ನೇಣುಬಿಗಿದ ಸ್ಥಿತಿಯಲ್ಲಿ ನವವಿವಾಹಿತೆಯ ಮೃತದೇಹ ಪತ್ತೆ; ಕೊಲೆ ಶಂಕೆ
ಚಿಕ್ಕಮಗಳೂರು, ಎ.20: ಆರು ತಿಂಗಳ ಹಿಂದೆ ಪ್ರೇಮ ವಿವಾಹವಾಗಿದ್ದ ಯುವತಿಯೊಬ್ಬಳ ಮೃತದೇಹ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ತರೀಕೆರೆ ತಾಲೂಕಿನ ಬುಕ್ಕಾಂಬುದಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಇದೇವೇಳೆ ಯುವತಿ ಪೋಷಕರು ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿದ್ದಾರೆ.
ತರೀಕೆರೆ ತಾಲೂಕಿನ ದುಂದೂರು ಗ್ರಾಮದ ಲತಾ(19) ಮೃತಪಟ್ಟ ಯುವತಿ. ಲತಾ ಬುಕ್ಕಾಂಬುದಿ ಗ್ರಾಮದ ಧರ್ಮರಾಜ್ ಎಂಬವರನ್ನು ಪ್ರೀತಿಸಿ ಪೋಷಕರ ವಿರೋಧದ ಮಧ್ಯೆ ಕಳೆದ ಆರು ತಿಂಗಳ ತರೀಕೆರೆ ತಾಲೂಕಿನ ಕಲ್ಲತ್ತಿಗಿರಿ ದೇವಾಲಯದಲ್ಲಿ ವಿವಾಹವಾಗಿದ್ದರು. ಇಂದು ಬೆಳಗ್ಗೆ ಲತಾ ಮೃತದೇಹ ಬುಕ್ಕಾಂಬುದಿ ಗ್ರಾಮದ ಧರ್ಮರಾಜ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತದೇಹದ ಕಾಲುಗಳು ನೆಲಕ್ಕೆ ತಾಗುತ್ತಿದ್ದವು. ಇದು ಆತ್ಮಹತ್ಯೆಯಲ್ಲಿ, ಕೊಲೆ ಎಂದು ಶಂಕಿಸಿರುವ ಲತಾ ಪೋಷಕರುಅಜ್ಜಂಪುರ ಪೊಲೀಸರಿಗೆ ದೂರು ನೀಡಿದ್ದಾರೆ.
ಲತಾ ಪೋಷಕರ ಹೇಳಿಕೆಯಂತೆ ಅಜ್ಜಂಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.