ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟ ಹಿನ್ನೆಲೆ: ಮಂಡ್ಯ ಜಿಲ್ಲೆಯಲ್ಲಿ ಕಟ್ಟೆಚ್ಚರ
ಮಂಡ್ಯ, ಎ.24: ಶ್ರೀಲಂಕಾದ ಕೊಲಂಬೋದಲ್ಲಿನ ಬಾಂಬ್ ಸ್ಫೋಟ ಹಿನ್ನೆಲೆಯಲ್ಲಿ ಜಿಲ್ಲೆಯ ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ಜಿಲ್ಲಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ನೇತೃತ್ವದಲ್ಲಿ ಬುಧವಾರ ನಗರದ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಮುಂತಾದ ಸಾರ್ವಜನಿಕರ ಸ್ಥಳಗಳಲ್ಲಿ ಶ್ವಾನ ದಳ, ಬಾಂಬ್ ಸ್ಕ್ವಾಡ್ನಿಂದ ಪರಿಶೀಲನೆ ನಡೆಸಲಾಯಿತು.
ಶಿವಪ್ರಕಾಶ್ ದೇವರಾಜ್ ಮಾತನಾಡಿ, ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟ ಹಿನ್ನೆಲೆಯಲ್ಲಿ ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ ಕಟ್ಟಚ್ಚರ ವಹಿಸಲಾಗಿದೆ. ಕೆಆರ್ಎಸ್, ಬಸ್, ರೈಲ್ವೇ ನಿಲ್ದಾಣ, ಚರ್ಚ್, ಮಸೀದಿ, ದೇವಸ್ಥಾನಗಳು, ಸಿನಿಮಾ ಥಿಯೇಟರ್ ಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ನಿರಂತರ ಪರಿಶೀಲನೆ ನಡೆಯಲಿದೆ ಎಂದರು.
ರಾಜ್ಯ ಕೈಗಾರಿಕಾ ಭದ್ರತಾ ಪಡೆ ಕೆಆರ್ಎಸ್ ಜಲಾಶಯದ ಭದ್ರತೆ ನಿರ್ವಹಣೆ ಹೊತ್ತಿದ್ದು, ನಾವೂ ಸೆಕ್ಯುರಿಟಿ ಆಡಿಟ್ ಮಾಡಿದ್ದೀವಿ. ನಿತ್ಯ ಮೂರ್ನಾಲ್ಕು ಬಾರಿ ತಪಾಸಣೆ ಮಾಡುತ್ತೇವೆ. ಶಿಂಷಾ, ಬ್ಲಫ್ ಒಳಗೊಂಡಂತೆ ಪ್ರಮುಖ ದೇವಾಲಯಗಳು, ಜನನಿಬಿಡ ಪ್ರದೇಶಗಳಲ್ಲಿ ತಪಾಸಣೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.