ಇನ್ಸ್ಪೆಕ್ಟರ್ ನೋಟಿಸ್ಗೆ ಉತ್ತರಿಸಿದ ಪೇದೆಯ ಪತ್ರ ವೈರಲ್ !

ಬೆಂಗಳೂರು, ಎ.15: ಕರ್ತವ್ಯಕ್ಕೆ ತಡವಾಗಿ ಬಂದಿದ್ದಕ್ಕೆ ಕಾರಣ ಕೇಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಒಬ್ಬರು ನೀಡಿದ ನೋಟಿಸ್ಗೆ ಪೊಲೀಸ್ ಪೇದೆಯೊಬ್ಬರು ಉತ್ತರಿಸಿದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಜಯನಗರ ಠಾಣಾ ವ್ಯಾಪ್ತಿಯ ಐವರು ಗಸ್ತು ಸಿಬ್ಬಂದಿ ಪ್ರತಿನಿತ್ಯ ತಡವಾಗಿ ಕೆಲಸಕ್ಕೆ ಬರುತ್ತಿರುವುದರ ಮಾಹಿತಿ ಪಡೆದ ಇನ್ಸ್ಪೆಕ್ಟರ್ ಯರ್ರಿಸ್ವಾಮಿ ಅವರು ನೋಟಿಸ್ ನೀಡಿದ್ದರು. ಆದರೆ, ಈ ನೋಟಿಸ್ಗೆ ಪ್ರತ್ಯುತ್ತರವಾಗಿ ಪೇದೆ ಶ್ರೀಧರ್ ಗೌಡ ವಿಶೇಷವಾಗಿ ಉತ್ತರಿಸಿದ್ದಾರೆ.
ಪತ್ರದಲ್ಲಿ ಏನಿದೆ?:
ನಿಮ್ಮ ರೀತಿ ಬೆಳಗ್ಗೆ ಸುಖಸಾಗರ್ ಅಥವಾ ಯುಡಿ ಹೊಟೇಲ್ನಲ್ಲಿ ಟಿಫನ್, ಮಧ್ಯಾಹ್ನ ಖಾನಾವಳಿಯಲ್ಲಿ ಊಟ, ರಾತ್ರಿ ಎಂಪೈರ್ನಲ್ಲಿ ಊಟ, ವಿಲನೋದಲ್ಲಿ ಐಸ್ ಕ್ರೀಂ ತಿಂದು ನಂತರ ಠಾಣೆಯ ಮೇಲಿರುವ ಕೊಠಡಿಯಲ್ಲಿ ವಾಸವಿದ್ದಿದ್ದರೆ ಬೆಳಗ್ಗೆ 8:30ಕ್ಕೆ ಅಲ್ಲ 8 ಗಂಟೆಗೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದೆ. ಆದರೆ ನನಗೆ ವಯಸ್ಸಾದ ತಂದೆ-ತಾಯಿ ಇದ್ದಾರೆ. ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನನಗೆ, ಹೆಂಡತಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಅವರ ಆಗು ಹೋಗುಗಳನ್ನು ಗಮನಿಸಿ ಠಾಣೆಗೆ ಬರಲು ತಡವಾಗುತ್ತಿದೆ. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ಇರುವುದಿಲ್ಲ ಎಂದು ಉತ್ತರಿಸಿದ್ದಾರೆ ಎನ್ನಲಾಗಿದೆ.







