21 ವರ್ಷಗಳಿಂದ ದೇಶದ ಗಡಿ ರಕ್ಷಿಸಿದ ನಾನು ನಿಜವಾದ ಚೌಕೀದಾರ: ಮಾಜಿ ಯೋಧ ತೇಜ್ ಬಹದ್ದೂರ್
ಮೋದಿ ವಿರುದ್ಧ ಎಸ್ಪಿ ಅಭ್ಯರ್ಥಿಯಾಗಿ ಕಣಕ್ಕೆ

ಹೊಸದಿಲ್ಲಿ, ಎ.29: ಯೋಧರಿಗೆ ನೀಡಲಾಗುತ್ತಿದ್ದ ಆಹಾರದ ಗುಣಮಟ್ಟದ ಬಗ್ಗೆ ಆರೋಪಿಸಿ ಸುದ್ದಿಯಾಗಿದ್ದ ತೇಜ್ ಬಹದ್ದೂರ್ ಯಾದವ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು , “ನಾನು ನಿಜವಾದ ಚೌಕೀದಾರ’ ಎಂದಿದ್ದಾರೆ.
“21 ವರ್ಷಗಳಿಂದ ದೇಶದ ಗಡಿಯನ್ನು ರಕ್ಷಿಸಿದ, ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿದ ನಾನು ನಿಜವಾದ ಚೌಕೀದಾರ. ಪ್ರಧಾನಿ ಮೋದಿಯವರಿಗೆ ಚೌಕೀದಾರ ಪದ ಸೂಕ್ತವಲ್ಲ” ಎಂದವರು ಹೇಳಿದರು.
“ಪ್ರಧಾನಿ ಮೋದಿಗೆ ಕನ್ನಡಿಯನ್ನು ತೋರಿಸುವ ಸಲುವಾಗಿ ನಾನು ಪ್ರಚಾರದಲ್ಲಿದ್ದೇನೆ. ಯೋಧರ ಹಿತಕಾಯುವವರು ಎಂದು ಹೇಳಿಕೊಳ್ಳುವ ಪ್ರಧಾನಿ ಯೋಧರಿಗೆ ನೀಡಿದ್ದ ಯಾವುದೇ ಭರವಸೆ ಈಡೇರಿಸಿಲ್ಲ. ಈ ವಾಸ್ತವ ತಿಳಿದ ನಂತರ ಜನರು ನನ್ನನ್ನು ಬೆಂಬಲಿಸುತ್ತಾರೆ” ಎಂದವರು ಹೇಳಿದರು.
ಸುಮಾರು 10 ಸಾವಿರ ಮಾಜಿ ಸೈನಿಕರು ತನಗೆ ಬೆಂಬಲ ನೀಡಲಿದ್ದಾರೆ. ಮನೆಮನೆಗೆ ಭೇಟಿ ಮೂಲಕ ತನ್ನ ಪರ ಪ್ರಚಾರ ನಡೆಸಲಿದ್ದಾರೆ ಎಂದವರು ಹೇಳಿದರು.
Next Story