ಗೃಹ ಸಚಿವ ಎಂ.ಬಿ.ಪಾಟೀಲ್ರಿಂದಲೇ ದೂರು ದಾಖಲು !
![ಗೃಹ ಸಚಿವ ಎಂ.ಬಿ.ಪಾಟೀಲ್ರಿಂದಲೇ ದೂರು ದಾಖಲು ! ಗೃಹ ಸಚಿವ ಎಂ.ಬಿ.ಪಾಟೀಲ್ರಿಂದಲೇ ದೂರು ದಾಖಲು !](/images/placeholder.jpg)
ವಿಜಯಪುರ, ಎ. 16: ಬಿಎಲ್ಡಿಇ ಸಂಸ್ಥೆಯ ಹೆಸರಿನ ನಕಲಿ ಲೆಟರ್ಹೆಡ್, ಸಹಿ ಬಳಸಿಕೊಂಡು ನನ್ನ ತೇಜೋವಧೆ ಮೂಲಕ ಸಮುದಾಯದಲ್ಲಿ ಗೊಂದಲ ಸೃಷ್ಟಿಸಿದವರ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗೃಹ ಸಚಿವ ಎಂ.ಬಿ.ಪಾಟೀಲ್ ಅವರೇ ಪೊಲೀಸರಿಗೆ ದೂರು ನೀಡಿದ್ದಾರೆ.
ಮಂಗಳವಾರ ಇಲ್ಲಿನ ಆದರ್ಶನಗರ ಪೊಲೀಸ್ ಠಾಣೆಗೆ ತನ್ನ ಬೆಂಬಲಿಗರೊಂದಿಗೆ ಖುದ್ದು ಭೇಟಿ ನೀಡಿದ ಗೃಹ ಸಚಿವ ಎಂ.ಬಿ.ಪಾಟೀಲ್ ಪಿಎಸ್ಸೈ ರಾಜೇಶ್ ಲಮಾಣಿ ಅವರಿಗೆ ದೂರು ನೀಡಿದರು. ಬಿಎಲ್ಡಿಇ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಸಚಿವ ಎಂ.ಬಿ.ಪಾಟೀಲ್ 2017ರ ಜುಲೈ 10ರಂದು ಅಂದಿನ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತಂತೆ ಪತ್ರ ಬರೆದಿದ್ದರು ಎಂಬ ನಕಲಿ ಲೆಟರ್ಹೆಡ್ ಬಳಸಿ ಪತ್ರ ಸೃಷ್ಟಿಸಿ, ಜಾಲತಾಣದಲ್ಲಿ ಹರಿಯಬಿಡಲಾಗಿತ್ತು.
ವಿಧಾನಸಭಾ ಚುನಾವಣೆ ವೇಳೆ ಈ ಪತ್ರ ವೈರಲ್ ಮಾಡಲಾಗಿತ್ತು. ಇದೀಗ ಲೋಕಸಭಾ ಚುನಾವಣೆ ವೇಳೆ ರಾಜಕೀಯ ದುರುದ್ದೇಶಕ್ಕಾಗಿ ಸುಳ್ಳುಪತ್ರವನ್ನು ಬಳಸಿಕೊಳ್ಳುವ ಮೂಲಕ ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.