ಬಾಲಕೋಟ್ ವಾಯುದಾಳಿ ನಂತರ ಏರ್ ಇಂಡಿಯಾಗೆ 300 ಕೋ.ರೂ. ನಷ್ಟ!
ಕಾರಣವೇನು ಗೊತ್ತಾ?

ಹೊಸದಿಲ್ಲಿ,ಎ.28: ಬಾಲಕೋಟ್ ವಾಯುದಾಳಿಯ ನಂತರ ಪಾಕಿಸ್ತಾನ ವಾಯುಮಾರ್ಗವನ್ನು ಮುಚ್ಚಿದ ಪರಿಣಾಮ ಏರ್ ಇಂಡಿಯಾಗೆ ಮುನ್ನೂರು ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಫೆಬ್ರವರಿಯಿಂದ ಹೊಸದಿಲ್ಲಿಯಿಂದ ಹೊರಡುವ ಏರ್ ಇಂಡಿಯಾದ ದೂರ ಪ್ರಯಾಣ ವಿಮಾನಗಳು ಯೂರೋಪ್, ಗಲ್ಫ್ ರಾಷ್ಟ್ರಗಳು ಮತ್ತು ಅಮೆರಿಕ ತಲುಪಲು ಸುದೀರ್ಘ ಮಾರ್ಗವನ್ನು ಬಳಸುತ್ತಿರುವುದರಿಂದ ಏರ್ ಇಂಡಿಯಾಗೆ ಇಷ್ಟು ದೊಡ್ಡ ಮಟ್ಟದಲ್ಲಿ ನಷ್ಟ ಉಂಟಾಗಿದೆ ಎಂದು ವರದಿಗಳು ತಿಳಿಸಿವೆ. ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಆತ್ಮಾಹುತಿ ದಾಳಿಯ ನಂತರ ಎರಡು ದೇಶಗಳ ಮಧ್ಯೆ ಶತ್ರುತ್ವ ಹಿಂದೆಂದಿಗಿಂತಲೂ ಹೆಚ್ಚಾಗಿದ್ದು ಇದರ ಪರಿಣಾಮವಾಗಿ ಭಾರತ ವಿಮಾನಗಳಿಗೆ ಪಾಕಿಸ್ತಾನ ತನ್ನ ವಾಯುಮಾರ್ಗವನ್ನು ಮುಚ್ಚಿದೆ.
ಹೊಸದಿಲ್ಲಿಯಿಂದ ಹೊರಡುವ ಏರ್ ಇಂಡಿಯಾ ವಿಮಾನಗಳು ಆಕಾಶದಲ್ಲಿ ಹೆಚ್ಚಿನ ಸಮಯ ಕಳೆಯುತ್ತಿರುವುದರಿಂದ ಹೆಚ್ಚಿನ ಇಂಧನ, ವಿಮಾನ ಸಿಬ್ಬಂದಿ ವೆಚ್ಚ ಮತ್ತು ಇಳಿಕೆಯಾದ ಪ್ರಯಾಣ ಸಂಖ್ಯೆಯ ಪರಿಣಾಮವಾಗಿ ಪ್ರತಿದಿನ ಆರು ಕೋಟಿ ರೂ. ನಷ್ಟ ಅನುಭವಿಸುತ್ತಿದೆ. ಈ ನಷ್ಟವನ್ನು ಭರಿಸುವಂತೆ ವೈಮಾನಿಕ ಸಂಸ್ಥೆ ಸದ್ಯ ನಾಗರಿಕ ವಾಯುಯಾನ ಸಚಿವಾಲಯದ ಮೊರೆ ಹೋಗಿದೆ.