ವಿಧ್ವಂಸಕ ಕೃತ್ಯ ತಡೆಗೆ ನಾಗರಿಕರ ಸಹಕಾರ ಅತ್ಯಗತ್ಯ: ತುಮಕೂರು ಎಸ್ಪಿ ಕೋನ ವಂಶಿಕೃಷ್ಣ

ತುಮಕೂರು,ಎ.27: ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಜಿಲ್ಲೆಯ ನಾಗರಿಕರನ್ನು ಕಳೆದುಕೊಂಡಿದ್ದೇವೆ. ಅದರೆ ತುಮಕೂರಿನಲ್ಲಿ ಇಂಥ ಕೃತ್ಯ ನಡೆಯದಿರಲು ನಿಮ್ಮೆಲ್ಲರ ಸಹಕಾರ ಬೇಕಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ ಮನವಿ ಮಾಡಿದರು
ತುಮಕೂರಿನ ಚಿಲುಮೆ ಸಮುದಾಯ ಭವನದಲ್ಲಿ ಸರ್ವ ಜನಾಂಗದ ಸಭೆ ಕರೆದು ಅವರು ಮಾತನಾಡಿದರು. ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಿಂದ ರಾಜ್ಯದ ಜನರು ಬೆಚ್ಚಿ ಬೀಳುವಂತೆ ಮಾಡಿದೆ. ಈ ದುರಂತದಲ್ಲಿ ತುಮಕೂರಿನ ವ್ಯಕ್ತಿಯೊಬ್ಬರು ಮೃತಪಟ್ಟಿರುವುದು ನೋವಿನ ಸಂಗತಿ. ತುಮಕೂರು ಶಾಂತಿಯ ಜಿಲ್ಲೆಯಾಗಿರಬೇಕು ಅನ್ನೋದು ನಮ್ಮೆಲ್ಲರ ಜವಾಬ್ದಾರಿ ಎಂದ ಅವರು, ಎರಡು ದಿನಗಳ ಹಿಂದೆ ನಗರದ ಹೋಟೆಲ್ ಮಾಲಕರನ್ನು ಕರೆಸಿ ಅವರಿಗೂ ಸಹ ಈ ವಿಷಯದ ಬಗ್ಗೆ ಪ್ರಸ್ತಾಪಿಸಿರುವ ಬಗ್ಗೆ ಸ್ಮರಿಸಿದರು.
ಈಗಾಗಲೇ ಕೆಲವು ಬಡಾವಣೆಗಳಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ. ಕ್ಯಾಮರಾಗಳು ಇಲ್ಲದ ಕಡೆಗಳಲ್ಲಿ ಸ್ಥಳೀಯ ನಾಗರಿಕರೇ ಸಿಸಿ ಕ್ಯಾಮರಾಗಳಂತಿರಬೇಕು. ಯಾವುದೆ ಅನುಮಾನಸ್ಪದ ವ್ಯಕ್ತಿ, ವಸ್ತುಗಳು ಕಂಡು ಬಂದರೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು. ವಿವಿಧ ಧಾರ್ಮಿಕ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಪೊಲೀಸ್ ಇಲಾಖೆಗೆ ತಮ್ಮ ಸಹಕಾರ ನೀಡುವುದಾಗಿ ಹೇಳಿದರು.
ನಗರ ಡಿವೈಎಸ್ ಪನಿ ತಿಪ್ಪೇಸ್ವಾಮಿ, ಸಿಪಿಐಗಳಾದ ಚಂದ್ರಶೇಖರ್, ರಾಧಾಕೃಷ್ಣ, ರಾಘವಗೌಡ, ಮಧುಸುಧನ್, ಎಲ್ಲಾ ಪಿಎಸ್ ಐಗಳು ಭಾಗವಹಿಸಿದ್ದರು.







