ಕ್ಯಾನ್ಸರ್ ವಿರುದ್ಧ ಸೆಣೆಸುತ್ತಿದ್ದ ಜೆಟ್ ಉದ್ಯೋಗಿಗೆ ಸಿಗದ ವೇತನ: ಆತ್ಮಹತ್ಯೆ

ಮುಂಬೈ, ಎ.28: ಕ್ಯಾನ್ಸರ್ ವಿರುದ್ಧ ಸೆಣೆಸುತ್ತಿದ್ದ ಜೆಟ್ ಏರ್ವೇಸ್ನ ಹಿರಿಯ ತಂತ್ರಜ್ಞರೊಬ್ಬರು, ವೇತನ ಸಿಗದ ಕಾರಣದಿಂದ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ವೇತನ ಸ್ಥಗಿತಗೊಂಡ ಕಾರಣದಿಂದ ಕ್ಯಾನ್ಸರ್ ಚಿಕಿತ್ಸೆಗೆ ಹಣಕಾಸಿನ ಅಡಚಣೆ ಎದುರಾದ ಹಿನ್ನೆಲೆಯಲ್ಲಿ ಭಾರಿ ಒತ್ತಡಕ್ಕೆ ಒಳಗಾದ ಶೈಲೇಶ್ ಸಿಂಗ್ (45) ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬದ ಮೂಲಗಳು ಹೇಳಿವೆ.
ಜೆಟ್ ಏರ್ವೇಸ್ನ 20 ಸಾವಿರ ಉದ್ಯೋಗಿಗಳಿಗೆ ಎರಡು ತಿಂಗಳಿನಿಂದ ವೇತನ ನೀಡಿಲ್ಲ; ಹಣಕಾಸು ಮುಗ್ಗಟ್ಟಿನಿಂದಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
"ತಂದೆಯ ಸಾವಿಗೆ ಜೆಟ್ ಏರ್ವೇಸ್ ಸಂಸ್ಥೆಯನ್ನು ನಾನು ಹೊಣೆ ಮಾಡುತ್ತಿಲ್ಲ. ಆದರೆ ಪರಿಸ್ಥಿತಿ ಹಾಗೆ ಮಾಡಿದೆ.. ಮನೆಯಲ್ಲಿ ಯಾವುದೇ ಆದಾಯ ಇರಲಿಲ್ಲ ಹಾಗೂ ತಂದೆಯ ವೈದ್ಯಕೀಯ ವೆಚ್ಚಕ್ಕಾಗಿ ಆರ್ಥಿಕ ಅಡಚಣೆ ಇತ್ತು. ಚಿಕಿತ್ಸೆಗೆ ಹಣ ಇಲ್ಲ ಎಂಬ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ" ಎಂದು ಮೃತ ಉದ್ಯೋಗಿಯ ಮಗ ಹೇಳಿದ್ದಾರೆ