ಚೆಂಡು ಜೇಬಿನಲ್ಲಿಟ್ಟು ಮರೆತ ಅಂಪೈರ್ ಶಂಸುದ್ದೀನ್!
ಹುಡುಕಾಟ ನಡೆಸಿ ಕಂಗಾಲಾದ ಆಟಗಾರರು
ಬೆಂಗಳೂರು, ಎ.25: ಈ ಆವೃತ್ತಿಯ ಐಪಿಎಲ್ನಲ್ಲಿ ಅಂಪೈರಿಂಗ್ ಯಡವಟ್ಟುಗಳು ಕೊನೆಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಬುಧವಾರದ ಪಂದ್ಯದಲ್ಲಿ ಅಂಪೈರ್ ಶಂಸುದ್ದೀನ್ ಮತ್ತೊಂದು ಯಡವಟ್ಟಿನ ಕೇಂದ್ರಬಿಂದುವಾಗಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ಮಧ್ಯೆ ನಡೆದ ಈ ಪಂದ್ಯದ 13ನೇ ಓವರ್ ಮುಕ್ತಾಯದಲ್ಲಿ ಆರ್ಸಿಬಿ ಟೈಮ್ ಔಟ್ ತೆಗೆದುಕೊಂಡಿತು. ಈ ವೇಳೆ ಚೆಂಡನ್ನು ಶಂಸುದ್ದೀನ್ ತಮ್ಮ ಬಳಿ ಇಟ್ಟುಕೊಂಡಿದ್ದರು.
ಟೈಮ್ಔಟ್ ಮುಗಿದು ಆಟ ಪುನರಾರಂಭಗೊಂಡಾಗ ಆರ್ಸಿಬಿಯ ಡಿವಿಲಿಯರ್ಸ್ ಹಾಗೂ ಸ್ಟೋನಿಸ್ ಬ್ಯಾಟಿಂಗ್ ಮಾಡಲು ಸಜ್ಜಾಗಿ ನಿಂತರೆ ಪಂಜಾಬ್ ನಾಯಕ ಆರ್.ಅಶ್ವಿನ್ ಹಾಗೂ ಬೌಲರ್ ಅಂಕಿತ್ ರಾಜ್ಪೂತ್ಗೆ ಚೆಂಡು ಹುಡುಕುವ ಸರದಿ. ಅಶ್ವಿನ್ ಅವರು ಶಂಸುದ್ದೀನ್ ಹತ್ತಿರವೇ ಸುಳಿದಾಡಿದರೂ ಚೆಂಡು ಹುಡುಕಲು ವಿಫಲರಾದರು. ಚೆಂಡು ಇಲ್ಲದೆ ಆಟ ನಿಂತಿತು. ಆಗ ಇನ್ನೋರ್ವ ಅಂಪೈರ್ ಬ್ರೂಸ್ ಆಕ್ಸೆನ್ಫರ್ಡ್ ಈ ದೃಶ್ಯಕ್ಕೆ ಸೇರಿಕೊಂಡರು. ಅಲ್ಲದೆ ಕೊನೆಗೆ ನಾಲ್ಕನೇ ಅಂಪೈರ್ ಬಾಲ್ಬಾಕ್ಸ್ನೊಂದಿಗೆ ಮೈದಾನಕ್ಕೆ ಆಗಮಿಸಿದರು. ಆದರೆ ಟಿವಿ ರಿಪ್ಲೇಯಲ್ಲಿ ಚೆಂಡನ್ನು ಶಂಸುದ್ದೀನ್ ಅವರು ಇಟ್ಟುಕೊಂಡಿದ್ದು ಸ್ಪಷ್ಟವಾಗಿ ತಿಳಿದುಬಂತು.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ 17 ರನ್ಗಳಿಂದ ಪಂಜಾಬ್ ತಂಡವನ್ನು ಸೋಲಿಸಿದೆ.





