ಬಾರತದ ಈ ಉದ್ಯಮಿಯ ಗಣಿ ಆಸ್ಟ್ರೇಲಿಯದ ಪ್ರಮುಖ ಚುನಾವಣಾ ವಿಷಯ!
ಟೌನ್ಸ್ವಿಲ್ (ಆಸ್ಟ್ರೇಲಿಯ), ಎ. 16: ಭಾರತದ ಅದಾನಿ ಎಂಟರ್ಪ್ರೈಸಸ್ ಉತ್ತರ ಆಸ್ಟ್ರೇಲಿಯದ ಟೌನ್ಸ್ವಿಲ್ ನಗರದಲ್ಲಿ 4 ಬಿಲಿಯ ಡಾಲರ್ (ಸುಮಾರು 27,800 ಕೋಟಿ ರೂಪಾಯಿ) ವೆಚ್ಚದಲ್ಲಿ ಸ್ಥಾಪಿಸುತ್ತಿರುವ ಕಲ್ಲಿದ್ದಲು ಗಣಿ ಈಗ ಪರ-ವಿರೋಧ ಅಭಿಪ್ರಾಯಗಳನ್ನು ಎದುರಿಸುತ್ತಿದೆ.
ಈ ಗಣಿಯು ಹಮಾಮಾನ ಬದಲಾವಣೆಗೆ ದೇಣಿಗೆ ನೀಡುತ್ತಿರುವ ಹಿನ್ನೆಲೆಯಲ್ಲಿ ಅದು ಸ್ಥಾಪನೆಯಾಗಬಾರದು ಎಂಬುದಾಗಿ ಕ್ರಿಸಾ ಅಲೆಕ್ಸಿಯಾನ್ ಎಂಬ ಮಹಿಳೆ ಅಭಿಪ್ರಾಯಪಡುತ್ತಾರೆ.
‘‘ಇದು ಹುಚ್ಚುತನ. ಉದ್ಯೋಗ ಬೇಕು ಹೌದು.. ಆದರೆ ಈ ಗಣಿ ಬೇಕೆಂದು ನನ್ನ ಊರು ಬ್ರಿಸ್ಬೇನ್ನಲ್ಲಿ ಯಾರೂ ಹೇಳುತ್ತಿಲ್ಲ’’ ಎಂದು ಅವರು ಹೇಳುತ್ತಾರೆ.
ಇಲ್ಲಿಂದ ಸುಮಾರು 380 ಕಿ.ಮೀ. ದೂರದ ಐನಾಸ್ಲೇ (ಇಲ್ಲಿನ ಜನಸಂಖ್ಯೆ 37) ಎಂಬಲ್ಲಿ ಪಬ್ ನಡೆಸುತ್ತಿರುವ ಬೆನ್ ಹೌಲಿಹಾನ್ ಎಂಬವರು ಕಲ್ಲಿದ್ದಲು ಗಣಿ ಬೇಕೆಂದು ವಾದಿಸುತ್ತಾರೆ.
‘‘ನಮಗೆ ಉದ್ಯೋಗ ಮತ್ತು ತೆರಿಗೆಗಳು ಬೇಕು. ಅವರು ಜನರ ಆದಾಯದೊಂದಿಗೆ ರಾಜಕೀಯದ ಆಟ ಆಡುತ್ತಿದ್ದಾರೆ’’ ಎಂದು ಅವರು ಹೇಳುತ್ತಾರೆ.
ಆಸ್ಟ್ರೇಲಿಯದಲ್ಲಿ ಮುಂದಿನ ತಿಂಗಳು ಚುನಾವಣೆ ನಡೆಯಲಿದ್ದು, ಅದಾನಿಯ ಗಣಿಯು ಪ್ರಮುಖ ಚುನಾವಣಾ ವಿಷಯವಾಗಿದೆ. ಈ ವಿಷಯದಲ್ಲಿ ದೇಶ ಇಬ್ಭಾಗವಾಗಿದೆ. ಜೊತೆಗೆ ಆಸ್ಟ್ರೇಲಿಯದ ರಾಜಕೀಯ ಪಕ್ಷಗಳೂ ಪರ-ವಿರೋಧ ಅಭಿಪ್ರಾಯಗಳನ್ನು ಹೊಂದಿವೆ.
ಕಲ್ಲಿದ್ದಲು ಮತ್ತು ಹವಾಮಾನ ಕುರಿತ ಚರ್ಚೆ ಕಾವೇರುತ್ತಿದ್ದು, ಹೆಚ್ಚೆಚ್ಚು ಮತದಾರರು ಸ್ವತಂತ್ರ ಅಭ್ಯರ್ಥಿಗಳತ್ತ ವಾಲುತ್ತಿದ್ದಾರೆ.