
ಜಲಿಯನ್ವಾಲಾ ಬಾಗ್ ಹತ್ಯಾಕಾಂಡದಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಭಯಾನಕ ಜಲಿಯನ್ವಾಲಾ ಬಾಗ್ ಹತ್ಯಾಕಾಂಡ ನಡೆದು ಇಂದಿಗೆ 100 ವರ್ಷವಾಗಿದೆ. ಈ ಹತ್ಯಾಕಾಂಡದಲ್ಲಿ ಬಲಿಯಾದವರ ಶೌರ್ಯ ಮತ್ತು ಬಲಿದಾನವನ್ನು ಎಂದಿಗೂ ಮರೆಯಲಾಗದು.ಅವರು ಹೆಮ್ಮೆಪಟ್ಟುಕೊಳ್ಳುವ ರೀತಿಯಲ್ಲಿ ದೇಶವನ್ನು ರೂಪಿಸಲು ಈ ಬಲಿದಾನದ ನೆನಪು ನಮಗೆಲ್ಲಾ ಸ್ಫೂರ್ತಿಯಾಗಿದೆ ಎಂದು ಹೇಳಿದ್ದಾರೆ.