ಸಾವಿನ ಸಮಯದಲ್ಲೂ ನನ್ನ ತಂದೆ ದೇಶದ ರಕ್ಷಣೆಗೆ ಪ್ರಯತ್ನಿಸಿದರು: ಕರ್ಕರೆ ಪುತ್ರಿ

ಮುಂಬೈ,ಎ.28: ತನ್ನ ತಂದೆಯ ಬಗ್ಗೆ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಠಾಕೂರ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಮೂಲಕ ಆಕೆಯ ಮಾತಿಗೆ ಬೆಲೆ ಬರುವಂತೆ ಮಾಡುವುದಿಲ್ಲ ಎಂದು 26/11ರ ಮುಂಬೈ ದಾಳಿಯಲ್ಲಿ ಹುತಾತ್ಮರಾದ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ಪಡೆಯ ಮಾಜಿ ಮುಖ್ಯಸ್ಥ ಹೇಮಂತ ಕರ್ಕರೆ ಅವರ ಪುತ್ರಿ ಜೂಹಿ ನವರೆ ತಿಳಿಸಿದ್ದಾರೆ.
ತಾನು ಶಾಪ ನೀಡಿದ ಪರಿಣಾಮ ಕರ್ಕರೆ 26/11ರ ದಾಳಿಯಲ್ಲಿ ಮೃತಪಟ್ಟರು ಎಂದು ಪ್ರಜ್ಞಾ ಠಾಕೂರ್ ಹೇಳಿಕೆ ನೀಡಿದ್ದರು. ಆದರೆ ನಂತರ ತನ್ನ ಮಾತನ್ನು ಮಾಧ್ಯಮಗಳು ತಿರುಚಿವೆ ಎಂದು ಹೇಳಿಕೊಂಡಿದ್ದರು.
“ಠಾಕೂರ್ ಅಥವಾ ಆಕೆಯ ಹೇಳಿಕೆಗೆ ಬೆಲೆ ಕೊಡಲು ನಾನು ಬಯಸುವುದಿಲ್ಲ. ನಾನು ಕೇವಲ ಕರ್ಕರೆ ಬಗ್ಗೆ ಮಾತನಾಡಲು ಬಯಸುತ್ತೇನೆ. ಅವರೊಬ್ಬ ಆದರ್ಶ ವ್ಯಕ್ತಿಯಾಗಿದ್ದರು ಮತ್ತು ಅವರ ಹೆಸರನ್ನು ಘನತೆಯಿಂದ ಹೇಳಬೇಕು” ಎಂದು ನವರೆ ತಿಳಿಸಿದ್ದಾರೆ.
“ನನ್ನ ತಂದೆ ಅವರ ಸಮವಸ್ತ್ರವನ್ನು ಪ್ರೀತಿಸುತ್ತಿದ್ದರು ಮತ್ತು ಅದಕ್ಕೆ ತನ್ನ ಸ್ವಂತ ಪರಿವಾರಕ್ಕಿಂತಲೂ ಹೆಚ್ಚಿನ ಮಹತ್ವ ನೀಡುತ್ತಿದ್ದರು. ಯಾವುದೇ ಧರ್ಮ ಯಾರನ್ನೂ ಕೊಲ್ಲಬೇಕೆಂದು ಹೇಳುವುದಿಲ್ಲ. ಸೋಲಿಸಬೇಕಿರುವುದು ಸಿದ್ಧಾಂತವನ್ನು. ಕರ್ಕರೆ ಅವರು ತನ್ನ ಜೀವನದುದ್ದಕ್ಕೂ ಇತರರಿಗೆ ನೆರವಾಗುತ್ತಿದ್ದರು. ಸಾವಿನ ಸಮಯದಲ್ಲೂ ಅವರು ತನ್ನ ನಗರ, ತನ್ನ ದೇಶವನ್ನು ರಕ್ಷಿಸಲು ಪ್ರಯತ್ನಿಸಿದರು. ಎಲ್ಲರೂ ಅದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ನಾನು ಬಯಸುತ್ತೇನೆ” ಎಂದು ನವರೆ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
2008ರ ಮಾಲೆಗಾಂವ್ ಸ್ಫೋಟ ಆರೋಪಿಯಾಗಿರುವ ಪ್ರಜ್ಞಾ ಠಾಕೂರ್ ಬಿಜೆಪಿಯಿಂದ ಭೋಪಾಲ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಆಕೆಯ ನಾಮಪತ್ರವನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಗೆ ಬಹಿರಂಗ ಪತ್ರ ಬರೆಯಲಾಗಿದ್ದು ಅದಕ್ಕೆ 71 ಮಾಜಿ ಅಧಿಕಾರಿಗಳು ಸಹಿ ಹಾಕಿದ್ದಾರೆ.