ಸಂವಿಧಾನ ಬದಲಾವಣೆಗೆ ಮುಂದಾದರೆ ನನ್ನ ನೇತೃತ್ವದಲ್ಲೇ ದೇಶದಲ್ಲಿ ರಕ್ತಪಾತ: ಮಾಜಿ ಸಿಎಂ ಸಿದ್ದರಾಮಯ್ಯ

ಬಾಗಲಕೋಟೆ, ಎ. 21: ಪ್ರಧಾನಿ ಮೋದಿ ಅವರು ಸಂವಿಧಾನ ಬದಲಾವಣೆ ಮಾಡಲು ಮುಂದಾದರೆ ದೇಶದಲ್ಲಿ ರಕ್ತಪಾತವಾಗುತ್ತದೆ. ಅದರ ನೇತೃತ್ವವನ್ನು ನಾನೇ ವಹಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.
ರವಿವಾರ ಜಿಲ್ಲೆಯ ರಬಕವಿ-ಬನಹಟ್ಟಿ ನಗರದಲ್ಲಿ ಆಯೋಜಿಸಿದ್ದ ಮೈತ್ರಿ ಪಕ್ಷದ ಅಭ್ಯರ್ಥಿ ವೀಣಾ ಕಾಶಪ್ಪನವರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಸಂವಿಧಾನ ಬದಲಾವಣೆ ಮಾಡುವುದು ಎಂದರೆ ಹುಡುಗಾಟವೇ? ಅಂಬೇಡ್ಕರ್ ರೂಪಿಸಿರುವ ಸಂವಿಧಾನ ಈ ದೇಶದ ಧರ್ಮಶಾಸ್ತ್ರ. ನಮಗೆ ಭಗವದ್ಗೀತೆ ಮುಸ್ಲಿಮರಿಗೆ ಕುರಾನ್, ಕ್ರೈಸ್ತರಿಗೆ ಬೈಬಲ್ ಇದೆ. ಆದರೆ ಈ ದೇಶದ ಎಲ್ಲ ಜನರಿಗೆ ಸಂವಿಧಾನವೇ ಕುರಾನ್, ಬೈಬಲ್, ಭಗವದ್ಗೀತೆ ಎಲ್ಲವೂ ಎಂದು ಹೇಳಿದರು.
ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ, ದಲಿತರಿಗೆ, ರೈತರಿಗೆ ಬಿಜೆಪಿಯವರು ವಿರುದ್ಧವಾಗಿದ್ದಾರೆ. ಅದಕ್ಕೆ ಸಂವಿಧಾನ ಬದಲಾಯಿಸಲು ಹೊರಟಿದ್ದಾರೆಂದು ಎಂದು ಆರೋಪಿಸಿದ ಅವರು, ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಮೋದಿ ಸೋಲಬೇಕು. ಮತ್ತೊಮ್ಮೆ ಮೋದಿ ಮತ್ತೆ ಗೆದ್ದರೆ ಹಿಟ್ಲರ್ನ ರೀತಿಯಲ್ಲಿ ಅವರು ಸರ್ವಾಧಿಕಾರಿ ಆಗುತ್ತಾರೆ. ಮೋದಿ ಅವರನ್ನು ಸೋಲಿಸಿ, ಮೈತ್ರಿ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಎಂದು ಕರೆ ನೀಡಿದ ಅವರು, ಮೋದಿ ಸೋಲಿನ ಭಯದಿಂದ ಹತಾಶರಾಗಿದ್ದು, ಜೆಡಿಎಸ್-ಕಾಂಗ್ರೆಸ್ ಮುಖಂಡರ ಮೇಲೆ ಐಟಿ ದಾಳಿ ಮಾಡಿಸುತ್ತಿದ್ದು ಇದು ಅವರಿಗೆ ತಿರುಗುಬಾಣವಾಗಲಿದೆ ಎಂದು ನುಡಿದರು.







