ಕಾವೇರಿ ನೀರು ಬರುವ ಕಡೆ ಕೊಳವೆಬಾವಿ ಬೇಡ: ಪರಿಸರ ತಜ್ಞರ ಸಲಹೆ
ಬೆಂಗಳೂರು, ಎ.27: ಬೆಂಗಳೂರು ವ್ಯಾಪ್ತಿಯಲ್ಲಿ ಅಂತರ್ಜಲ ದಿನೇ ದಿನೇ ಕುಸಿಯುತ್ತಿರುವ ಹಿನ್ನೆಲೆ ಕಾವೇರಿ ನೀರು ಲಭ್ಯವಿರುವ ಪ್ರದೇಶಗಳಲ್ಲಿ ಕೊಳವೆಬಾವಿ ಕೊರೆಯುವುದನ್ನು ನಿಲ್ಲಿಸಬೇಕೆಂದು ಪರಿಸರ ತಜ್ಞರು ಸಲಹೆ ನೀಡಿದ್ದಾರೆ.
ಬೆಂಗಳೂರು ವ್ಯಾಪ್ತಿಯಲ್ಲಿ 2012ರಲ್ಲಿ 1.5 ಲಕ್ಷ ಬೋರ್ವೆಲ್ಗಳನ್ನು ಹೊಂದಲಾಗಿತ್ತು. ಆದರೆ, ಪ್ರಸಕ್ತ ಸಾಲಿನ ವರದಿಯಂತೆ ಬೋರ್ವೆಲ್ಗಳ ಸಂಖ್ಯೆ 3.5 ಲಕ್ಷ ದಾಟಿದೆ. ಈ ಕುರಿತು ಪರಿಸರ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಜಲಮಂಡಳಿಯ ಮಾಹಿತಿಯನ್ವಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 11 ಸಾವಿರ ಸಾರ್ವಜನಿಕ ಕೊಳವೆಬಾವಿ ಸೇರಿದಂತೆ ಒಟ್ಟು 3.61 ಲಕ್ಷ ಕೊಳವೆ ಬಾವಿಗಳಿವೆ. ಒಂದು ಕೊಳವೆಬಾವಿಯಿಂದ ಮತ್ತೊಂದು ಕೊಳವೆ ಬಾವಿಗೆ ತಜ್ಞರ ಸಲಹೆಯನ್ವಯ ಕನಿಷ್ಠ ಮಟ್ಟದ ಅಂತರ ಕಾಯ್ದುಕೊಳ್ಳಬೇಕಿದೆ. ಈ ಸಲಹೆ ಉಲ್ಲಂಘಿಸಿ ಸಿಕ್ಕ ಸಿಕ್ಕ ಜಾಗಗಳಲ್ಲಿ ಕೊಳವೆ ಬಾವಿ ಕೊರೆಯುತ್ತಿರುವುದು ಅಂತರ್ಜಲ ಕಡಿತಕ್ಕೆ ಪ್ರಮುಖ ಕಾರಣ ಎಂದು ತಜ್ಞರು ತಿಳಿಸಿದ್ದಾರೆ.
ಜಲಮಂಡಳಿಯಿಂದ ಅನುಮತಿಯನ್ನೂ ಪಡೆಯದೆ ಸಾವಿರಾರು ಸಂಖ್ಯೆಯ ಬೋರ್ವೆಲ್ಗಳನ್ನು ಕೊರೆಯಲಾಗಿದೆ. ಮನೆ ಹಾಗೂ ವಾಣಿಜ್ಯ ಉದ್ದೇಶಗಳಿಗೆ ಕೊಳವೆ ಬಾವಿಗಳನ್ನು ಕೊರೆಯುವ ವೇಳೆ ನಿಯಮಗಳು ಉಲ್ಲಂಘನೆಯಾಗುತ್ತಿವೆ. ಉಳಿದಂತೆ ನಗರ ವ್ಯಾಪ್ತಿಯಲ್ಲಿ ಆರಂಭವಾಗಿರುವ ಕಾಂಕ್ರಿಟ್ಗಳ ರಸ್ತೆ ನಿರ್ಮಾಣದಿಂದ ನೀರು ಭೂಮಿಯ ಒಳಭಾಗಕ್ಕೆ ಇಳಿಯುತ್ತಿಲ್ಲ. ಮತ್ತೊಂದೆಡೆ ಲಕ್ಷಾಂತರ ಕೊಳವೆ ಬಾವಿಗಳ ಮೂಲಕ ಬಹಳ ಆಳದಿಂದ ನೀರನ್ನು ಎತ್ತಿ ನಿರಂತರವಾಗಿ ಬಳಕೆ ಮಾಡಲಾಗುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.
ನಗರದ ಕೇಂದ್ರ ಭಾಗದ ಬೇರೆ ಬೇರೆ ಪ್ರದೇಶಗಳಲ್ಲಿ 1,200 ಅಡಿ ಹಾಗೂ ಕೆಆರ್ಪುರ ಸೇರಿದಂತೆ ಸುತ್ತಮುತ್ತಲಿನ ಹೊರ ವಲಯಗಳಲ್ಲಿ 1,400 ಅಡಿಗಳಷ್ಟು ಆಳಕ್ಕೆ ಕೊರೆದರೂ ನೀರು ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆ ಅಂತರ್ಜಲ ಸಂರಕ್ಷಣೆಗಾಗಿ ಕಾವೇರಿ ನೀರು ಸರಬರಾಜಾಗುವ ಬೆಂಗಳೂರು ನಗರ ಪ್ರದೇಶಗಳಲ್ಲಿ ಕೊಳವೆ ಬಾವಿಯನ್ನು ಕೊರೆಯಲು ಜಲಮಂಡಳಿ ಅವಕಾಶ ನೀಡಬಾರದೆಂದು ತಜ್ಞರು ಮುಂಜಾಗ್ರತಾ ಸಲಹೆ ನೀಡಿದ್ದಾರೆ.







