ಮೈತ್ರಿ ಅಭ್ಯರ್ಥಿ, ಸಚಿವರ ಆಪ್ತರ ಮನೆ ಮೇಲೆ ಐಟಿ ದಾಳಿ
![ಮೈತ್ರಿ ಅಭ್ಯರ್ಥಿ, ಸಚಿವರ ಆಪ್ತರ ಮನೆ ಮೇಲೆ ಐಟಿ ದಾಳಿ ಮೈತ್ರಿ ಅಭ್ಯರ್ಥಿ, ಸಚಿವರ ಆಪ್ತರ ಮನೆ ಮೇಲೆ ಐಟಿ ದಾಳಿ](https://www.varthabharati.in/sites/default/files/images/articles/2019/04/20/187812-1555772111.jpg)
ಬಾಗಲಕೋಟೆ/ವಿಜಯಪುರ, ಎ.20: ಆರೋಗ್ಯ ಸಚಿವ ಶಿವಾನಂದ ಪಾಟೀಲ್, ವಿಜಯಪುರ ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಡಾ.ಸುನೀತಾ ದೇವಾನಂದ ಚೌಹಾಣ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ, ವ್ಯಕ್ತಿಗಳ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶನಿವಾರ ದಾಳಿ ನಡೆಸಿದ್ದಾರೆ.
ನಾಗಠಾಣ ಶಾಸಕ ದೇವಾನಂದ ಚೌಹಾಣರ ಸಂಬಂಧಿ, ಆಪ್ತರ ಮನೆ ಮೇಲೆಯೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, 10.75 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಇಲ್ಲಿನ ತಾಂಬಾ ಗ್ರಾಮದಲ್ಲಿನ ರಾಮಚಂದ್ರ ದೊಡಮನಿ, ದೇವಪ್ಪತದ್ದೇವಾಡಿ ಎಂಬುವರ ನಿವಾಸದಲ್ಲಿ ಐಟಿ ಅಧಿಕಾರಿಗಳು ಶೋಧ ನಡೆಸಿದಾಗ ನಗದು ಪತ್ತೆಯಾಗಿದೆ ಎನ್ನಲಾಗಿದ್ದು, ಇವರು ಶಾಸಕರ ಆಪ್ತ ಸಂಬಂಧಿಗಳಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಾಗಲಕೋಟೆ: ಸಚಿವ ಶಿವಾನಂದ ಪಾಟೀಲ ಅವರ ಆಪ್ತರಾದ ಯಾಸೀನ್ ತುಂಬರಮಟ್ಟಿ, ಆರೀಫ್ ಕಾರಗಲೇಕರ್ ಅವರ ನಿವಾಸದ ಮೇಲೆ 10ಕ್ಕೂ ಅಧಿಕ ಅಧಿಕಾರಿಗಳ ತಂಡ ದಾಳಿ ನಡೆಸಿ, ಪರಿಶೀಲನೆ ನಡೆಸಿದರು ಎನ್ನಲಾಗಿದೆ.
ಪ್ರಮುಖವಾಗಿ ಯಾಸೀನ್ ತುಂಬರಮಟ್ಟಿ ಡಿಸಿಸಿ ಬ್ಯಾಂಕ್ನಲ್ಲಿ ಎಫ್ಡಿಸಿ ಆಗಿದ್ದು, ನಗದು ತೆಗೆದುಕೊಂಡು ಹೋಗುತ್ತಿದ್ದ ವೇಳೆ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.