ಬರವಣಿಗೆ ಸುಲಭವಲ್ಲ: ಕವಿ ಜಯಂತ್ ಕಾಯ್ಕಿಣಿ

ಬೆಂಗಳೂರು, ಎ.28: ಬರವಣಿಗೆ ಸುಲಭವಲ್ಲ. ಬದುಕಿನ ಅರ್ಥ ತಿಳಿಸುವ ಕಥನಗಳು ಹೆಚ್ಚಾಗಿ ಬರಬೇಕು ಎಂದು ಕವಿ ಜಯಂತ್ ಕಾಯ್ಕಿಣಿ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ವಾಡಿಯಾ ಸಭಾಂಗಣದಲ್ಲಿ ಅಂಕಿತ ಪುಸ್ತಕ ಪ್ರಕಾಶನದ ವತಿಯಿಂದ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲರೂ ಬರೆಯಬಹುದು ಎಂಬ ಭಾವನೆಯಿದೆ. ಆದರೆ, ಬರವಣಿಗೆ ಅಷ್ಟು ಸುಲಭವಾಗಿ ಸಿಗುವಂತಹದಲ್ಲ ಎಂದು ಹೇಳಿದರು.
ಕವಿಗಳು, ಸಾಹಿತಿಗಳು, ಲೇಖಕರು ತಮ್ಮ ಬರವಣಿಗೆಯಲ್ಲಿ ಜೀವನದ ಅರ್ಥವನ್ನು ತಿಳಿಸುವ ಬರಹಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು ಎಂದ ಅವರು, ಕವಿಯಾದವರಿಗೆ ಸಣ್ಣ ಕಥೆಗಳ ಪ್ರಕಾರಗಳಿಗೆ ಹೆಚ್ಚು ಒಲವು ಇರುತ್ತದೆ. ಪ್ರತಿಯೊಬ್ಬ ಕವಿಗೂ ವಿಶಿಷ್ಟ ಕೌಶಲ್ಯವಿರುತ್ತದೆ. ಕವಿ, ಕಥೆಗಾರ, ಲೇಖಕ ಯಾವುದೇ ಸನ್ನಿವೇಶದಲ್ಲಿ ತಮ್ಮ ಚಿಂತನೆ ಹೊರಹಾಕುತ್ತಾರೆ ಎಂದು ನುಡಿದರು.
ಕವಿಯಾಗುವವರು ಕಥೆಯಾದಳು ಹುಡುಗಿ ಕತೆ ಪುಸ್ತಕ ಓದಲೇಬೇಕು ಎಂದ ಅವರು, ಜಿ.ಎಸ್.ಅವಧಾನಿ ಕವಿತೆಗಳನ್ನು ಓದಿದ್ದರಿಂದ ನಾನು ಕವಿಯಾದೆ. ಅವರ ಕವಿತೆಗಳೇ ನನಗೆ ಮಾರ್ಗದರ್ಶನ ನೀಡಿವೆ. ಪತ್ರಕರ್ತರಾದ ತಕ್ಷಣ ಅವರ ಸ್ವಂತ ಕೃಷಿ ಕಡಿಮೆಯಾಗುತ್ತಿದೆ. ಇಂತ ಪರಿಸ್ಥಿತಿ ಪ್ರಸ್ತುತ ನಿರ್ಮಾಣವಾಗಿದೆ. ಪ್ರತಿಯೊಬ್ಬರಿಗೂ ವಿಕಾಸದ ಪಥವಿದೆ. ಭಾಷೆಯ ಹಂಗಿನಲ್ಲಿಯೇ ದುಂಡಿರಾಜ್ ಜನರನ್ನು ನಗಿಸುತ್ತಾರೆ ಎಂದು ನುಡಿದರು.
ಪ್ರತಿಯೊಬ್ಬ ಲೇಖಕರಲ್ಲಿಯೂ ಅವರದ್ದೇ ಆದ ವಿಶಿಷ್ಟವಾದ ಒಕ್ಕಣಿಕೆ ಇರುತ್ತದೆ. ಅಲ್ಲದೆ, ಕವಿಯಾದವರಿಗೆ ಹಿಂಜರಿಕೆ ಗುಣ ಇರುತ್ತದೆ. ಕಥೆಯಲ್ಲಿ ಒಂದು ಶಬ್ದ ಹೆಚ್ಚಾಗುವಂತಿಲ್ಲ. ಎಲ್ಲಿ ತಪ್ಪಾಗುತ್ತದೆ ಎಂಬ ಭಯವಿರುತ್ತದೆ. ಅದಕ್ಕೆ ಬರಹಗಾರರ ಪ್ರತಿ ಪದದ ನಡುವೆಯೂ ಜಾಗೃತೆಯನ್ನು ಕಾಯ್ದಿಟ್ಟುಕೊಳ್ಳಬೇಕು ಎಂದರು.
ಹಾಸ್ಯ ಕವಿ ಡುಂಡಿರಾಜ್ರ ಕತೆಗಳು ಹರಿಕಥೆ ಇದ್ದಂತೆ. ಬಸವರಾಜು ಅವರ ಬರಹಗಳಲ್ಲಿ ಅರ್ಥವಂತಿಕೆಯ ಭಾವಗಳಿದ್ದರೆ, ದುಂಡಿರಾಜು ಅವರ ಕೃತಿಗಳಲ್ಲಿ ಅರ್ಥವಂತಿಕೆಯ ಗೋಜು ಮತ್ತು ಭಾರವಿಲ್ಲ. ವಿಕ್ರಮ್ ಅವರ ಹಮಾರಾ ಬಜಾಜ್ನಲ್ಲಿ ತಂದೆಯ ನೆನಪು ಇದೆ. ಕೊಳ್ಳದ ಹಾದಿ ಕೃತಿಯೂ ಶರಾವತಿ ನದಿ ತಡದಲ್ಲಿನ ಕಥನ ತಿಳಿಸುತ್ತದೆ ಎಂದು ಹೇಳಿದರು.
ಪತ್ರಕರ್ತ ಹರೀಶ್ ಕೇರ ಮಾತನಾಡಿ, ದುಂಡಿರಾಜ್ ರ ಕರೆಗಳು ಸಾರ್ ಕರೆಗಳು ಪುಸ್ತಕದಲ್ಲಿನ ಕತೆಗಳು ಸತ್ಯ ಮತ್ತು ಶಾಶ್ವತವಿದೆ. ಕೃತಿಯು ಓದಿಸಿಕೊಂಡು ಹೋಗುವಂತಿದ್ದು, ಪುಸ್ತಕದಲ್ಲಿರುವ 40 ಕತೆಗಳು ನಕ್ಕು ನಗಿಸುತ್ತವೆ. ಹಾಸ್ಯಕ್ಕೆ ಸಬ್ಯತೆ, ಸಂಯಮವಿದೆ. ಪದಗಳ ಜೊತೆ ಆಟವಾಡಿದ್ದಾರೆ. ಅವಮಾನ, ಗೊರಕೆ ಬಗ್ಗೆಯೂ ಅರ್ಥಗರ್ಭಿತವಾಗಿ ಬರೆದು ಹನಿಗವನಗಳ ಗುಣ ಗದ್ಯದಲ್ಲಿಯೂ ಬಂದಿದೆ ಎಂದು ಅಭಿಪ್ರಾಯಪಟ್ಟರು.
ನಾಟಕಕಾರ ಎಸ್. ಸುರೇಂದ್ರನಾಥ್ ಮಾತನಾಡಿ, ಶೂನ್ಯದಲ್ಲಿ ಕತೆ ಹುಟ್ಟಲ್ಲ, ಅನುಭವ ಮುಖ್ಯ. ಕೇಳಿದ್ದು, ಓದಿದ್ದು, ನಡೆದಿದ್ದ ಘಟನೆಗಳು ಆಗಿರಬಹುದು. ಇದನ್ನು ಆಧಾರವಾಗಿಟ್ಟುಕೊಂಡು ಕತೆ ರಚನೆಯಾಗುತ್ತದೆ. ಅನುಭವ ಇಲ್ಲದೇ ಸಾಹಿತ್ಯವಾಗಲ್ಲ. ಕೇವಲ ಅನುಭವ ಸಾಹಿತ್ಯವಲ್ಲ. ಕವಿಗೆ ಕಲ್ಪನೆ ಇರಬೇಕು. ಸಾಹಿತ್ಯಕ್ಕೆ ಅನುಭವ ಮತ್ತು ಕಲ್ಪನೆ ಬೇಕು. ಕೆಲ ಕತೆಗಳು ತಾರ್ಕಿಕ ವಾಗಿದ್ದರೂ, ಅತಾರ್ಕಿಕವಾಗಿರುತ್ತವೆ. ತರ್ಕವನ್ನು ಮೀರಿದ ಕತೆಗಳೂ ರಚನೆಯಾಗಿವೆ. ಕತೆ ಅರ್ಥ ಮಾಡಿಕೊಳ್ಳಲೂ ಅನುಭವ ಬೇಕು ಎಂದರು.
ಪುಸ್ತಕಗಳ ಬಿಡುಗಡೆ
ಎಚ್.ದುಂಡಿರಾಜ್ ಅವರ ಕರೆಗಳು ಸಾರ್ ಕರೆಗಳು ಲಘುಧಾಟಿಯ ಲೇಖನಗಳು, ಜಿ.ಪಿ.ಬಸವರಾಜು ಅವರ ಕೊಳ್ಳದ ಹಾದಿ ಕಲೆಗಳು, ವಿಕ್ರಮ ಹತ್ವಾರ ಅವರ ಹಮಾರಾ ಬಜಾಜ್, ರಾಜು ಹೆಗೆಡೆ ಅವರ ಜಾಂಬ್ಳಿ ಟುವಾಲು ಪುಸ್ತಕಗಳನ್ನು ಕವಿ ಜಯಂತ್ ಕಾಯ್ಕಿಣಿ ಬಿಡುಗಡೆ ಮಾಡಿದರು.







